ಶಾಸಕ ಜೀವರಾಜ್ ಗೆ ಷರತ್ತುಬದ್ಧ ಜಾಮೀನು
2 ಲಕ್ಷ ರು ವೈಯಕ್ತಿಕ ಬಾಂಡ್ ಸಲ್ಲಿಸಿ ಜಾಮೀನು ಪಡೆಯತಕ್ಕದ್ದು, ದೇಶ ಬಿಟ್ಟು ಹೊರಕ್ಕೆ ತೆರಳುವಂತಿಲ್ಲ. 10 ದಿನಗೊಳಗೆ ತನಿಖಾಧಿಕಾರಿ ಎದುರು ಹಾಜರಾಗಬೇಕು, ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಎಂಬ ಷರತ್ತು ವಿಧಿಸಿ ಜಿಲ್ಲಾ ನ್ಯಾಯಾಲಯ ಜೀವರಾಜ್ ಗೆ ಜಾಮೀನು ನೀಡಿದೆ.
ಶಾಸಕ ಜೀವರಾಜ್ ಅವರು ತಮ್ಮ ಇಬ್ಬರು ಸಹವರ್ತಿಗಳ ನೆರವಿನಿಂದ ಕೆಸಕಿ ಗ್ರಾಮದಲ್ಲಿ ವಾಹನದಲ್ಲಿ ನನ್ನನ್ನು ಅಪಹರಿಸಿ, ಅತ್ಯಾಚಾರಕ್ಕೀಡುಮಾಡಿದರು ಎಂದು ಇದೇ ಜಿಲ್ಲೆಯ 23 ವರ್ಷದ ಬಾಧಿತ ಯುವತಿ ದೂರಿದ್ದರು. ಆದರೆ, ಶಾಸಕ ಜೀವರಾಜ್ ಅವರು ಈ ಆರೋಪವನ್ನು ಅಲ್ಲಗಳೆದಿದ್ದು, ಹಣ ಕೀಳಲು ನನ್ನ ವಿರುದ್ಧ ನಡೆದಿರುವ ಪಿತೂರಿ ಇದಾಗಿದೆ ಎಂದು ಪ್ರತಿಕ್ರಿಯಿಸಿದ್ದರು.
ನರಸಿಂಹರಾಜಪುರ ಠಾಣಾಧಿಕಾರಿಗಳು ದೂರು ಸ್ವೀಕರಿಸಿ ಜೀವರಾಜ್ ಅವರ ವಿರುದ್ಧ ಐಪಿಸಿ ಸೆಕ್ಷನ್ 366, 354, 376 ಹಾಗೂ 506ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದರು. ಅತ್ಯಾಚಾರ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದ್ದು, ವಿಚಾರಣೆ ನಡೆಸಲು ಶಾಸಕ ಜೀವರಾಜ್ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎನ್ನಲಾಗಿತ್ತು. ಇದಕ್ಕೆ ಇಂಬುಕೊಡುವಂತೆ ಜೀವರಾಜ್ ಅವರು ಕೂಡಾ ಜಿಲ್ಲೆಯ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ಇದೇ ವಿಷಯ ಮುಂದಿಟ್ಟುಕೊಂಡು, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೋಭಿತ್ ಅವರು ಜೀವರಾಜ್ ವಿರುದ್ಧ ಇತ್ತೀಚೆಗೆ ಆರೋಪಿ ಶಾಸಕ ಜೀವರಾಜ್ ನಾಪತ್ತೆಯಾಗಿದ್ದಾರೆ ಶೋಧ ಕಾರ್ಯ ನಡೆಸಿ, ಅವರನ್ನು ಪತ್ತೆಹಚ್ಚಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದರು.
ಎನ್ ಆರ್ ಪುರದ ಕೆಸಕಿ ಮಡಬೂರು ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ಬಗ್ಗೆ ಇನ್ನಷ್ಟು ವಿವರ ನೀಡಿದ ಜೀವರಾಜ್ ಅವರು " ಅರಣ್ಯ ಅವರ ಮನೆಗೂ ನಮ್ಮ ಮನೆಗೂ 10 ಕಿ.ಮೀ ದೂರ ಇದೆ. ಮನು ನಮ್ಮ ಜತೆ ಹತ್ತಾರು ವರ್ಷದಿಂದ ಜತೆಗಿದ್ದವರು. ಮನು ಅವರ ಹೆಂಡತಿ ಚಿಕ್ಕಮ್ಮನ ಮಗಳು ಅರಣ್ಯ. ಹೀಗಾಗಿ ನನಗೂ ಪರಿಚಯ ಇದ್ದೇ ಇದೆ. ಇವರ ಮೇಲೆ ಈಗಾಗಲೇ ವಿಧಾನಸಭಾ ಠಾಣೆಯಲ್ಲಿ ಆಗಸ್ಟ್ ತಿಂಗಳಿನಲ್ಲೇ ದೂರು ನೀಡಿದ್ದೇನೆ.
ಜುಲೈ 19 ರಿಂದ ಮೂರು ದಿನ ನನ್ನನ್ನು ಪೀಡಿಸಿದ್ದರು. ಹಣ ಕೊಡದಿದ್ದರೆ ಬ್ಲಾಕ್ ಮೇಲ್ ಮಾಡುವುದಾಗಿ ಬೆದರಿಕೆ ನೀಡಿದ್ದರು. ಈ ಬಗ್ಗೆ ಪಕ್ಷದ ವರಿಷ್ಠರಿಗೂ ತಿಳಿಸಿದ್ದೆ. ದೂರು ನೀಡಿದ ಮೇಲೆ ಎಫ್ಐಆರ್ ಹಾಕಿ ಚಾರ್ಚ್ ಶೀಟ್ ಆದರೆ ಸಮಸ್ಯೆ ಎಂದು ಈಗ ರೀತಿ ತಂತ್ರ ಮಾಡಿದ್ದಾರೆ. ನಾನು ಕೈ ಮುಗಿದು ಹೇಳುತ್ತೇನೆ ತನಿಖೆ ನಡೆದು ಸತ್ಯಾಸತ್ಯತೆ ಹೊರ ಬರುವ ತನಕ ಸುಮ್ಮನ್ನೆ ಆರೋಪ ಮಾಡಬೇಡಿ.
ಶೃಂಗೇರಿ ಶಾರದಾಂಬೆ ಮೇಲಾಣೆ ನಾನು ಅತ್ಯಾಚಾರ ಎಸಗಿಲ್ಲ. ಯಾವುದೇ ರೀತಿ ತಪ್ಪು ಮಾಡಿಲ್ಲ. ನನ್ನ ರಾಜಕೀಯ ಏಳಿಗೆ ಸಹಿಸದೆ ಆರೋಪ ಮಾಡಿದ್ದಾರೆ. ಯುವತಿಯ ಸಂಬಂಧಿಕರಿಗೆ ಬಗರ್ ಹುಕಂ ವಿಷಯದಲ್ಲಿ ಅವರಿಗೆ ಸಹಾಯ ಮಾಡಿದ್ದೆ. ಆದರೆ ನನಗೆ ಈಗ ತೊಂದರೆಗೆ ಸಿಲುಕಿಸಿದ್ದಾರೆ. ನಾನು ಎಲ್ಲವನ್ನು ಧೈರ್ಯವಾಗಿ ಎದುರಿಸುತ್ತೇನೆ' ಎಂದಿದ್ದರು.