2 ದಿನದಿಂದ ಯತ್ನಾಳ್ 'ನಾಟ್ ರೀಚೆಬಲ್', ವರಿಷ್ಠರ ಬಳಿಯೂ ಹೋಗಲಿಲ್ಲವೇ?
ಬಿಜೆಪಿಯ ವಿಜಯಪುರದ ಶಾಸಕ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಕಟ್ಟಾ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್, ಭಾನುವಾರದ (ಫೆ 21) ಪಂಚಮಶಾಲಿ ಸಮುದಾಯದ ಸಮಾವೇಶದ ನಂತರ ನಾಟ್ ರೀಚೆಬಲ್ ಆಗಿದ್ದಾರೆ ಎನ್ನುವ ಮಾಹಿತಿಯಿದೆ.
ಪಕ್ಷದ ನಾಯಕರ ವಿರುದ್ದ ಹರಿಹಾಯುತ್ತಲೇ ಇರುವ ಯತ್ನಾಳ್ ವಿರುದ್ದ ಬಿಜೆಪಿ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ, ಹನ್ನೊಂದು ಪುಟದ ಉತ್ತರವನ್ನೂ ಯತ್ನಾಳ್ ನೀಡಿದ್ದರು. ಆದರೆ, ಇದಾದ ನಂತರವೂ ಪಕ್ಷಕ್ಕೆ ಮುಜುಗರ ತರುವ ಹೇಳಿಕೆಯನ್ನು ಯತ್ನಾಳ್ ನೀಡುತ್ತಲೇ ಬರುತ್ತಿದ್ದರು.
ಪಂಚಮಶಾಲಿ ಸಮುದಾಯದ 2A ಮೀಸಲಾತಿ ಹೋರಾಟದ ವೇಳೆ, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು, ಇಡೀ ಬಿಜೆಪಿ ಪಕ್ಷವೇ ಪಂಚಮಶಾಲಿಗಳ ವಿರುದ್ದ ಇದೆ ಎನ್ನುವಂತೆ ಯತ್ನಾಳ್ ಬಿಂಬಿಸಿದ್ದರು.
ಇವೆಲ್ಲಾ ಬೆಳವಣಿಗೆಯ ನಂತರ, ಯತ್ನಾಳ್ ವಿರುದ್ದ ಗರಂ ಆಗಿದ್ದ ಬಿಜೆಪಿ ವರಿಷ್ಠರು ದೆಹಲಿಗೆ ಬರುವಂತೆ ಸೂಚಿಸಿದ್ದರು ಎಂದು ವರದಿಯಾಗಿತ್ತು. ಹಾಗಾಗಿ, ಎರಡು ದಿನದ ಹಿಂದೆಯೇ ಯತ್ನಾಳ್ ರಾಜಧಾನಿಗೆ ದೌಡಾಯಿಸಿದ್ದರು ಎಂದು ಹೇಳಲಾಗಿತ್ತು.

ಪಂಚಮಶಾಲಿಗಳ ಸಮಾವೇಶ
ಆದರೆ, ಭಾನುವಾರದ ಪಂಚಮಶಾಲಿಗಳ ಸಮಾವೇಶದ ನಂತರ ಯತ್ನಾಳ್ ಅವರು ಎಲ್ಲೂ ಕಾಣಿಸಿಕೊಂಡಿಲ್ಲ. ಬಸವ ಜಯಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲೂ ಯತ್ನಾಳ್ ಕಾಣಿಸಿಕೊಂಡಿಲ್ಲ. ಇವೆಲ್ಲದರ ಮಧ್ಯೆ, ಬಿಎಸ್ವೈ ಸರಕಾರದ ಸಚಿವರಾದ ನಿರಾಣಿ ಮತ್ತು ಸಿ.ಸಿ.ಪಾಟೀಲ್ ಅವರು ಯತ್ನಾಳ್ ವಿರುದ್ದ ಕಿಡಿಕಾರಿದ್ದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
ಬಿಜೆಪಿಯ ವರಿಷ್ಠರು ಯತ್ನಾಳ್ ಅವರನ್ನು ಕರೆಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ, ಯತ್ನಾಳ್ ಅವರು ದೆಹಲಿಗೂ ಹೋಗದೇ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಇನ್ನೊಂದು ಕಡೆ ಒಂದು ದಿನದ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಯತ್ನಾಳ್ ಭೇಟಿಯಾಗಿದ್ದರು ಎಂದೂ ಹೇಳಲಾಗುತ್ತಿದೆ.

ನನಗೆ ನೋಟಿಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗುವುದಿಲ್ಲ
ಬಿಜೆಪಿಯ ಶಿಸ್ತುಸಮಿತಿಯ ಮುಂದೆ ಹಾಜರಾಗುವಂತೆ ಯತ್ನಾಳ್ ಅವರಿಗೆ ಪಕ್ಷದಿಂದ ಸೂಚನೆ ಹೋಗಿದೆ ಎನ್ನುವ ಮಾಹಿತಿಯಿದೆ. "ನನಗೆ ನೋಟಿಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗುವುದಿಲ್ಲ. ಇದರಿಂದ ನನ್ನನ್ನು ಭಯ ಪಡಿಸಬಹುದು ಎಂದು ಯಾರಾದರೂ ತಿಳಿದುಕೊಂಡಿದ್ದರೆ, ಅವರು ಕುರ್ಚಿ ಖಾಲಿಯಾಗುತ್ತದೆ"ಎಂದು ಯತ್ನಾಳ್ ಹೇಳಿದ್ದರು.
Recommended Video

ಪಂಚಮಶಾಲಿ ಹೋರಾಟದಲ್ಲಿ ಬಿರುಕು
ಈ ನಡುವೆ, ಸಮುದಾಯದ ಹೋರಾಟದಲ್ಲಿ ಮಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ವಚನಾನಂದಸ್ವಾಮಿ ಧರಣಿಯಿಂದ ದೂರ ಉಳಿದಿದ್ದಾರೆ. "ಸಮುದಾಯದ ಹೋರಾಟವನ್ನು ರಾಜಕೀಯ ಮತ್ತು ಸ್ವಹಿತಾಶಕ್ತಿಗೆ ಬಳಸಿಕೊಳ್ಳಲಾಗುತ್ತಿದೆ. ಯಾರದ್ದೋ ತೇಜೋವಧೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ"ಎಂದು ಪರೋಕ್ಷವಾಗಿ ಬಿಎಸ್ವೈ ವಿರುದ್ದ ಯತ್ನಾಳ್ ಟೀಕೆ ಮಾಡುತ್ತಿರುವುದಕ್ಕೆ ಶ್ರೀಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications