Anna Bhagya: ಹಣ ತಿನ್ನೋಕೆ ಆಗುತ್ತಾ, ಅಕ್ಕಿ ಕೊಡಲಿ: ಸರ್ಕಾರದ ವಿರುದ್ದ ಎನ್ ರವಿ ಕುಮಾರ್ ಆಕ್ರೋಶ
ಬೆಂಗಳೂರು, ಜೂನ್ 28: ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಕೊಡುವ ಯೋಜನೆಗೆ ಸಮರ್ಪಕವಾಗಿ ಅಕ್ಕಿ ವಿತರಣೆಯಾಗದ ಹಿನ್ನಲೆಯಲ್ಲಿ, ಹಣವನ್ನು ಕೊಡಲು ಸರ್ಕಾರ ನಿರ್ಧರಿಸಿದ್ದು, ಸರ್ಕಾರದ ನಡೆಗೆ ಬಿಜೆಪಿ ಆಕ್ರೋಶವನ್ನ ವ್ಯಕ್ತಪಡಿಸಿದೆ.
ಈ ಕುರಿತು ಬುಧವಾರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರಕ್ಕೆ ನೈತಿಕತೆ ಇಲ್ಲ. ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ, ತಲಾ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದರು. ನೀವು ಈಗ ಜನಕ್ಕೆ ಮೋಸ ಮಾಡಿದ್ದೀರಿ. ಹಣ ತಿನ್ನೋಕೆ ಆಗಲ್ಲ ಅಕ್ಕಿ ಕೊಡ್ತೇವೆ ಎಂದು ಹೇಳಿದ್ರಿ, ಈಗ ಕೊಡಪ್ಪ ಅಕ್ಕಿನಾ ಎಂದು ಕಿಡಿಕಾರಿದ್ದಾರೆ.

ಅಕ್ಕಿ ವಿಚಾರವಾಗಿ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಅಕ್ಕಿ ಅಭಿಯಾನ ಕೂಡ ಮಾಡುತ್ತೇವೆ. ಯಡಿಯೂರಪ್ಪರಿಗೆ ನೈತಿಕತೆ ಪ್ರಶ್ನೆ ಮಾಡಿದಿರಾ..? ಇವಾಗ ನಿಮಗೆ ಯಾವ ನೈತಿಕತೆ ಇದೆ
ನಾವು ಈ ನೈತಿಕತೆ ಇಟ್ಟುಕೊಂಡೇ ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಅಕ್ಕಿ ಬದಲು ಹಣ ನೀಡುವ ಕುರಿತ ಸರ್ಕಾರದ ನಿರ್ಣಯಕ್ಕೆಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಸರ್ಕಾರ ವಚನ ಭ್ರಷ್ಟ ಸರ್ಕಾರ. ಅಕ್ಕಿ ಕೊಡದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ, ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದರು. ನಮ್ದು ಸೇರಿ ಒಟ್ಟು 15 ಕೆಜಿ ಅಕ್ಕಿ ಕೊಡಬೇಕಿತ್ತು. ಇವಾಗ ಅಕ್ಕಿಗೆ ಹಣ ಹಾಕೋಕೆ ಹೊರಟಿದ್ದಾರೆ. ಹಣ ಏನು ತಿನ್ನೋಕೆ ಆಗುತ್ತಾ ಅಂತಾ ಸಿದ್ದರಾಮಯ್ಯ ಅವರನ್ನ ಪ್ರಶ್ನಿಸಿದ್ದಾರೆ.
ನಿಮಗೆ ಶಕ್ತಿ ಇದರೆ 10 ಅಕ್ಕಿ ಕೊಡಬೇಕು. ಹಣ ಹಾಕುವ ಡೋಂಘಿ ರಾಜಕಾರಣ ಸರಿಯಲ್ಲ, ಇದನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಬೇಕುಇಲ್ಲವದಲ್ಲಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ನಳೀನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದರು.
ಈ ಕುರಿತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಮಾತನಾಡಿ, ಅಕ್ಕಿಗೆ ದುಡ್ಡು ಕೊಡೊದೆ ಆದರೆ ಐದು ಕೆಜಿಗೆ ಕೊಡ್ತಾರಾ..? ಹತ್ತು ಕೆಜಿ ಅಕ್ಕಿಗೆ ದುಡ್ಡು ಕೊಡ್ತಾರಾ..? ಇವರು ಹೇಳಿದ್ದು ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದರು. ಜನರಿಗೆ ಟೊಪ್ಪಿ ಹಾಕಿದ್ದಾರೆ. ಎಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಅವರಿಗೆ ಏನು ಮಾಡ್ತೀರಿ.? ಕೇಂದ್ರ ಅಂತ್ಯೋದಯ ಕಾರ್ಡ್ ದಾರರಿಗೆ 35 ಕೆ ಜಿ ಕೊಡ್ತಾ ಇದೆ. 5 ಕೆಜಿ ಕೂಡ ಕೇಂದ್ರ ಕೊಡ್ತಾ ಇದೆ. ಒಂದು ತಗೊಂಡ್ರೆ ಒಂದು ಫ್ರೀ ಎನ್ನುತ್ತಾರೆ. ಆದರೆ ಎರಡು ಬೆಲೆಯನ್ನು ಒಂದಕ್ಕೆ ಸೇರಿಸಿ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ ಸರ್ಕಾರ ಕೂಡ ಅದೇ ರೀತಿ ಮಾಡುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ : ಜಮೀರ್ ಅಹಮದ್
ರಾಜ್ಯ ಕಾಂಗ್ರೆಸ್ ಸರ್ಕಾರದ ಬಿಪಿಎಲ್ ಕುಟುಂಬಗಳಿಗೆ ತಲಾ ಹತ್ತು ಕೆಜಿ ಅಕ್ಕಿ ಕೊಡುವ ಗ್ಯಾರಂಟಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಎಷ್ಟೇ ಅಸಹಾಕಾರ ತೋರಿದರೂ ನಾವು ನಮ್ಮ ಬದ್ಧತೆ ತೋರಿದ್ದೇವೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡದೆ ತೊಂದರೆ ನೀಡಿದರೂ ಬಿಪಿಎಲ್ ಕುಟುಂಬಗಳಿಗೆ ಅಕ್ಕಿ ಬದಲು ಕೆಜಿಗೆ 34 ರೂ. ನಂತೆ ಹಣ ನೀಡಲು ಸಂಪುಟ ಸಭೆ ನಿರ್ಣಯ ಮಾಡಿದ್ದು ಇದು ಕಾಂಗ್ರೆಸ್ ನ ಜನಪರ ನಿಲುವಿಗೆ ಸಾಕ್ಷಿ ಎಂದು ಹೇಳಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಹತ್ತು ಕೆಜಿ ಅಕ್ಕಿ ಕೊಡುವ ವಾಗ್ದಾನ ಪೂರೈಸಿಯೇ ತೀರುತ್ತದೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಈಗಲಾದರೂ ಕೇಂದ್ರ ಬಿಜೆಪಿ ಸರ್ಕಾರ ಜನವಿರೋಧಿ ಧೋರಣೆ ಕೈ ಬಿಟ್ಟು ರಾಜ್ಯದ ಜನಪರ ಯೋಜನೆಗೆ ಸಹಕಾರ ನೀಡಲಿ ಎಂದು ತಿಳಿಸಿದ್ದಾರೆ.
ಸಂಪುಟ ಸಭೆಯಲ್ಲಿ ರಾಜ್ಯದ ಬಡವರಿಗೆ 5ಕೆಜಿ ಉಚಿತ ಅಕ್ಕಿ ಹಾಗು ಇನ್ನುಳಿದ 5 ಕೆಜಿಗೆ ಬದಲಾಗಿ ಕೆಜಿಗೆ 34ರೂ ಗಳಂತೆ ಹಣ ಸಿಗಲಿದೆ. ಆದಷ್ಟು ಬೇಗ ಇನ್ನುಳಿದ 5ಕೆಜಿ ಅಕ್ಕಿ ಕೂಡ ಕೊಡುವ ವ್ಯವಸ್ಥೆ ಕಲ್ಪಿಸಲಾಗುವುದು. ಎಫ್ ಸಿಐ ಗೋದಾಮಿನಲ್ಲಿ ಎಂಟು ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇಟ್ಟುಕೊಂಡು ರಾಜ್ಯಕ್ಕೆ ಪೂರೈಕೆ ಮಾಡುವ ಬಗ್ಗೆ ಸಮ್ಮತಿ ಪತ್ರ ಕೊಟ್ಟು ಅಕ್ಕಿ ನೀಡದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ರಾಜ್ಯ ಬಿಜೆಪಿ ನಾಯಕರು ರಾಜ್ಯದ ಜನತೆಗೆ ಉತ್ತರಿಸಲಿ ಎಂದು ಅಗ್ರಹಿಸಿದ್ದಾರೆ.












Click it and Unblock the Notifications