Caucvery dispute: ತಮಿಳುನಾಡಿಗೆ ಕಾವೇರಿ ನೀರು ಬಿಡಲು ರಾಜ್ಯ ಸರ್ಕಾರವೇ ನೇರ ಕಾರಣ ಎಂದ ಬಿಜೆಪಿ ನಾಯಕರು
ಕಾವೇರಿ ನೀರು ತಮಿಳುನಾಡಿಗೆ ಬಿಡುತ್ತಿರುವುದಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನ ತಮಿಳುನಾಡಿಗೆ ನೀರು ಬಿಡುವ ಮೂಲಕ ಉದಾರತೆಯನ್ನು ರಾಜ್ಯ ಸರ್ಕಾರ ತೋರಿಸಿದೆ ಎಂದು ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಡಿಸಿಎಂ ಆರ್.ಅಶೋಕ್, 'ಕಾವೇರಿ ವಿಚಾರದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿರುವುದಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣ' ಎಂದು ಹೇಳಿದ್ದಾರೆ. ಕಾವೇರಿ ನೀರು ಬಿಟ್ಟರೆ, ನೀರು ತಡೆಯುತ್ತೇವೆ, ಬಿಜೆಪಿ ಹೋರಾಟ ಮಾಡಲಿದೆ ಅಂತೇಳಿದ್ರು. ಕಾವೇರಿ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ತಮಿಳುನಾಡಿಗೆ ನೀರು ಹರಿಸಿ, ಸೋನಿಯಾಗಾಂಧಿ ತೃಪ್ತಿಪಡಿಸಲು ಮುಂದಾಗಿದ್ದಾರೆ. ಸೋನಿಯಾ ಚಿತಾವಣೆ ಮೇರೆಗೆ ಸಿಎಂ, ಡಿಸಿಎಂ ಅವರು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಅಂತಾ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ನಲ್ಲಿ ಸರಿಯಾಗಿ ವಾದ ಮಾಡಿಲ್ಲ. ತಜ್ಞರ ಸಂಪರ್ಕ ಮಾಡಿಲ್ಲ. ಏನೂ ಕೂಡ ಮಾಡಿಲ್ಲ ಇವರು. ಸಚಿವರೆಲ್ಲಾ ಉಲ್ಲೇ ಗೂಟಾ ಹೊಡೆದುಕೊಂಡು ಕೂತಿದ್ರು. ಕರ್ನಾಟಕ ಸರ್ಕಾರ ಸ್ಟಾಲಿನ್ ಅವರನ್ನು ಫಾಲೋ ಮಾಡಿದೆ. ಕಾವೇರಿ ಪಾಲಿಗೆ ಇದು ದುರಾದೃಷ್ಟ ಸರ್ಕಾರ ಎಂದು ಬೇಸರಗೊಂಡರು.
ಇನ್ನೂ ಇದೇ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, 'ಮೊದಲ ಸಿಡಬ್ಲ್ಯೂಸಿ ಆದೇಶ ಬಂದಾಗ ಕರ್ನಾಟಕ ಸುಪ್ರೀಂಕೋರ್ಟ್ಗೆ ಹೋಗಬೇಕಿತ್ತು. ನೀರು ಬಿಡಲು ಆಗಲ್ಲ ಎಂದು ಅಫಿಡವಿಟ್ ಹಾಕಬೇಕಿತ್ತು. ಎರಡು ಸಲ ನೀರು ಬಿಟ್ಟು ಈಗ ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ ಎಂದು ಆಕ್ರೋಶಗೊಂಡರು.
ಕಾವೇರಿ ನೀರು ನಿಯಂತ್ರಣ ಸಮಿತಿ (CWRC), ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಅನುಸರಿಸಿರುವ ವಿಧಾನಗಳೇ ಸರಿ ಇಲ್ಲ. ಮಳೆ ಕಡಿಮೆಯಾಗಿದೆ ಅನ್ನೋದು ಗೊತ್ತಿದ್ದರೂ ಕೂಡಾ ಆದೇಶ ಮಾಡಿದೆ. ಸುಪ್ರೀಂಕೋರ್ಟ್ ಎರಡು ರಾಜ್ಯಗಳ ವಾದ ಕೇಳಿ, ಸಿಡಬ್ಲ್ಯೂಎಂಎ ಆದೇಶವನ್ನೇ ಎತ್ತಿ ಹಿಡಿದಿದೆ. ಮೊದಲೇ ರಾಜ್ಯ ಸರ್ಕಾರ ಇಷ್ಟು ನೀರು ಬಿಡೋಕೆ ಆಗಲ್ಲ ಎಂದು ಅರ್ಜಿ ಹಾಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಇದನ್ನು ಪದೇ ಪದೇ ಹೇಳಿದರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ಕಿಡಿಕಾರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಟಿ ರವಿ, 'ಸುಪ್ರೀಂ ಕೋರ್ಟ್ ತೀರ್ಪು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾವೇರಿ ನೀರಿನ ವಿಷಯದಲ್ಲಿ ರಾಜಕಾರಣ ಮಾಡುವ ದುರುದ್ದೇಶ ನಮಗಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದ ವೈಫಲ್ಯ ಎತ್ತಿ ಹಿಡಿಯುವುದು ನಮಗೆ ಅನಿವಾರ್ಯವಾಗಿದೆ' ಎಂದು ಹೇಳಿದರು.
'ಇವರು (ಕಾಂಗ್ರೆಸ್) ಮುಂಚಿವಾಗಿ ನೀರು ಬಿಡುವ ಮೂಲಕ ತಮ್ಮ ಉದಾರತೆ ಪ್ರದರ್ಶನ ಮಾಡಿದರು. ಯಾರ ಭಯಕ್ಕೆ ನೀವು ನೀರು ಬಿಟ್ರಿ? ಅದರ ಪರಿಣಾಮ ನಾವು ಮಳೆ ನೀರು ಕೊರತೆಯನ್ನು ಎದುರಿಸುತ್ತಿದ್ದೇವೆ. ಕಾವೇರಿ ಕಬಿನಿ ಡ್ಯಾಂ ಖಾಲಿ ಆಗಿವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಮ್ಮ ನೆರವಿಗೆ ಬರಲಿಲ್ಲ. ಸುಪ್ರೀಂ ಕೋರ್ಟ್ನಲ್ಲು ನಮಗೆ ನ್ಯಾಯ ಸಿಗಲಿಲ್ಲ. ನೀರು ಬಿಡುವ ಆದೇಶ ನೀಡಿದೆ' ಎಂದು ರಾಜ್ಯದ ಸರ್ಕಾರದ ವಿರುದ್ಧ ಆರೋಪ ಮಾಡಿದರು.
ಇನ್ನೂ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ನೀರಾವರಿ ಬಗ್ಗೆ ಕನಿಷ್ಟ ಜ್ಞಾನ, ತಿಳುವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications