ಬಿಜೆಪಿಯ ಪರಿವರ್ತನಾ ಯಾತ್ರೆ : ಕಾಂಗ್ರೆಸ್ಸಿಗೆ ಆಗುವ 5 ಲಾಭಗಳು!
Recommended Video

ಬೆಂಗಳೂರು, ನವೆಂಬರ್ 10 : ಕರ್ನಾಟಕ ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಆರು ದಿನಗಳನ್ನು ಪೂರೈಸಿದೆ. ದಕ್ಷಿಣ ಕನ್ನಡದ ಸುಳ್ಯದಿಂದ 7ನೇ ದಿನದ ಯಾತ್ರೆ ಶುಕ್ರವಾರ ಆರಂಭವಾಗಲಿದೆ.
ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಬಿಜೆಪಿ ನಾಯಕರು ರಾಜ್ಯ ಪ್ರವಾಸ ಮಾಡಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು 2018ರ ಚುನಾವಣೆ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.
'ಬಿಜೆಪಿ ನಾಯಕರು ಮಾಡುತ್ತಿರುವುದು ಪರಿವರ್ತನಾ ಯಾತ್ರೆ ಅಲ್ಲ, ಪಶ್ಚಾತ್ತಾಪದ ನಾಟಕ ಯಾತ್ರೆ. ಮಾಡಿದ ಪಾಪ ಅವರನ್ನು ಕೊರೆಯುತ್ತಿದೆ. ಅದಕ್ಕಾಗಿ ಪ್ರಾಯಶ್ಚಿತ್ತದ ನಾಟಕ ಮಾಡುತ್ತಿದ್ದಾರೆ' ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯಾತ್ರೆಯವನ್ನು ವ್ಯಂಗ್ಯವಾಡಿದ್ದಾರೆ.
ನವೆಂಬರ್ 2ರಂದು ಆರಂಭವಾದ ಬಿಜೆಪಿಯ ಪರಿವರ್ತನಾ ಯಾತ್ರೆ 75 ದಿನಗಳ ಕಾಲ ನಡೆಯಲಿದೆ. ಆಡಳಿತಾರೂಢ ಕಾಂಗ್ರೆಸ್ 'ಮನೆ-ಮನೆಗೆ ಕಾಂಗ್ರೆಸ್' ಎಂಬ ಅಭಿಯಾನ ನಡೆಸುತ್ತಿದೆ. ಅತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ 'ಕುಮಾರಪರ್ವ' ಎಂಬ ಹೆಸರಿನಲ್ಲಿ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಬಿಜೆಪಿ ಯಾತ್ರೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆಗುವ ಲಾಭಗಳೇನು? ಚಿತ್ರಗಳಲ್ಲಿ ನೋಡಿ....
ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

ಚುನಾವಣೆ ಘೋಷಣೆಗೂ ಮೊದಲೇ ಯಾತ್ರೆ
2018ರ ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದೆ. ಅದಕ್ಕೂ ಮೊದಲೇ ಬಿಜೆಪಿ 75 ದಿನಗಳ ರಾಜ್ಯ ಪ್ರವಾಸ ನಡೆಸುತ್ತಿದೆ. ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಪ್ರವಾಸ ಕೈಗೊಳ್ಳುವುದರಿಂದ ಜನರು ಸಹ ಮರೆತು ಬಿಡಬಹುದು. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಆಗುವ ಲಾಭವೇ ಹೆಚ್ಚು. ಕಾಂಗ್ರೆಸ್ ಡಿಸೆಂಬರ್ನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶ ಆಯೋಜನೆ ಮಾಡುತ್ತಿದೆ.

ಭ್ರಷ್ಟಾಚಾರದ ಆರೋಪಗಳು
ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸಿದಾಗ ಮೂವರು ಮುಖ್ಯಮಂತ್ರಿಗಳಾದರು. ಸಚಿವರ ವಿರುದ್ಧ, ಸ್ವತಃ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ಈಗ ಪುನಃ ಬಿಜೆಪಿ ನಾಯಕರು ಜನರ ಮುಂದೆ ಹೋಗಿದ್ದಾರೆ. ಕಾಂಗ್ರೆಸ್ ಬಿಜೆಪಿ ಭ್ರಷ್ಟಾಚಾರವನ್ನೇ ಚುನಾವಣಾ ಅಸ್ತ್ರವಾಗಿ ಮಾಡಿಕೊಳ್ಳುವುದರಿಂದ ಬಿಜೆಪಿ ಯಾತ್ರೆಯ ಲಾಭ ಆಗುವುದು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು.

ಸಿದ್ದರಾಮಯ್ಯ ಜನಪ್ರಿಯತೆ
ಪ್ರತಿಪಕ್ಷ ಬಿಜೆಪಿ ಎಷ್ಟು ಆರೋಪಗಳನ್ನು ಬೇಕಾದರೂ ಮಾಡಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸು ನಾಲ್ಕು ವರ್ಷಗಳಲ್ಲಿ ಹೆಚ್ಚಾಗಿದೆ ಎಂಬುದನ್ನು ಬಿಜೆಪಿ ನಾಯಕರು ಒಪ್ಪಬೇಕು. ಹಲವಾರು ಭಾಗ್ಯಗಳನ್ನು ಜಾರಿಗೆ ತಂದಿರುವ ಸಿದ್ದರಾಮಯ್ಯ ಅವರು ಹಂತ-ಹಂತವಾಗಿ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ. ಬಿಜೆಪಿ ನಾಯಕರ ಯಾತ್ರೆ ಸಿದ್ದರಾಮಯ್ಯ ಅವರ ಜನಪ್ರಿಯತೆ ಮುಂದೆ ಮುಂಕಾಗಲಿದೆ ಎಂಬುದು ರಾಜಕೀಯ ತಜ್ಞರ ಅಭಿಮತ.

ಬಿಜೆಪಿಯೊಳಗಿನ ಅಸಮಾಧಾನ
ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿಲ್ಲ ಎಂಬುದು ಬಹಿರಂಗ ಸತ್ಯ. ತುರುವೇಕೆರೆ, ತುಮಕೂರು ಭಾಗದಲ್ಲಿ ಪರಿವರ್ತನಾ ಯಾತ್ರೆಯ ವೇಳೆಯೇ ಗೊಂದಲ ಉಂಟಾಗಿತ್ತು. ಪಕ್ಷದೊಳಗೆ ಭಿನ್ನಮತ ಇಟ್ಟುಕೊಂಡು ಬಿಜೆಪಿ ಯಾತ್ರೆ ಮಾಡಿದರೆ ಅದರ ಲಾಭ ಕಾಂಗ್ರೆಸ್ ಪಕ್ಷಕ್ಕೆ ಆಗುತ್ತದೆ. ಯಡಿಯೂರಪ್ಪ ಅವರು ಯಾತ್ರೆ ಸಂದರ್ಭದಲ್ಲಿ ಮುಂದಿನ ಚುನಾವಣೆ ಅಭ್ಯರ್ಥಿ ಘೋಷಣೆ ಮಾಡಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಮೋದಿ, ಶಾ ಅಲೆ ಓಟು ತರುತ್ತಾ?
ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ ಮತ ಕೇಳುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರ ವರ್ಚಸ್ಸು ಹೇಗೆ ಕೆಲಸ ಮಾಡುತ್ತದೆ? ಎಂದು ಕಾದು ನೋಡಬೇಕು. ಯಾತ್ರೆಯ ತುಂಬಾ ಮೋದಿ ಹೆಸರು ಹೇಳುತ್ತಾ ಹೋದರೆ ಜನ ಬೆಂಬಲ ಸಿಗುವುದಿಲ್ಲ ಎಂಬ ಮಾತುಗಳಿವೆ.












Click it and Unblock the Notifications