ಆಪರೇಷನ್ ಕಮಲ : ಸ್ಫೋಟಕ ಸುದ್ದಿ ಹೇಳಿದ ಕಾಂಗ್ರೆಸ್ ಶಾಸಕ
ಬೆಂಗಳೂರು, ನವೆಂಬರ್ 07 : ಕರ್ನಾಟಕ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆಯೇ?. ಹೌದು, 'ಬಿಜೆಪಿಗೆ ಸೇರಲು ನನಗೆ 50 ಕೋಟಿ ಹಣದ ಆಮಿಷ ಒಡ್ಡಲಾಗಿತ್ತು' ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಬುಧವಾರ ಟಿ.ಡಿ.ರಾಜೇಗೌಡ ಅವರು ಹಾಸನದಲ್ಲಿ ಹಾಸನಾಂಬೆ ದೇವಿಯ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, 'ಸಂಬಂಧಿಕರ ಮೂಲಕ ತಮ್ಮನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿತ್ತು' ಎಂದು ಮಾಹಿತಿ ನೀಡಿದರು.
'ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ನನ್ನ ಸಂಬಂಧಿಕರು ಮತ್ತು ನಾರ್ವೆ ಸೋಮಶೇಖರ ಅವರ ಮೂಲಕ ಬಿಜೆಪಿಗೆ ಸೆಳೆಯಲು ಪ್ರಯತ್ನ ನಡೆಸಿದ್ದರು. 50 ಕೋಟಿ ರೂ. ಹಣ, ಮಂತ್ರಿ ಸ್ಥಾನದ ಆಫರ್ ನೀಡಿದ್ದರು' ಎಂದು ಆರೋಪಿಸಿದರು.

'ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಹಾಗಾಗಿ ಅವರ ಯಾವುದೇ ಆಮಿಷಕ್ಕೆ ಬಲಿಯಾಗಿಲ್ಲ. ಅವರು 100 ಕೋಟಿ ಹಣ ನೀಡಲು ಸಿದ್ಧರಿದ್ದರು' ಎಂದು ಟಿ.ಡಿ.ರಾಜೇಗೌಡ ಅವರು ಹೇಳಿದರು.
'ಸರ್ಕಾರ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಒಂದು ವರ್ಷದ ಕಾಲಾವಕಾಶ ಬೇಕಾಗಿದೆ. ಐದು ವರ್ಷ ಅವಕಾಶ ಸಿಕ್ಕರೆ ರಾಜ್ಯ ಪ್ರಗತಿಯಾಗಲಿದೆ' ಎಂದು ರಾಜೇಗೌಡ ಅವರು ತಿಳಿಸಿದರು.












Click it and Unblock the Notifications