ಬಸ್ ದರ ಹೆಚ್ಚಳ ಖಂಡಿಸಿ ಬಿಜೆಪಿ ಪ್ರತಿಭಟನೆ: ಬಹಳ ಒಳ್ಳೆಯ ಕೆಲಸ ಎಂದ ಸಾರಿಗೆ ಸಚಿವರು
ಬೆಂಗಳೂರು, ಜನವರಿ 03: ಹೊಸ ವರ್ಷದ ಸಂಭ್ರಮದಲ್ಲಿರುವ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ದಿಢೀರ್ ಶಾಕ್ ಕೊಟ್ಟಿದೆ. ಒಂದೆಡೆ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿರುವ ಸರ್ಕಾರ ಇನ್ನೊಂದೆಡೆ ಸಾರಿಗೆ ಬಸ್ಗಳ ದರ ಹೆಚ್ಚಳ ಮಾಡಿ ಬೆಲೆ ಏರಿಕೆಯ ಬರೆ ಎಳೆದಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ರೀತಿಯ ಸಾರಿಗೆ ಬಸ್ಗಳ ದರ ಹೆಚ್ಚಳ ಮಾಡಿದ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ಬಸ್ ದರ ಹೆಚ್ಚಳ ಖಂಡಿಸಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ. ಬಸ್ ದರ ಹೆಚ್ಚಳ ಖಂಡಿಸಿ, ಬಿಜೆಪಿಯವರು ಪ್ರತಿಭಟನೆ ಮಾಡಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಜನರನ್ನು ಹಾಗೂ ಅಭಿವೃದ್ಧಿಯನ್ನು ಮರೆತಿದ್ದರು ಎಂದು ವ್ಯಂಗ್ಯ ಮಾಡಿದರು.

ಕೇಂದ್ರ ಸರ್ಕಾರದಲ್ಲಿರುವ ಬಿಜೆಪಿ ಡಾಲರ್ ಬೆಲೆ ಕಡಿಮೆಯಾದರೂ ಪೆಟ್ರೋಲ್ ಡೀಸೆಲ್ ಬೆಲೆ ಕಳೆದ 9 ವರ್ಷಗಳಿಂದ ಕಡಿಮೆ ಮಾಡಿಲ್ಲ.
ಹಾಗೂ ಇದೇ ಬಿಜೆಪಿ ತಾನು ಆಡಳಿತದಲ್ಲಿದ್ದಾಗ 2020ರಲ್ಲಿ ಬಸ್ ದರ ಹೆಚ್ಚಳ ಮಾಡಿದ್ದರು. ಆಗ ಅವರಿಗೆ ಜನರ ತೊಂದರೆ ತಿಳಿಯಲಿಲ್ಲವೇ?
ಬಡಜನರ ಗ್ಯಾಸ್ ಸಬ್ಸಿಡಿಯನ್ನು ನಿಲ್ಲಿಸಿದರು. ಆಗ ಬಿಜೆಪಿ ಅವರಿಗೆ ಜನರ ಕಷ್ಟ ತಿಳಿಯಲಿಲ್ಲವೆ? ಎಂದು ಪ್ರಶ್ನಿಸಿದರು.
ಅಧಿಕಾರದಲ್ಲಿದ್ದಾಗ ಒಳ್ಳೆ ಆಡಳಿತ ನೀಡಿ ನಾಲ್ಕು ನಿಗಮಗಳನ್ನು ಅಭಿವೃದ್ಧಿ ಮಾಡಲು ಪ್ರಯತ್ನಿಸಿದ್ದರೆ, ಈ ತೊಂದರೆ ನಮಗೆ ಬರುತ್ತಿರಲಿಲ್ಲ.
ಸಮಯಕ್ಕೆ ತಕ್ಕನಾಗಿ ಬಸ್ ಖರೀದಿ ವೇತನ ಪರಿಷ್ಕರಣೆ, ನೇಮಕಾತಿ ಸೇರಿದಂತೆ ಎಲ್ಲವನ್ನೂ ಸಮಯ ತಕ್ಕನಾಗಿ ಮಾಡಿದರೆ ಇವಾಗ ಈ ಪರಿಸ್ಥಿತಿ ಬರುತ್ತಿರಲಿಲ್ಲ.

ಬಿಜೆಪಿಯವರು ಮಾಡಿರುವ ಆಡಳಿತ ಲೋಪದಿಂದ ಈಗ ನಮ್ಮ ತಲೆ ಮೇಲೆ ₹5,900 ಕೋಟಿ ಸಾಲ ಇಟ್ಟು ಹೋಗಿದ್ದಾರೆ. ಅವರಿಗೆ ಮುಂಚೆನೇ ತಿಳಿದಿತ್ತೋ ಏನೋ 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ತಿಳಿದು ಈ ರೀತಿಯ ಎಲ್ಲಾ ಕೆಟ್ಟ ಆಡಳಿತ ನಡೆಸಿ ನಮ್ಮ ತಲೆ ಮೇಲೆ ಕಟ್ಟಿದರು ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ನಾನು ಸಾರ್ವಜನಿಕರ ಗಮನ ಸೆಳೆಯಲು ಇಚ್ಛಿಸುತ್ತೇನೆ. ನಾವು ಬಸ್ ದರ ಹೆಚ್ಚಿಸಿರುವುದು ಎಲ್ಲದಕ್ಕಿಂತ ಕಡಿಮೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನೋಡಿದರೆ ನಮ್ಮ ರಾಜ್ಯದಲ್ಲೇ ಕಡಿಮೆ ಇದೆ. ಹಾಗೂ ಉತ್ತಮ ಸಾರಿಗೆ ವ್ಯವಸ್ಥೆ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ನಂಬರ್ 1. ಈಗಲಾದರೂ ಬಿಜೆಪಿಯವರು ಕೇವಲ ಸುಳ್ಳು ಹೇಳಿ ತನ್ನ ಟ್ವಿಟ್ಟರ್, ಫೇಕ್ ವಾಟ್ಸಪ್ ಸೋಷಿಯಲ್ ಮೀಡಿಯಾ ಯುನಿವರ್ಸಿಟಿಯಿಂದ ಜನರ ದಾರಿ ತಪ್ಪಿಸುವುದನ್ನು ಬಿಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆಗ್ರಹಿಸಿದ್ದಾರೆ.












Click it and Unblock the Notifications