ಮೆಕ್ಕಾ, ಮದೀನಾಗೆ ಹೋದರೆ ಸ್ವರ್ಗ ಸಿಗುತ್ತಾ: ಮಲ್ಲಿಕಾರ್ಜುನ್ ಖರ್ಗೆ ತಿರುಗೇಟು ಕೊಟ್ಟ ರವಿಕುಮಾರ್
ಬೆಂಗಳೂರು, ಜನವರಿ 28: ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ಮಲ್ಲಿಕಾರ್ಜುನ ಖರ್ಗೆ ಲೇವಡಿ ವಿಚಾರದ ಕುರಿತು ಮಾತನಾಡಿದ ವಿಧಾನ್ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಲ್ಲಿಕಾರ್ಜುನ್ ಖರ್ಗೆಗೆ ಟಾಂಗ್ ನೀಡಿದ್ದಾರೆ.
ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಳಿ ನಡೆಸಿದ್ದರು. ಈ ಹೇಳಿಕೆಗೆ ಟಾಂಗ್ ನೀಡಿದ ಎನ್. ರವಿಕುಮಾರ್ , ಮಲ್ಲಿಕಾರ್ಜುನ್ ಖರ್ಗೆ ಅವರು ಹಿಂದೂ ಧರ್ಮದ ಬಗ್ಗೆ ಮಾತನಾಡುವುದು ಸರಿಯಲ್ಲ. ಹಾಗಾದರೇ ಮೆಕ್ಕಾ, ಮದೀನಾಗೆ ಹೋದರೆ ಸ್ವರ್ಗ ಸಿಕ್ಕಿಬಿಡುತ್ತೆ ಅಂತಾ ಹೇಳೋಕೆ ಖರ್ಗೆ ಅವರಿಗೆ ಧೈರ್ಯ ಇದೆಯಾ ಎಂದು ಪ್ರಶ್ನಿಸಿದರು.

ಮಲ್ಲಿಕಾರ್ಜುನ ಖರ್ಗೆಯವರು ಅಮಿತ್ ಶಾ ಅವರ ವಿರುದ್ಧ ವ್ಯಂಗ್ಯವಾಗಿ ಟೀಕಿಸಿದ್ದನ್ನು ಖಂಡಿಸಿದರು. ಹಿಂದೂ ಧರ್ಮ ಎಂದೊಡನೆ ಇಷ್ಟೊಂದು ಕನಿಷ್ಠವಾಗಿ ಮಾತನಾಡುವುದು ಸರಿಯಲ್ಲ. ಅಮಿತ್ ಶಾ ಅವರು ಮಹಾಕುಂಭ ಮೇಳಕ್ಕೆ ಹೋಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಮೆಕ್ಕಾ, ಮದೀನಾಕ್ಕೆ ಹೋದರೆ ಸ್ವರ್ಗ ಸಿಗುತ್ತದೆಯೇ? ಬಡತನ ಹೋಗುತ್ತದೆಯೇ ಎಂದು ಹೇಳುವ ಧೈರ್ಯ ಮಲ್ಲಿಕಾರ್ಜುನ ಖರ್ಗೆಯವರಿಗೆ ಇದೆಯೇ ಎಂದು ಪ್ರಶ್ನಿಸಿದರು.
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡುವುದು ಕಾಂಗ್ರೆಸ್ಸಿಗೆ ಅಭ್ಯಾಸ, ಹವ್ಯಾಸವಾಗಿದೆ. ಮಲ್ಲಿಕಾರ್ಜುನ ಖರ್ಗೆಯವರು ಕೂಡಲೇ ಕ್ಷಮೆ ಯಾಚಿಸಬೇಕು. ಕಾಂಗ್ರೆಸ್ಸಿನ ಅಖಿಲ ಭಾರತ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ್ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಗ್ರಹಿಸಿದರು.
ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಮೇಯರ್- ಉಪ ಮೇಯರ್ ಚುನಾವಣಾ ಪ್ರಕ್ರಿಯೆ ಮುಂದೂಡಿರುವುದು ಸರಿಯಲ್ಲ. ಮೇಯರ್, ಉಪ ಮೇಯರ್ ಚುನಾವಣೆಗೆ ನಾವು 24 ಜನ ಮತದಾನ ಮಾಡಿದ್ದೇವೆ. ಅವರು 22 ಜನ ಮತದಾನ ಮಾಡಿದ್ದಾರೆ. ಮೇಯರ್ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಂಡಿತ್ತು. ಉಪ ಮೇಯರ್ಗೆ ಚುನಾವಣೆ ವೇಳೆ ನಾವು 24 ಜನ ಕೈ ಎತ್ತಿದ್ದೆವು. ಸೋಲು ಖಚಿತವಾದುದನ್ನು ಮನಗಂಡು ಚುನಾವಣೆ ಮುಂದೂಡಲು ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದರು.
ಇದರ ವಿರುದ್ಧ ಇವತ್ತು ರಾಜ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಿ ನ್ಯಾಯ ಕೊಡಲು ಮನವಿ ಸಲ್ಲಿಸಿದ್ದೇವೆ. ನಗರಾಭಿವೃದ್ಧಿ ಇಲಾಖೆ ಜೊತೆ ಮಾತನಾಡಿ ನಿರ್ಣಯ ತೆಗೆದುಕೊಳ್ಳಲಿದ್ದೇವೆ. ವಿಜಯಪುರ ಪಾಲಿಕೆ ಉಪ ಮೇಯರ್ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೋಲು ಗ್ಯಾರಂಟಿ ಎಂದು ಖಚಿತವಾದ ತಕ್ಷಣ ಚುನಾವಣೆ ಮುಂದೂಡಲು ನೆಪ ತೆಗೆದರು. ಚುನಾವಣೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ಚುನಾವಣಾಧಿಕಾರಿ ಮೇಲೆ ಒತ್ತಡ ಹೇರಿ ಸಚಿವ ಎಂ.ಬಿ.ಪಾಟೀಲರು ಚುನಾವಣೆ ಮುಂದೂಡಿಸಿದ್ದಾರೆ. ಕಾಂಗ್ರೆಸ್ಸಿನ ಎಲ್ಲ ಸದಸ್ಯರು ಗಲಾಟೆ ಮಾಡಿದ್ದಾರೆ ಎಂದು ದೂರಿದರು.
ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ಅವರು ಮಾತನಾಡಿ, ಮಹಾ ಕುಂಭವು ಜಗತ್ತಿನ ಗಮನವನ್ನು ಸೆಳೆದಿದೆ. ಸನಾತನ ಧರ್ಮದವರು ಜಗತ್ತಿನ ಎಲ್ಲ ಕಡೆಯಿಂದ ಬಂದಿದ್ದಾರೆ ಎಂದು ತಿಳಿಸಿದರು. ನಂಬಿಕೆಯ ಅನುಗುಣವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಈ ಪುಣ್ಯಸ್ನಾನದಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರೂ ಪಾಲ್ಗೊಂಡಿದ್ದಾರೆ. ನಾವೂ ಅಲ್ಲಿಗೆ ತೆರಳಲಿದ್ದೇವೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಗಮನಿಸಿದರೆ ಕಾಂಗ್ರೆಸ್ ಪಕ್ಷವು ಬಹುಸಂಖ್ಯಾತ ಹಿಂದೂ ಧರ್ಮದ ಕುರಿತು ಹೊಂದಿರುವ ಮಾನಸಿಕತೆ ಅರ್ಥವಾಗುತ್ತದೆ. ಹಜ್ ಯಾತ್ರೆ, ಇಫ್ತಾರ್ ಕೂಟವನ್ನು ನೀವು ಎಂದಾದರೂ ಪ್ರಶ್ನಿಸಿದ್ದೀರಾ ಎಂದು ಕೇಳಿದರು. ಇಷ್ಟು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಬಡತನವನ್ನು ಯಾಕೆ ನಿವಾರಣೆ ಮಾಡಿಲ್ಲ? ನಾವು ಬಡತನ ರೇಖೆಯನ್ನು ಶೇ 23ರಷ್ಟು ಮೇಲಕ್ಕೆ ತಂದುದಾಗಿ ವಿಶ್ವ ಬ್ಯಾಂಕಿನ ಒಂದು ವರದಿ ತಿಳಿಸಿದೆ. ಶೌಚಾಲಯ ನಿರ್ಮಾಣ, ಗ್ಯಾಸ್ ಸಂಪರ್ಕ, ರಸ್ತೆ ನಿರ್ಮಾಣ ಮಾಡುತ್ತ ಮೂಲ ಸೌಕರ್ಯ ನೀಡುವ ಜೊತೆಗೆ ಧಾರ್ಮಿಕ ಆಸ್ಥೆಯನ್ನೂ ನಾವು ನೋಡಿಕೊಳ್ಳುತ್ತಿದ್ದೇವೆ ಎಂದರಲ್ಲದೆ, ಮಲ್ಲಿಕಾರ್ಜುನ ಖರ್ಗೆಯವರ ಮಾತನ್ನು ಉಗ್ರವಾಗಿ ಖಂಡಿಸುವುದಾಗಿ ತಿಳಿಸಿದರು.












Click it and Unblock the Notifications