ಜೆಡಿಎಸ್ ಭದ್ರ ಕೋಟೆಯಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿಯ ಕಲರವ
ಭರ್ಜರಿ ಪೂರ್ವತಯಾರಿ ಮಾಡಿಕೊಂಡು ನವೆಂಬರ್ ಎರಡರಂದು ಬೆಂಗಳೂರಿನಲ್ಲಿ ಚಾಲನೆ ಪಡೆದುಕೊಂಡ ಬಿಜೆಪಿಯ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ'ಯ ಉದ್ಘಾಟನಾ ರ್ಯಾಲಿ ವ್ಯವಸ್ಥಿತವಾಗಿ ವೈಫಲ್ಯಗೊಂಡ ನಂತರದ ಯಾತ್ರೆ, ಪಕ್ಷದ ನಿರೀಕ್ಷೆಗೂ ಮೀರಿ ಯಶಸ್ಸನ್ನು ಪಡೆದುಕೊಳ್ಳುತ್ತಿದೆ.
ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ
ಪ್ರಮುಖವಾಗಿ ಜೆಡಿಎಸ್ ಭದ್ರಕೋಟೆಯೆಂದೇ ಕರೆಯಲಾಗುವ ತುಮಕೂರು (ಕೆಲವು ತಾಲೂಕುಗಳನ್ನು ಹೊರತುಪಡಿಸಿ) ಮತ್ತು ಹಾಸನ ಜಿಲ್ಲೆಗಳಲ್ಲಿ ಬಿಜೆಪಿ ಸಮಾವೇಶಕ್ಕೆ ಉತ್ತಮ ಜನಸ್ಪಂದನೆ ವ್ಯಕ್ತವಾಗಿದೆ. ಯಾತ್ರೆಯ ಮೊದಲನೇ ಮತ್ತು ಎರಡನೇ ದಿನ ಅಲ್ಲಲ್ಲಿ ಕಲ್ಲು, ತೆಂಗಿನಕಾಯಿ ತೂರಿದ ಘಟನೆಯನ್ನು ಹೊರತು ಪಡಿಸಿದರೆ, ಇದುವರೆಗಿನ ಆರುದಿನಗಳ ಪಕ್ಷದ ಯಾತ್ರೆ ಬಿಜೆಪಿಗೆ ಹೊಸ ಚೈತನ್ಯ ತಂದುಕೊಡುತ್ತಿರುವುದಂತೂ ಹೌದು.
ಎಲ್ಲಾ ಪಕ್ಷಗಳು ಸಮಾವೇಶಕ್ಕೆ ಜನರನ್ನು ಕರೆತರಲು ಆಮಿಷವೊಡ್ದುವುದು ಗೊತ್ತಿರುವ ಸಂಗತಿಯಾಗಿರುವುದರಿಂದ, ಬಿಜೆಪಿಯ ಸಮಾವೇಶದಲ್ಲಿ ಹಣ, ಸೀರೆ ಹಂಚಲಾಗಿದೆ ಎನ್ನುವ ಸುದ್ದಿಗೆ ಪಕ್ಷದ ಮುಖಂಡರು ಹೆಚ್ಚು ತಲೆಕೆಡಿಸಿಕೊಳ್ಳದೇ, ತಮ್ಮಲ್ಲಿರುವ ಗೊಂದಲಗಳಿಗೆ ತೇಪೆಹಾಕುತ್ತಾ ಸಾಗುತ್ತಿರುವುದರಿಂದ, ದಿನದಿಂದ ದಿನಕ್ಕೆ ಯಾತ್ರೆ ಯಶಸ್ವಿಯಾಗಿ ಮುಂದಕ್ಕೆ ಸಾಗುತ್ತಿದೆ.
ಜೆಡಿಎಸ್ ಭದ್ರಕೋಟೆಯೆಂದೇ ಗುರುತಿಸಲ್ಪಡುವ ತುಮಕೂರು ಜಿಲ್ಲೆಯ ಕೆಲವು ತಾಲೂಕು ಮತ್ತು ಹಾಸನ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿರುವುದು, ಸದ್ಯದ ಮಟ್ಟಿಗೆ ಬಿಜೆಪಿಗೆ ಸಿಕ್ಕ ಪ್ಲಸ್ ಪಾಯಿಂಟ್.
ಎಚ್ ಡಿ ದೇವೇಗೌಡರ ರಾಜಕೀಯ ಕರ್ಮಭೂಮಿ ಹಾಸನದ ಅರಸೀಕೆರೆ, ಬೇಲೂರು, ಹೊಳೇನರಸೀಪುರ, ಸಕಲೇಶಪುರ ಮತ್ತು ಹಾಸನ ನಗರದಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಮುಂದೆ ಓದಿ..

ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾವೇಶ
ಪ್ರಮುಖವಾಗಿ ಮಂಗಳವಾರ (ನ 7) ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾವೇಶಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಂತರ ಬೃಹತ್ ಬಹಿರಂಗಸಭೆಯನ್ನು ಉದ್ದೇಶಿಸಿ ಮಾತನಾಡಿ, ಜೆಡಿಎಸ್ ಶಾಸಕರುಗಳು, ಕಾಂಗ್ರೆಸ್ ಸರ್ಕಾರ ಹಾಸನ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಬಿಎಸ್ವೈ ವಾಗ್ದಾಳಿ ನಡೆಸಿದರು. ಬಿಜೆಪಿ ರಾಜ್ಯ ಪ್ರಮುಖ ಮುಖಂಡರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಅರಸೀಕೆರೆಯಲ್ಲಿ ನಡೆದ ಸಮಾವೇಶ
ಅರಸೀಕೆರೆಯಲ್ಲಿ ಭಾರೀ ಮಳೆಯ ನಡುವೆಯೂ ಜನರು ಯಡಿಯೂರಪ್ಪನವರ ಭಾಷಣವನ್ನು ಕೇಳಲು ಕಾಯುತ್ತಿದ್ದದ್ದು ವಿಶೇಷವಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬೈಕ್ ಜಾಥಾದ ಮೂಲಕ ಯಡಿಯೂರಪ್ಪನವರನ್ನು ಬರಮಾಡಿಕೊಂಡರು. ಹಲವು ಬಿಜೆಪಿ ಮುಖಂಡರು ಸಮಾವೇಶದಲ್ಲಿ ಭಾಗವಹಿಸಿದ್ದರು. ಯಾತ್ರೆಗೆ ಸಿಗುತ್ತಿರುವ ಜನಬೆಂಬಲ ನೋಡಿ, ಕಾಂಗ್ರೆಸ್ಸಿಗೆ ಭೀತಿ ಹೆಚ್ಚಾಗುತ್ತಿದೆ ಎಂದು ಯಡಿಯೂರಪ್ಪ, ಸಿದ್ದರಾಮಯ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಚನ್ನರಾಯಪಟ್ಟಣದಲ್ಲಿ ನಡೆದ ಸಮಾವೇಶ
ಚನ್ನರಾಯಪಟ್ಟಣದಲ್ಲಿ ನಡೆದ ಸಮಾವೇಶಕ್ಕೂ ಉತ್ತಮ ರೆಸ್ಪಾನ್ಸ್ ಬಿಜೆಪಿಗೆ ಸಿಕ್ಕಿದೆ. ಸಾಂಪ್ರದಾಯಿಕ ಪೂರ್ಣ ಕುಂಭ ಸ್ವಾಗತ ಸ್ವೀಕರಿಸಿ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಯಡಿಯೂರಪ್ಪ ಮಾಡಿದ ಭಾಷಣವನ್ನು ಆಲಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಸಿ ಟಿ ರವಿ, ಆರ್ ಅಶೋಕ್, ಶೋಭಾ ಕರಂದ್ಲಾಜೆ, ಈಶ್ವರಪ್ಪ, ತೇಜಸ್ವಿನಿ, ನೆ.ಲ.ನರೇಂದ್ರ ಬಾಬು, ಸೋಮಣ್ಣ ಮುಂತಾದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು. ಈ ಸಭೆಯಲ್ಲಿ ತಾಲೂಕಿನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ತೆಂಗಿನ ಮರಗಳು ನಾಶವಾಗುತ್ತಿರುವ ಬಗ್ಗೆ, ಯಡಿಯೂರಪ್ಪ ಉಲ್ಲೇಖಿಸಿದರು. ಜೊತೆಗೆ, ಅಧಿಕಾರಕ್ಕೆ ಬಂದರೆ ಕಬ್ಬು ಬೆಳೆಗಾರರಿಗೆ ಅನುಕೂಲವಾಗುವಂತೆ ಮುಚ್ಚಿರುವ ಹೇಮಾವತಿ ಸಕ್ಕರೆ ಕಾರ್ಖಾನೆಯನ್ನು ತೆರೆಯುವ ಭರವಸೆ ನೀಡಿದರು.

ಸಕಲೇಶಪುರದಲ್ಲಿ ನಡೆದ ಸಮಾವೇಶಕ್ಕೂ ಭಾರೀ ಸಂಖ್ಯೆಯಲ್ಲಿ ಜನ
ಸಕಲೇಶಪುರದಲ್ಲಿ ನಡೆದ ಸಮಾವೇಶಕ್ಕೂ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಕ್ಷೇತ್ರದಲ್ಲಿನ ಆನೆ ಹಾವಳಿಯಂತಹ ಗಂಭೀರ ಸಮಸ್ಯೆಗಳನ್ನು ಉಲ್ಲೇಖಿಸಿ ಸರಕಾರವನ್ನು ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡರು. ಈ ಸಮಾವೇಶದಲ್ಲೂ ಬಿಜೆಪಿ ಮುಖಂಡರು ಒಗ್ಗಟ್ಟುತನ ಪ್ರದರ್ಶಿಸಿದರು. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮುಖಂಡರುಗಳಾದ ಶೋಭಾ ಕರಂದ್ಲಾಜೆ, ಶ್ರೀರಾಮುಲು ಸೋಮಣ್ಣ ಮುಂತಾದವರು ಪಾಲ್ಗೊಂಡಿದ್ದಾರೆ.

ಹೊಳೆನರಸೀಪುರದಲ್ಲೂ ಉತ್ತಮ ಪ್ರತಿಕ್ರಿಯೆ
ಬಿಜೆಪಿಯ ಪರಿವರ್ತನಾ ಯಾತ್ರೆಗೆ ಎಚ್ ಡಿ ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾತ್ರೆ ಹೊಳೆನರಸೀಪುರವನ್ನು ತಲುಪಿದಾಗ ಕತ್ತಲು ಕವಿದಿತ್ತು. ಆದರೂ ಯಡಿಯೂರಪ್ಪನವರ ಭಾಷಣವನ್ನು ಕೇಳಲು ಬೃಹತ್ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಮುಖಂಡರುಗಳಾದ ಶೋಭಾ ಕರಂದ್ಲಾಜೆ, ಶ್ರೀರಾಮುಲು, ಸೋಮಣ್ಣ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications