ಕನಕಪುರದಲ್ಲಿ ಬಿಎಲ್ ಸಂತೋಷ್, ವರುಣದಲ್ಲಿ ಪ್ರಹ್ಲಾದ್ ಜೋಶಿ ಸ್ಪರ್ಧೆಗೆ ಪಂಥಾಹ್ವಾನ: ಇದರ ಹಿಂದಿನ ಮರ್ಮವೇನು?
ಬೆಂಗಳೂರು, ಏಪ್ರಿಲ್ 12: ಕರ್ನಾಟಕ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿನಿಧಿಸುವ ಕನಕಪುರ ಕ್ಷೇತ್ರದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಕನಕಪುರ & ವರುಣ ಕ್ಷೇತ್ರದಲ್ಲಿ ಬಿ. ಎಲ್ ಸಂತೋಷ್ & ಪ್ರಹ್ಲಾದ್ ಜೋಷಿ ಅವರನ್ನು ಸ್ಪರ್ಧೆಗೆ ಆಹ್ವಾನಿಸುತ್ತೇವೆ. ಪಂಥಾಹ್ವಾನ ಸ್ವೀಕರಿಸುವರೇ? ನಾಗಪುರದ ವಂಶದವರು ಇತರರನ್ನ ಹೊಂಡಕ್ಕೆ ತಳ್ಳಿ ಆಳ ನೋಡುವ ಬದಲು ತಾವೇ ಮುಂದೆ ನಿಂತು ಸಾಮರ್ಥ್ಯ ತೋರಲಿ. ಬಿಎಲ್ ಸಂತೋಷ್ ತೆರೆಮರೆಯಿಂದ ಹೊರಬಂದು ಚುನಾವಣೆಗೆ ಸ್ಪರ್ಧಿಸಿ ಸಾಮರ್ಥ್ಯ ನಿರೂಪಿಸಲಿ' ಎಂದು ವಾಗ್ದಾಳಿ ನಡೆಸಿದೆ.

ಇದೇ ವೇಳೆ, ಯಡಿಯೂರಪ್ಪ ಹಾಗೂ ಶೆಟ್ಟರ್ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆಯೂ ಕಾಂಗ್ರೆಸ್ ಕಟುಕಿದೆ.
'ಕೇಂದ್ರ ಪ್ರಹ್ಲಾದ್ ಜೋಷಿ ಆಟಕ್ಕೆ ಜಗದೀಶ್ ಶೆಟ್ಟರ್ ಬಲಿ. ಬಿಎಲ್ ಸಂತೋಷ್ ಆಟಕ್ಕೆ ಬಿಎಸ್ ಯಡಿಯೂರಪ್ಪ ಬಲಿ. ನಾಗಪುರದ ಕರುಳು ಬಳ್ಳಿಯ ಸಂಬಂಧವನ್ನೇ ಬಳಸಿ ಬಿಜೆಪಿಯಲ್ಲಿ ಪ್ರಾಬಲ್ಯ ಸಾಧಿಸಿರುವ ಸಚಿವ ಪ್ರಹ್ಲಾದ್ ಜೋಶಿ ರಾಜ್ಯದ ಲಿಂಗಾಯತ ನಾಯಕರನ್ನು ಹೊಂಡಕ್ಕೆ ತಳ್ಳುವಲ್ಲಿ ಜಯಗಳಿಸಿದ್ದಾರೆ. ಮಾಜಿ ಸಿಎಂ ಒಬ್ಬರಿಗೆ ಟಿಕೆಟ್ ನಿರಾಕರಿಸುವಂತಹ ಅವಮಾನ ಇನ್ನೊಂದಿಲ್ಲ' ಎಂದು ಬಿಜೆಪಿಯನ್ನು ಟ್ಯಾಗ್ ಮಾಡಿ ಟ್ವೀಟಿಸಿದೆ.

ರೌಡಿ ಶೀಟರ್ಗೆ ಟಿಕೆಟ್: ಕಾಂಗ್ರೆಸ್, ಜೆಡಿಎಸ್ ಆಕ್ರೋಶ
'ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದಲ್ಲೇ ಗಡಿಪಾರು ಆಗಿದ್ದ, ಅನ್ನಭಾಗ್ಯದ ಅಕ್ಕಿ ಕಳ್ಳಸಾಗಣೆಯ ಆರೋಪಿ ರೌಡಿ ಶೀಟರ್ಗೆ ಟಿಕೆಟ್ ಕೊಡುವ ಮೂಲಕ #BJPRowdyMorcha ಕ್ಕೂ ಮನ್ನಣೆ ನೀಡಿದೆ. ಬಿಜೆಪಿಯ ಟಿಕೆಟ್ಗೆ "ಗಡಿಪಾರು" ಆಗಿರುವುದೇ ಬಹುಮುಖ್ಯ ಮಾನದಂಡ ಎಂಬುದನ್ನು ದಿಲ್ಲಿಯಿಂದ ಇಲ್ಲಿಯವರೆಗೆ ನಿರೂಪಿಸಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, 'ಇಂತಹ ರೌಡಿಶೀಟರ್ ಗಳೇ ಬಿಜೆಪಿಯ ಹಿಂದೆ ಹೋಗ್ತಾರೊ, ಇಲ್ಲ ಇವರನ್ನೇ ಹುಡುಕಿ ಪಕ್ಷ ಮಣೆ ಹಾಕುತ್ತೋ? ವಿಭಿನ್ನತೆ ಹೊಂದಿರುವ ಪಕ್ಷ ಎಂದು ಎದೆಯುಬ್ಬಿಸುವ, ಊಸರವಳ್ಳಿ ರಾಜಕೀಯಕ್ಕೆ ಹೆಸರಾದ ಬಿಜೆಪಿಗೆ ರೌಡಿ ಶೀಟರ್ ಗಳ ಮೇಲೆ ಎಲ್ಲಿಲ್ಲದ ಅಕ್ಕರೆ. ಸಮಾಜಘಾತುಕ ಶಕ್ತಿಗಳನ್ನು ಅಧಿಕಾರ ಕೇಂದ್ರಕ್ಕೆ ತರುವ ಈ ಯೋಚನೆಯೇ ಕಳಾಹೀನವಾಗಿದೆ' ಎಂದು ಟೀಕಿಸಿದೆ.

'ಮಾತೆತ್ತಿದರೆ ಅಣಿಮುತ್ತುಗಳನ್ನು ಉದುರಿಸುವ ಬಿಜೆಪಿಗೆ ಒಳ್ಳೆಯ ಹೆಸರಿರುವ ಅಭ್ಯರ್ಥಿಗಳೇ ಸಿಕ್ಕಿಲ್ಲ! ಇದಕ್ಕಿಂತ ವ್ಯಂಗ್ಯ ಇನ್ನೇನಿದೆ? ರೌಡಿ ಶೀಟರ್ ಗಳು, ದಂಧೆಕೋರರು, ಗೋರಕ್ಷಣೆ ಹೆಸರಿನಲ್ಲಿ ಗೂಂಡಾಗಿರಿ ಮಾಡುವ ಹೀನರು, ಕಮಿಷನ್ ಗಿರಾಕಿಗಳೆ ಈ ಪಕ್ಷದ ಆಸ್ತಿ ಎನ್ನುವ ಹಾಗಾಗಿದೆ. ಕನ್ನಡಿಗರು ಇವರಿಗೆ ತಕ್ಕ ಪಾಠ ಕಲಿಸಬೇಕಿದೆ' ಎಂದು ಜೆಡಿಎಸ್ ಹೇಳಿದೆ.
ಜೆಡಿಎಸ್ ಟ್ವೀಟ್
'ಇದು ರಾಜ್ಯ ಬಿಜೆಪಿ ನಾಯಕರ ದೌರ್ಭಾಗ್ಯವೊ ಇಲ್ಲ ಕೇಂದ್ರ ಬಿಜೆಪಿಯ ಸರ್ವಾಧಿಕಾರವೊ, ನಾಡಿನ ಜನತೆಯೇ ನಿರ್ಧರಿಸಬೇಕಿದೆ. ನಡೆಯುತ್ತಿರುವುದು ರಾಜ್ಯದ ಚುನಾವಣೆ. ಆದರೆ, ಎಲ್ಲವನ್ನೂ ನಿರ್ಧರಿಸುವುದು ಕೇಂದ್ರ ಬಿಜೆಪಿ. ಪಕ್ಷ ಕಟ್ಟಿದ ಹಿರಿಯರನ್ನು ಕಿತ್ತೆಸೆದು, ಎಲ್ಲವನ್ನೂ ತನ್ನ ಸುಪರ್ದಿಗೆ ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿದೆ ಎಂದೂ ಜೆಡಿಎಸ್ ಟ್ವೀಟ್ ಮಾಡಿದೆ.
'ರಾಜ್ಯದ ಹಿರಿಯ ಬಿಜೆಪಿ ನಾಯಕರನ್ನು ನೋಡಿದರೆ ಮರುಕ ಹುಟ್ಟುತ್ತಿದೆ! ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆಯ ಸುದ್ದಿಗೋಷ್ಟಿಯಲ್ಲಿ ಪಕ್ಷ ಪ್ರತಿನಿಧಿಸುವ ಒಬ್ಬನೇ ಒಬ್ಬ ಕನ್ನಡಿಗ ಇರಲಿಲ್ಲ. ಕ್ಷೇತ್ರಗಳ ಮತ್ತು ಅಭ್ಯರ್ಥಿಗಳ ಹೆಸರನ್ನು ಸರಿಯಾಗಿ ಹೇಳಲಿಲ್ಲ. ಕನ್ನಡ, ಕನ್ನಡಿಗರ ಅಸ್ಮಿತೆಯೇ ಮಾಯವಾಗಿತ್ತು. ಇದು ಬಿಜೆಪಿಯ ದುರಹಂಕಾರದ ನಡೆ' ಎಂದು ಜೆಡಿಎಸ್ ಆರೋಪಿಸಿದೆ.












Click it and Unblock the Notifications