ಲೋಕಾಯುಕ್ತ-ಇಡಿ ಬಲೆಯಲ್ಲಿರುವ ಮುಡಾ ಕೇಸ್ಗೆ ಸಿಬಿಐ ಎಂಟ್ರಿ, ರವಿಕುಮಾರ್ ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ ಅವರನ್ನು ಸುತ್ತಿಕೊಂಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಸದ್ಯ ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯ ಈ ಕೇಸ್ಗೆ ಎಂಟ್ರಿ ನೀಡಿದ್ದು, ಇದೀಗ ಈ ಕೇಸ್ ಸಿಬಿಐಗೆ ಕೊಡಬೇಕು ಎನ್ನುವ ಜೋರಾದ ಕೂಗು ಬಿಜೆಪಿಗರಿಂದ ಎದ್ದಿದೆ.
ಮುಡಾ ಕೇಸ್ ತನಿಖೆಯು ಸದ್ಯ ಲೋಕಾಯುಕ್ತ ತನಿಖೆಯಲ್ಲಿದ್ದು, ಅದನ್ನು ಕೂಡಲೇ ಸಿಬಿಐಗೆ ವರ್ಗಾಯಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ.

ಈಗಾಗಲೇ ಜಾರಿ ನಿರ್ದೇಶನಾಲಯವು ಮುಡಾಗೆ ಸಂಬಂಧಿಸಿದ ದಾಖಲೆ ಪರಿಶೀಲನೆ ಮಾಡುತ್ತಿದೆ. ಇನ್ನೊಂದೆಡೆ ಲೋಕಾಯುಕ್ತವೂ ತನಿಖೆ ನಡೆಸಿದೆ. ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಎರಡು ನ್ಯಾಯಾಲಯಗಳು ಆದೇಶಿಸಿವೆ. ಹಾಗಾಗಿ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಬಹಿರಂಗವಾಗಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಇಂತದ್ದೇ ಕೇಸ್ನಲ್ಲಿ ಬಿಜೆಪಿ ನಾಯಕರು ಸಿಲುಕಿಕೊಂಡಿದ್ರೆ, ಸಿದ್ದರಾಮಯ್ಯ ಅವರು ಹೇಗೆಲ್ಲಾ ಮಾತನಾಡುತ್ತಿದ್ದರು? ಎಂಬುದು ಊಹಿಸಲೂ ಅಸಾಧ್ಯ. ಅವರು ಮಾತಿಗೆ ಮುಂಚೆ ನನಗೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದವಿದೆ ಎನ್ನುತ್ತಾರೆ. ಆದರೆ, ಇಂತಹ ದೊಡ್ಡ ತಪ್ಪು ಮಾಡಿರುವ ಅವರಿಗೆ ಲೋಕಾಯುಕ್ತ, ಕೋರ್ಟ್, ಇಡಿ, ಸಿಬಿಐನ ಆಶೀರ್ವಾದ ಇರುತ್ತಾ? ಎಂದು ಪ್ರಶ್ನಿಸಿದ್ದಾರೆ.

ಮುಡಾ ಕೇಸ್ ಅನ್ನು ನಾವು ಸಿಬಿಐ ತನಿಖೆಗೆ ಕೊಡಬೇಕು ಎಂದು ಕೇಳುತ್ತಲೇ ಇದ್ದೇವೆ. ಈಗಾಗಲೇ ಸಿದ್ದರಾಮಯ್ಯ ಅವರು ಮಾಡಿರೋದು ತಪ್ಪು ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಆದರೆ, ಸಿದ್ದರಾಮಯ್ಯ ನಾನೇನೂ ತಪ್ಪೇ ಮಾಡಿಲ್ಲ, ನನಗೆ ಚಾಮುಂಡೇಶ್ವರಿಯ ಆಶೀರ್ವಾದವಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೋರ್ಟ್ ಕೂಡ ಸಿದ್ದರಾಮಯ್ಯ ಮೇಲೆ ಎಫ್ಐಆರ್ ದಾಖಲಿಸಲು ಸೂಚಿಸಿದೆ. ಈ ಹಿನ್ನೆಲೆ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನಾದರೂ ನೀಡಬೇಕು. ಮತ್ತೊಂದೆಡೆ ಜಾರಿ ನಿರ್ದೇಶನಾಲಯವು ಮುಡಾದ ಮೂಲ ದಾಖಲೆಗಳನ್ನು ಸಂಗ್ರಹಿಸಲು ಮೈಸೂರು ಮುಡಾ ಕಚೇರಿ ಮೇಲೆ ನಿನ್ನೆ ದಾಳಿ ನಡೆಸಿದೆ. ಈ ಪ್ರಕರಣ ತನಿಖೆ ಸಿಬಿಐಗೆ ವಹಿಸುವುದೇ ಸೂಕ್ತ ಎಂದು ರವಿಕುಮಾರ್ ಹೇಳಿದ್ದಾರೆ.
ಮುಡಾ ಕಚೇರಿ ಮತ್ತು ಮುಡಾ ಪ್ರಕರಣದ ಆರೋಪಿಯಾಗಿರುವ ದೇವರಾಜು ಎಂಬುವರ ಮನೆ ಮೇಲೆ ನಿನ್ನೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ತಡರಾತ್ರಿವರೆಗೂ ಅಧಿಕಾರಿಗಳು ಮುಡಾ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದರು ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾದಿಂದ ಹಂಚಿಕೆಯಾಗಿದ್ದ 14 ನಿವೇಶನ ಮತ್ತು ಕೆಸರೆ ಗ್ರಾಮದ ಜಮೀನಿಗೆ ಸಂಬಂಧಿಸಿ ದಾಖಲೆಗಳನ್ನು ಕೂಡ ಪರಿಶೀಲಿಸಿದ್ದಾರೆ. ತಾಲೂಕು ಕಚೇರಿಯಲ್ಲೂ ಜಮೀನುಗಳ ದಾಖಲೆ ಪರಿಶೀಲನೆ ನಡೆಸಿದ್ದು, ತಹಶೀಲ್ದಾರ್, ಎಫ್ಡಿಎ, ಎಸ್ಡಿಎ ಸೇರಿದಂತೆ ಇದಕ್ಕೆ ಸಂಬಂಧಿಸಿದವರ ಬಳಿಯೂ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆಯಿಂದ ದಾಖಲೆ ಪರಿಶೀಲನೆಗೆ ಮುಂದಾಗಿರುವ ಇಡಿ ಅಧಿಕಾರಿಗಳು ಇಂದೂ ಸಹ ಕಾರ್ಯಾಚರಣೆ ಮುಂದುವರಿಸಲಿದ್ದಾರೆ. ಮುಡಾ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮತ್ತೆ ಪರಿಶೀಲನೆ ಮುಂದುವರಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಇದರಿಂದ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.











Click it and Unblock the Notifications