ಚಾಮರಾಜಪೇಟೆ ಬಳಿಕ ಮತ್ತೊಂದು ಕಡೆ ಹಸುವಿನ ಮೇಲೆ ಕ್ರೌರ್ಯ, ಎಲ್ಲಿ?
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇತ್ತೀಚೆಗೆ ಹಸುವಿನ ಕೆಚ್ಚಲು ಕೊಯ್ದು ಕ್ರೌರ್ಯ ಎಸಗಿದ್ದ ಘಟನೆ ಬೆಚ್ಚಿಬೀಳಿಸಿತ್ತು. ಕುಡಿದ ಅಮಲಿನಲ್ಲಿ ಹೊರ ರಾಜ್ಯದ ವ್ಯಕ್ತಿಯೊಬ್ಬ ವಿಕೃತಿ ಮೆರೆದಿದ್ದ. ಈ ಘಟನೆ ಮಾಸುವ ಮುನ್ನವೇ ರಾಜ್ಯದ ಮತ್ತೊಂದು ಕಡೆ ಹಸುವಿನ ಮೇಲೆ ಕ್ರೌರ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಹೊನ್ನಾವರ ತಾಲ್ಲೂಕಿನ ಸಾಲ್ಕೋಡ ಗ್ರಾಮದಲ್ಲಿ ಹಸುವನ್ನು ಕಡಿದು, ಗರ್ಭದಲ್ಲಿದ್ದ ಕರುವನ್ನು ಬಿಸಾಡಿರುವ ಘಟನೆ ವರದಿಯಾಗಿದೆ.
ಸದ್ಯ ಈ ವಿಚಾರವಾಗಿ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಈ ಬಗ್ಗೆ ಕಿಡಿಕಾರಿದ್ದಾರೆ. ಚಾಮರಾಜಪೇಟೆಯಲ್ಲಿ ಗೋಮಾತೆಯ ಕೆಚ್ಚಲು ಕತ್ತರಿಸಿದ ಅಮಾನುಷ ಘಟನೆಯ ಆಘಾತದಿಂದ ಹೊರಬರುವ ಮುನ್ನವೇ ಈಗ ಮತ್ತೊಂದು ಹೇಯ ಕೃತ್ಯ ನಡೆದಿದ್ದು, ಹೊನ್ನಾವರ ತಾಲ್ಲೂಕಿನ ಸಾಲ್ಕೋಡ ಗ್ರಾಮದಲ್ಲಿ ಗಬ್ಬದ ಆಕಳು ಕಡಿದು, ಗರ್ಭದಿಂದ ಕರು ತೆಗೆದು ಬಿಸಾಡಿ, ಮಾಂಸ ಹೂತ್ತೊಯ್ಯುವ ಮೂಲಕ ಕಿಡಿಗೇಡಿಗಳು ಮತ್ತೊಮ್ಮೆ ಕ್ರೌರ್ಯ ಮೆರೆದಿದ್ದಾರೆ ಎಂದು ಗರಂ ಆಗಿದ್ದಾರೆ.

ತುಷ್ಟೀಕರಣ, ಅರಾಜಕತೆಯಿಂದ ನಿಸ್ತೇಜವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಬಲಹೀನತೆಯನ್ನೇ ಬಂಡವಾಳವಾಗಿಸಿಕೊಂಡಿರುವ ಮತಾಂಧ ಶಕ್ತಿಗಳು, ಗೋವುಗಳ ಮೇಲೆ ಪ್ರಹಾರ ಮಾಡುವ ಮೂಲಕ ಹಿಂದೂಗಳಿಗೆ ಸವಾಲು ಹಾಕುತ್ತಿವೆ. ಸಿಎಂ ಸಿದ್ದರಾಮಯ್ಯನವರೇ, ಗೋವುಗಳ ಮೇಲೆ ಪದೇ ಪದೇ ನಡೆಯುತ್ತಿರುವ ಈ ದಾಳಿಗಳನ್ನು ಗಮನಿಸಿದರೆ, ಇದರ ಹಿಂದೆ ದೊಡ್ಡ ಜಾಲವೇ ಅಡಗಿದಂತಿದೆ. ಮತಾಂಧ ಶಕ್ತಿಗಳು, ಮೂಲಭೂತವಾದಿ ಶಕ್ತಿಗಳ ದೊಡ್ಡ ಜಿಹಾದಿ ಷಡ್ಯಂತ್ರವೇ ಇದ್ದಂತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಈ ದುಷ್ಕೃತ್ಯಗಳಿಗೆ ಕಡಿವಾಣ ಹಾಕದೆ ಹೋದರೆ, ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.
ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕುಯ್ದ ಪ್ರಕರಣ ಹಸಿರಾಗಿರುವಾಗಲೇ ಉತ್ತರ ಕನ್ನಡದ ಹೊನ್ನಾವರದ ಸಾಲ್ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗರ್ಭಧರಿಸಿದ ಹಸುವನ್ನು ದುಷ್ಟರು ತಲೆ ಕಡಿದು, ಕಾಲು ಮೂಳೆಗಳನ್ನು ಬೇರ್ಪಡಿಸಿ ಹೋಗಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ದನಗಳ್ಳತನ ಕರಾವಳಿ ಜಿಲ್ಲೆಯಲ್ಲಿ ಪಿಡುಗಿನಂತೆ ವ್ಯಾಪಿಸಿತ್ತು. ಈಗ ಈ ಬಗೆಯ ಬರ್ಬರ ಗೋಹತ್ಯೆ ನಡೆದಿದೆ. ರಾಜ್ಯದಲ್ಲಿ ಸರ್ಕಾರ ಇದೆ ಎಂಬುದಕ್ಕೆ "ಗ್ಯಾರಂಟಿ" ಇದೆಯೇ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬಾಣಂತಿಯರ ಕೊಲೆಗಾರ ಕಾಂಗ್ರೆಸ್ ಸರ್ಕಾರದ ಓಲೈಕೆ ಆಡಳಿತದಲ್ಲಿ ಗರ್ಭ ಧರಿಸಿದ ಹಸುಗಳಿಗೂ ರಕ್ಷಣೆಯಿಲ್ಲ. ಹೊನ್ನಾವರದಲ್ಲಿ ತುಂಬು ಗರ್ಭವತಿಯಾಗಿದ್ದ ಹಸುವನ್ನು ಕೊಂದು, ಅದರೊಳಗಿನ ಕರುವಿನ ತಲೆ ಕತ್ತರಿಸಿರುವುದು ಅತ್ಯಂತ ಪೈಶಾಚಿಕ ಕೃತ್ಯ ಎಂದು ರಾಜ್ಯ ಬಿಜೆಪಿ ಎಕ್ಸ್ನಲ್ಲಿ ಕಿಡಿಕಾರಿದೆ. ಸಿಎಂ ಸಿದ್ದರಾಮಯ್ಯನವರ ಆಡಳಿತದಲ್ಲಿ ಹಿಂದೂಗಳಿಗೆ ಹಾಗೂ ಹಿಂದೂಗಳು ಸಾಕುವ ಪ್ರಾಣಿಗಳಿಗೇಕೆ ಈ ಪರಿಯ ಶಿಕ್ಷೆ? ಎಂದು ಕೇಳಿದ್ದು, ಆಕಸ್ಮಿಕ ಗೃಹ ಸಚಿವ ಜಿ.ಪರಮೇಶ್ವರ್ ಅವರೇ, ಹಸು ಕೊಲೆಗಡುಕರನ್ನು ಬಂಧಿಸುತ್ತಿರೋ ಅಥವಾ ಅವರಿಗೆ ಮಾನಸಿಕ ಅಸ್ವಸ್ಥ ಎನ್ನುವ ಪಟ್ಟಕಟ್ಟುತ್ತಿರೋ? ಎಂದು ವ್ಯಂಗ್ಯವಾಡಿದೆ.
ಗೋ ಭಕ್ಷಕರಿಗೆ ಕಾನೂನಿನ ಭಯವಿಲ್ಲ: ಈ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಖಂಡಿಸಿದ್ದಾರೆ. ಗೋ ರಕ್ಷಣೆ, ಈ ನೆಲದ ಮಾನವ ಧರ್ಮದ ರಕ್ಷಣೆ, ಈ ನೆಲದ ಸಂಸ್ಕೃತಿಯ ರಕ್ಷಣೆ, ಕೋಟ್ಯಂತರ ಜನರ ಭಾವನೆಯ ರಕ್ಷಣೆ ಎಂದು ಪೂಜಿಸುವ ನಮ್ಮ ಕನ್ನಡ ನಾಡಿನಲ್ಲಿ ಇತ್ತೀಚೆಗೆ ಚಾಮರಾಜಪೇಟೆಯಲ್ಲಿ ರಾಕ್ಷಸಿ ಮನಸ್ಥಿತಿಯ ಪಾಪಿಗಳು ನಿರ್ದಯವಾಗಿ ಹಸುಗಳ ಕೆಚ್ಚಲನ್ನು ಭೀಕರವಾಗಿ ಕತ್ತರಿಸಿದ್ದ ಅಮಾನುಷ ಕೃತ್ಯ, ಬಳಿಕ ನಂಜನಗೂಡಿನಲ್ಲಿ ಆಕಳ ಬಾಲ ಕತ್ತಿರಿಸಿ ವಿಕೃತಿ ಮೆರೆದಿದ್ದರು, ಇದೀಗ ಹೊನ್ನಾವರದಲ್ಲಿ ಹಸುವಿನ ರುಂಡ, ಕಾಲು ಕತ್ತರಿಸಿರುವ ಘಟನೆ ಅತ್ಯಂತ ಹೇಯ ದುರ್ಘಟನೆಯಾಗಿದೆ ಎಂದು ಖಂಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋ ಸುರಕ್ಷತೆಯ ತಾತ್ಸಾರ ಧೋರಣೆ, ಓಲೈಕೆ ರಾಜಕಾರಣದ ನಿಲುವಿನಿಂದಾಗಿ ಗೋ ಭಕ್ಷಕರಿಗೆ ಕಾನೂನಿನ ಭಯವಿಲ್ಲದಂತಾಗಿದೆ. ಪದೇ ಪದೇ ನಮ್ಮ ಸಂಸ್ಕೃತಿ ಪರಂಪರೆಯ ಮೇಲೆ ನಡೆಯುತ್ತಿರುವ ದಾಳಿಯನ್ನು ನಾಡಿನ ಜನ ಸಹಿಸಿಕೊಂಡು ಕೂರುವುದಿಲ್ಲ. ಸರ್ಕಾರ ಈ ರೀತಿಯ ಸರಣಿ ರಾಕ್ಷಸಿ ಕೃತ್ಯ ಎಸಗುತ್ತಿರುವವರನ್ನು ಹಾಗೂ ಇದರ ಹಿಂದಿರುವ ದುಷ್ಟಶಕ್ತಿಗಳನ್ನು ಶಿಕ್ಷಿಸಲು ಜರೂರು ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪುಣ್ಯಕೋಟಿಯ ನಿಷ್ಠೆ, ನ್ಯಾಯ, ಧರ್ಮದ ನಡೆಗೆ ತಲೆಬಾಗಿದ ಹುಲಿರಾಯನೇ ಆತ್ಮಾರ್ಪಣೆ ಮಾಡಿಕೊಂಡ ಕಥೆ ಹೇಳುವ ನಾಡು ನಮ್ಮದು. ಕಾಂಗ್ರೆಸ್ ಸರ್ಕಾರ ಹುಲಿರಾಯನ ಕಥೆಯನ್ನು ಕೇಳಿಯಾದರೂ ಮೃಗೀಯ ವರ್ತನೆ ತೋರುತ್ತಿರುವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.












Click it and Unblock the Notifications