ಜಾತಿ ನಿಂದನೆ, ಕೊಲೆ ಬೆದರಿಕೆ ಆರೋಪ; ಶಾಸಕ ಮುನಿರತ್ನ ಹೇಳಿದ್ದೇನು?
ಬಿಜೆಪಿ ಶಾಸಕ ಮುನಿರತ್ನ ಅವರು ಗುತ್ತಿಗೆದಾರನಿಗೆ ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾದ ಆಡಿಯೋ ಸದ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನು ಈ ಸಂಬಂಧ ಶಾಸಕ ಮುನಿರತ್ನ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಈ ಬಗ್ಗೆ ಮೊದಲ ಬಾರಿಗೆ ಮುನಿರತ್ನ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ʼಆ ಆಡಿಯೋ ನನ್ನದೇ ಎಂದು ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆʼ ಎಂದು ಮುನಿರತ್ನ ಹೇಳಿದ್ದಾರೆ.
ಕಸದ ಗುತ್ತಿಗೆ ವಿಚಾರವಾಗಿ ಗುತ್ತಿಗೆದಾರ ಚಲುವರಾಜು ಎಂಬುವವರಿಗೆ ಮುನಿರತ್ನ ಅವರು ಕೆಟ್ಟದಾಗಿ ಹಾಗೂ ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಕೆಲವು ಸಮುದಾಯಗಳ ಬಗ್ಗೆಯೂ ಮುನಿರತ್ನ ಅವರು ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನುವ ಆರೋಪವೂ ಇದೆ. ಈ ಸಂಬಂಧ ನಿನ್ನೆ ಪ್ರೆಸ್ಮೀಟ್ ನಡೆಸಿದ್ದ ಗುತ್ತಿಗೆದಾರ ಚಲುವರಾಜು, ಮುನಿರತ್ನ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದರು.

ಅಲ್ಲದೆ, ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಗೂ ಹೋಗಿ ದೂರು ನೀಡಿ, ತನಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದರು. ಇದೇ ವಿಚಾರವಾಗಿ ಕಾಂಗ್ರೆಸ್ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಮುನಿರತ್ನ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದೆ.
ಆಡಿಯೋದಲ್ಲಿ ಒಕ್ಕಲಿಗರು ಹಾಗೂ ದಲಿತರ ಬಗ್ಗೆಯೂ ಶಾಸಕ ಮುನಿರತ್ನ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಲಾಗಿದ್ದು, ಈಗ ಇದೇ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಎರಡು ದೊಡ್ಡ ಸಮುದಾಯಗಳ ಬಗ್ಗೆ ಈ ರೀತಿ ಮಾತನಾಡಿರುವುದು ತಪ್ಪು. ಮಹಿಳೆಯರ ಬಗ್ಗೆಯೂ ಅವಾಚ್ಯವಾಗಿ ಮಾತನಾಡಿರುವುದು ಬಿಜೆಪಿಗರ ಸಂಸ್ಕೃತಿ ಎಂದೆಲ್ಲ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ.

ತನ್ನ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ಮುನಿರತ್ನ, ʼಚಲುವರಾಜು ಅವರು ಆ ಆಡಿಯೋ ತೆಗೆದುಕೊಂಡು ಕೂಡಲೇ ಸ್ಪೀಕರ್ ಕಚೇರಿಗೆ ಬರಲಿ. ಎರಡು ಸಮುದಾಯಗಳು ಸೇರಿಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿವೆ. ಚಲುವರಾಜು ಹಲವು ವರ್ಷಗಳಿಂದ ನನ್ನೊಂದಿಗೆ ಇದ್ದವರು, ಒಂದು ತಿಂಗಳ ಹಿಂದಷ್ಟೇ ಇದೇ ಚಲುವರಾಜ್ ನನ್ನ ಬಗ್ಗೆ ಹೊಗಳಿದ್ದರು. ಈಗ ನಾನು ಅವರ ಬಳಿ ಹಣ ಕೇಳುತ್ತೀನಾ?ʼ ಎಂದು ಮುನಿರತ್ನ ಪ್ರಶ್ನಿಸಿದ್ದಾರೆ. ರಾಜಕೀಯ ಪಿತೂರಿಯಿಂದಾಗಿ ಈ ರೀತಿಯ ಆರೋಪಗಳನ್ನು ನನ್ನ ಮೇಲೆ ಮಾಡಿದ್ದಾರೆ. ನಾನೆಲ್ಲೂ ನಾಪತ್ತೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಮಾತನಾಡಿದ ಮುನಿರತ್ನ, ಸಿಎಂ ಸಿದ್ದರಾಮಯ್ಯನವರು ಮೊದಲು ತಮ್ಮ ಜೊತೆ ಇರುವವರ ಬಾಯಿ ಮುಚ್ಚಿಸಲಿ. ನಾನು ಯಾವುದೇ ರೀತಿಯ ಭ್ರಷ್ಟಾಚಾರ ಮಾಡಿಲ್ಲ. ಈ ಹಿಂದೆ ನಾನು ಕಾಂಗ್ರೆಸ್ನಲ್ಲಿದ್ದಾಗ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದೆ. ಆದರೆ, ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟಿದ್ದಕ್ಕೆ ನಾನು ಕೆಟ್ಟವನಾಗಿದ್ದೇನೆ. ನನ್ನ ಮೇಲಿನ ಆರೋಪಕ್ಕೆ ನಾನು ಕಾನೂನಿನ ಮೂಲಕವೇ ಉತ್ತರಿಸುತ್ತೇವೆ ಎಂದು ಮುನಿರತ್ನ ಹೇಳಿದ್ದಾರೆ.












Click it and Unblock the Notifications