ಕಾಂಗ್ರೆಸ್ ನಾಯಕರು ಜಾಮೀನಿನಲ್ಲಿದ್ದಾರೆ; ಜೆಡಿಎಸ್ ಕೂಡ ಭ್ರಷ್ಟರ ಪಕ್ಷ: ಜೆ.ಪಿ ನಡ್ಡಾ ವಾಗ್ದಾಳಿ
ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ.ಪಿ ನಡ್ಡಾ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಬೆಂಗಳೂರು,ಮಾರ್ಚ್ 9: ಕಾಂಗ್ರೆಸ್ ನಾಯಕರು ಜಾಮೀನಿನಲ್ಲಿದ್ದಾರೆ. ಜೆಡಿಎಸ್ ಕೂಡ ಭ್ರಷ್ಟರ ಪಕ್ಷ. ಇವು ಭಾಯಿ ಭಾಯಿ ಪಕ್ಷಗಳು. ಜೆಡಿಎಸ್ಗೆ ಮತ ಕೊಟ್ಟರೆ ಅದು ಕಾಂಗ್ರೆಸ್ಗೆ ಮತ ಕೊಟ್ಟಂತೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಕೆ.ಆರ್.ಪುರಂ ನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಪಿಎಫ್ಐ ನಾಯಕರನ್ನು ಕಾಂಗ್ರೆಸ್ ಬೆಂಬಲಿಸಿ ಅವರ ಕೇಸುಗಳನ್ನು ರದ್ದು ಮಾಡಿತ್ತು. ಆದರೆ, ಬಿಜೆಪಿ ಪಿಎಫ್ಐ ನಿಷೇಧಿಸಿದೆ. ಕರ್ನಾಟಕದ ಸಮಗ್ರ ಅಭಿವೃದ್ಧಿ ಕೇವಲ ಬಿಜೆಪಿಯಿಂದ ಸಾಧ್ಯ. ದೇಶ ವಿರೋಧಿ ಕಾಂಗ್ರೆಸ್ಸಿಗರನ್ನು ಮನೆಯಲ್ಲೇ ಕೂರಿಸಿ ಎಂದು ಹೇಳಿದರು.

ದೇಶದ 2ನೇ ದೊಡ್ಡ ಅರ್ಥ ವ್ಯವಸ್ಥೆಯಾಗಿ ಕರ್ನಾಟಕ ಹೊರಹೊಮ್ಮಿದೆ. ರೈತ ವಿದ್ಯಾನಿಧಿ ಮೂಲಕ 10 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. ರೈತರಿಗೆ ಸಾಲ, ಮೀಸಲಾತಿ ಹೆಚ್ಚಳ ಸೇರಿ ಸಮಗ್ರ ಅಭಿವೃದ್ಧಿಯ ಕಾರ್ಯವನ್ನು ಗಮನದಲ್ಲಿಟ್ಟು ಬಿಜೆಪಿಯನ್ನು ಬೆಂಬಲಿಸಿ, ಜೆಡಿಎಸ್- ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಭ್ರಷ್ಟಾಚಾರ, ಒಡೆದು ಆಳುವ ನೀತಿ, ಕಮಿಷನ್, ಜಾತಿ ರಾಜಕೀಯ ಮತ್ತು ಕುಟುಂಬ ರಾಜಕೀಯದ ಪಕ್ಷಗಳಿವು ಎಂದು ಟೀಕಿಸಿದರು.
ದೇಶದ ಸುರಕ್ಷತೆಗಾಗಿ ಮೋದಿಜಿ, ಯಡಿಯೂರಪ್ಪ- ಬೊಮ್ಮಾಯಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಅಭಿವೃದ್ಧಿಗೆ ಗರಿಷ್ಠ ಕೊಡುಗೆ ಕೊಟ್ಟಿದ್ದಾರೆ. ಕೋವಿಡ್ ಕಾಲದಲ್ಲಿ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಅನೇಕ ದೇಶಗಳು ಸಂಕಷ್ಟದಲ್ಲಿ ಸಿಲುಕಿದವು. ಆದರೆ, ಭಾರತವು ಮೋದಿಜಿ ಅವರ ನೇತೃತ್ವದಲ್ಲಿ ಆರ್ಥಿಕ ಕ್ಷೇತ್ರ ಮತ್ತು ಅಭಿವೃದ್ಧಿಯಲ್ಲಿ ಸಾಧನೆ ಮಾಡಿದೆ ಎಂದರು.

ಮೋದಿಜಿ ಅವರನ್ನು ವಿರೋಧಿಸುವ ಚಿಂತನೆಯೊಂದಿಗೆ ಕಾಂಗ್ರೆಸ್ಸಿಗರು ದೇಶ ವಿರೋಧಿಗಳಾಗಿದ್ದಾರೆ. ರಷ್ಯಾ, ಇಟೆಲಿ, ಬ್ರಿಟನ್ ಸೇರಿ ಇತರೆಡೆ ಹಣದುಬ್ಬರ ಗರಿಷ್ಠ ಮಟ್ಟದಲ್ಲಿದೆ. ಆದರೆ, ಭಾರತದಲ್ಲಿ ಅದು ಕನಿಷ್ಠ ಮಟ್ಟದಲ್ಲಿದೆ. ಭಾರತವು ಜಗದ್ವಂದ್ಯ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಬೆಂಗಳೂರು ಗರಿಷ್ಠ ಬೆಳವಣಿಗೆ ಸಾಧಿಸುವ ನಗರವಾಗಿ ಹೊರಹೊಮ್ಮಿದೆ.2014ರಲ್ಲಿ ಭಾರತವು ಗರಿಷ್ಠ ಮೊಬೈಲ್ಗಳನ್ನು ವಿದೇಶದಿಂದ ಖರೀದಿಸುತ್ತಿತ್ತು. ಈಗ ಶೇ 97ರಷ್ಟು ಮೊಬೈಲ್ಗಳನ್ನು ಆಂತರಿಕವಾಗಿ ಉತ್ಪಾದಿಸುತ್ತಿದೆ. ಡಿಜಿಟಲ್ ವ್ಯವಹಾರವೂ ಹೆಚ್ಚುತ್ತಲೇ ಸಾಗಿದೆ. ಕರ್ನಾಟಕದಲ್ಲಿ 11 ವಿಮಾನನಿಲ್ದಾಣಗಳು ನಿರ್ಮಾಣವಾಗುತ್ತಿವೆ. 9 ವರ್ಷಗಳಲ್ಲಿ 74 ವಿಮಾನನಿಲ್ದಾಣಗಳು ನಿರ್ಮಾಣವಾಗಿದೆ ಎಂದರು.
ರೈಲ್ವೆ ಬಜೆಟ್ ಮೊತ್ತ ಗಮನಾರ್ಹವಾಗಿ ಹೆಚ್ಚಾಗಿದೆ. ಹೈವೇ ನಿರ್ಮಾಣದ ವೇಗವೂ ಹೆಚ್ಚಾಗಿದೆ. ಅಭಿವೃದ್ಧಿಯ ವೇಗ ಹೆಚ್ಚಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಪ್ರಧಾನಿಯವರು ಶಿವಮೊಗ್ಗ ವಿಮಾನನಿಲ್ದಾಣ ಉದ್ಘಾಟಿಸಿದ್ದಾರೆ. 2 ಹೊಸ ರೈಲ್ವೆ ಯೋಜನೆಗೆ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದರು. ಬೆಳಗಾವಿಯಲ್ಲೂ 2700 ಕೋಟಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿದ್ದಾರೆ ಎಂದು ವಿವರಿಸಿದರು.
ಇನ್ನೂ ಈ ವೇಳೆ ರಾಜ್ಯದ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಮುನಿರತ್ನ, ಪಕ್ಷದ ಸಚಿವರು, ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ ರೆಡ್ಡಿ, ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ಅ.ದೇವೇಗೌಡ, ಮುಖಂಡ ಸಚ್ಚಿದಾನಂದ ಮೂರ್ತಿ, ಜಿಲ್ಲಾಧ್ಯಕ್ಷ ನಾರಾಯಣ, ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಸಿದ್ದರಾಜು, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.












Click it and Unblock the Notifications