ಬಿಜೆಪಿ ಬಿಡುವ ಸುದ್ದಿಗೆ ಸ್ಪಷ್ಟನೆ ಕೊಟ್ಟ ಶಾಸಕ ಸೋಮಲಿಂಗಪ್ಪ
ಬೆಂಗಳೂರು, ಜುಲೈ 08 : ಸಿರಗುಪ್ಪ ಕ್ಷೇತ್ರದ ಬಿಜೆಪಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸೋಮವಾರ ಬೆಳಗ್ಗೆಯಿಂದ ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಸೋಮವಾರ ಸಂಜೆ ಎಂ.ಎಸ್.ಸೋಮಲಿಂಗಪ್ಪ ಅವರು ಫೇಸ್ ಬುಕ್ ಮೂಲಕ ಕಾಂಗ್ರೆಸ್ ಸೇರುವ ಕುರಿತು ಹಬ್ಬಿದ ಸುದ್ದಿಗಳಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ. 'ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಬಿಡುವ ಪ್ರಶ್ನೆ ಬರುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ರಾತ್ರಿಯಿಂದ ಎಂ.ಎಸ್.ಸೋಮಲಿಂಗಪ್ಪ ಅವರು ಪಕ್ಷದ ನಾಯಕರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆದ್ದರಿಂದ, ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈಗ ಎಲ್ಲಾ ವದಂತಿಗಳಿಗೆ ಶಾಸಕರೇ ತೆರೆ ಎಳೆದಿದ್ದಾರೆ.

ಶಾಸಕರು ನೀಡಿದ ಸ್ಪಷ್ಟನೆ
'ಟಿವಿ 9 ಹಾಗೂ ಪಬ್ಲಿಕ್ ಟಿವಿ ದೃಶ್ಯ ಮಾಧ್ಯಮದಲ್ಲಿ ಬಂದಿರುವ ಸುಳ್ಳು ಸುದ್ದಿ ಬಗ್ಗೆ ಸ್ಪಷ್ಟೀಕರಣ.
ನಾನು ಬಿ.ಜೆ.ಪಿ ಪಕ್ಷದಿಂದ 3 ಸಲ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಬಿ.ಜೆ.ಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ನಾನು ಯಾವುದೇ ಕಾರಣಕ್ಕೂ ಬಿ.ಜೆ.ಪಿ ಪಕ್ಷವನ್ನು ಬೀಡುವ ಪ್ರಶ್ನೆನೇ ಬರುವುದಿಲ್ಲ'
'ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಪಕ್ಷ ಅಪವಿತ್ರ ಮೈತ್ರಿ ಮಾಡಿಕೊಂಡು ನನ್ನ ಹೆಸರನ್ನು ಕೆಡಿಸಲು ಮಾಡಿರುವ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಪಕ್ಷದ ಷಡ್ಯಂತ್ರ. ನಾನು ಹೋರಾಟದಿಂದ ಮುಂದೆ ಬಂದವನು ನಾನು ಎಂಥ ಕಷ್ಟಕಾಲದಲ್ಲೂ ಪಕ್ಷವನ್ನು ಬಿಟ್ಟಿರುವುದಿಲ್ಲ, ಮುಂದೇನು ಬಿಡುವುದಿಲ್ಲ'.
'ನಾನು ಯಾವುದೇ ಆಸೆ ಆಮಿಷಗಳಿಗೆ ಒಳಗಾಗುವ ವ್ಯಕ್ತಿ ನಾನಲ್ಲ. ಆಗಾಗಿ ನನ್ನ ಕ್ಷೇತ್ರದ ಮತದಾರರು ಬಿ.ಜೆ.ಪಿ ಕಾರ್ಯಕರ್ತರು, ಹಿತೈಷಿಗಳು ಇಂತ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಪಕ್ಷದ ಷಡ್ಯಂತ್ರಗಳಿಗೆ ಕಿವಿಕೊಡಬಾರದೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಜೈ ಬಿ.ಜೆ.ಪಿ ಜೈ ಕರ್ನಾಟಕ'












Click it and Unblock the Notifications