Transport Employees Strike: ಕರ್ನಾಟಕದ ಸಾರಿಗೆ ಮುಷ್ಕರಕ್ಕೆ ಬಿಜೆಪಿ ಬೆಂಬಲ
ಬೆಂಗಳೂರು, ಡಿಸೆಂಬರ್ 28: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರ ನಡೆಸುವುದಾಗಿ ಘೋಷಣೆ ಮಾಡಿದೆ. ಡಿಸೆಂಬರ್ 31ರಿಂದ ಈ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಲಿದೆ. ಆದರೆ ಮುಷ್ಕರದ ಸಮಯದಲ್ಲಿ ಸರ್ಕಾರಿ ಬಸ್ಗಳ ಸಂಚಾರ ಇರುತ್ತದೆಯೋ?, ಇಲ್ಲವೋ? ಎಂಬುದು ಇನ್ನೂ ಸಹ ಗೊಂದಲವಾಗಿದೆ. ಮುಷ್ಕರ ತಡೆಯಲು ಸರ್ಕಾರ ಸಹ ಕ್ರಮಗಳನ್ನು ಕೈಗೊಳ್ಳುತ್ತಿದೆ. ಡಿಸೆಂಬರ್ 30ರಂದು ಸಭೆಯನ್ನು ಸಹ ಕರೆದಿದೆ.
ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಬಂದ್ಗೆ ಸಂಪೂರ್ಣ ಬೆಂಬಲವನ್ನು ನೀಡಿದೆ. ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಈ ಅನಿರ್ದಿಷ್ಟಾವಧಿ ಮುಷ್ಕರ ಬಗ್ಗೆ ಈಗಾಗಲೇ ಬೆಳಗಾವಿಯ ಚಳಿಗಾಲದ ಅಧಿವೇಶನದ ಸಮಯದಲ್ಲಿಯೇ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ. ಸರ್ಕಾರಿ ಸಾರಿಗೆ ನೌಕರರ ಮುಷ್ಕರ ತಡೆಯಲು ನಾಲ್ಕೂ ನಿಗಮಗಳ ನಿವೃತ್ತ ಸಿಬ್ಬಂದಿಗೆ ನೀಡಬೇಕಾದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಪಾವತಿಗೆ ಆದೇಶವನ್ನು ನೀಡಿದೆ.
ಈ ಮುಷ್ಕರಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ 4 ನಿಗಮಗಳ ಸಂಘಟನೆಗಳ ಒಕ್ಕೂಟ ಬೆಂಬಲ ನೀಡದಿರಲು ತೀರ್ಮಾನಿಸಿದೆ. ಅಲ್ಲದೇ ಸರ್ಕಾರದ ಆದೇಶದ ಬಳಿಕವೂ ಮುಷ್ಕರವನ್ನು ವಾಪಸ್ ಪಡೆಯುವ ಕುರಿತು ಜಂಟಿ ಕ್ರಿಯಾ ಸಮಿತಿ ಯಾವುದೇ ಘೋಷಣೆ ಮಾಡಿಲ್ಲ. ಬಸ್ ಸೇವೆ ಎಂದಿನಂತೆ ಇರಲಿದೆ ಎಂದು ಕೆಎಸ್ಆರ್ಟಿಸಿ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ.
ಮುಷ್ಕರಕ್ಕೆ ಬಿಜೆಪಿ ಬೆಂಬಲ: ಸಾರಿಗೆ ನೌಕರರ ಮುಷ್ಕರಕ್ಕೆ ಕರ್ನಾಟಕ ಬಿಜೆಪಿ ಬೆಂಬಲ ಘೋಷಣೆ ಮಾಡಿದೆ. ಈ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, "ಸಾರಿಗೆ ಇಲಾಖೆಗೆ ಬಾಕಿ ಕೊಡದ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ನೌಕರರು ಕರೆ ನೀಡಿರುವ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ" ಎಂದು ತಿಳಿಸಿದ್ದಾರೆ.
"ಸಾರಿಗೆ ಇಲಾಖೆಗೆ ಸರ್ಕಾರ 7401 ಕೋಟಿ ಬಾಕಿ ಕೊಡಬೇಕಿದೆ. ಸಿದ್ದರಾಮಯ್ಯ ಜಾತ್ರೆ ಮಾಡುತ್ತಿದ್ದಾರೆ. ಆ ಯೋಜನೆ ತಂದಿರುವೆ, ಈ ಯೋಜನೆ ಜಾರಿಗೊಳಿಸಿರುವೆ ಎಂದು ಹೇಳುತ್ತಿದ್ದಾರೆ. ಇಷ್ಟು ಬಾಕಿ ಉಳಿಸಿಕೊಂಡಿರುವ ಅವರು ಯಾವ ಸಾಧನೆ ಮಾಡಿದ್ದಾರೆ?" ಎಂದು ಪಿ. ರಾಜೀವ್ ಪ್ರಶ್ನೆ ಮಾಡಿದರು.
"ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಾರಿಗೆ ಇಲಾಖೆಯ ಸಭೆಯನ್ನು ಮಾಡಲಾಗಿದೆ. ಸುಮಾರು 3650 ಕೋಟಿ ನಷ್ಟವಾಗಿದೆ ಎಂದು ಸಭೆಯಲ್ಲಿ ಚರ್ಚೆಯಾಗಿದೆ. ನಷ್ಟ ಸರಿದೂಗಿಸಲು ಶೇ 15ರಷ್ಟು ಪ್ರಯಾಣ ದರ ಏರಿಕೆ, 250 ಎಕರೆ ಜಾಗ ಬಳಕೆ ಮಾಡಿಕೊಂಡು ಆದಾಯ ಸಂಗ್ರಹಣೆ ಮಾಡಲು ಸೂಚನೆ ನೀಡಲಾಗಿದೆ. ಸಾಲ ಮಾಡಿದರೂ ಸಹ ಸರ್ಕಾರ ಸಾರಿಗೆ ನಿಗಮಗಳಿಗೆ ಹಣ ಕೊಟ್ಟಿಲ್ಲ" ಎಂದು ಆರೋಪಿಸಿದರು.
"ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಪಿಎಫ್ ಬಾಕಿ ಇತ್ತು. ಅದಕ್ಕೆ 1,200 ಕೋಟಿ ಬಿಡುಗಡೆ ಮಾಡಿದ್ದರು. ಡಿಸೇಲ್ ಬಾಕಿಗೆ 800 ಕೋಟಿ ಬಿಡುಗಡೆ ಮಾಡಿದರು. ಬಿಜೆಪಿ ಸರ್ಕಾರದಲ್ಲಿ ಬಸ್ ಖರೀದಿಗೆ ಅನುಮತಿ ಕೊಡಲಾಗಿತ್ತು. ಇವರು ದುಡ್ಡು ಬಿಡುಗಡೆ ಮಾಡಿದ್ದಾರೆ. ಆದರೆ ಅದಕ್ಕೆ ಅನುಮೋದನೆ ಕೊಟ್ಟಿದ್ದು ಬಿಜೆಪಿ ಅವಧಿಯಲ್ಲಿ. ಈಗ ಸರ್ಕಾರ ದಿವಾಳಿ ಆಗಿದೆ" ಎಂದು ದೂರಿದರು.
"ಹಣ ಕೊಡಿ ಎಂದು ಸಾರಿಗೆ ನೌಕರರು ಮುಷ್ಕರ ನಡೆಬೇಕಾಗಿದೆ. ಇಂತಹ ಸಾರಿಗೆ ಸಚಿವರು ಇರುವುದು ನಮ್ಮ ದುರ್ದೈವವಾಗಿದೆ. ಸಾರಿಗೆ ನಿಗಮಕ್ಕೆ ಹಣ ಕೊಟ್ಟಿಲ್ಲ. ಸಾರಿಗೆ ನೌಕರರು ಇದಕ್ಕಾಗಿ ಹೋರಾಟ ಆರಂಭಿಸಿದ್ದಾರೆ. ಬಿಜೆಪಿ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಡಲಿದೆ. ಕೂಡಲೇ ಬಾಕಿ ಹಣ ಸರ್ಕಾರ ಬಿಡುಗಡೆ ಮಾಡಬೇಕು ಸರ್ಕಾರವನ್ನು ಆಗ್ರಹಿಸಲಿದೆ" ಎಂದು ಪಿ. ರಾಜೀವ್ ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಅಡಿ ಕೆ.ಎಸ್.ಆರ್.ಟಿ.ಸಿ, ಸ್ಟಾಫ್ & ವರ್ಕರ್ಸ್ ಫೆಡರೇಷನ್ (ಎ.ಐ.ಟಿ.ಯು.ಸಿ.), ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ (ಸಿ.ಐ.ಟಿ.ಯು.), ಕೆ.ಎಸ್.ಆರ್.ಟಿ.ಸಿ. ಪ.ಜಾ. ಮತ್ತು ಪ.ಪಂ. ನೌಕರರ ಸಂಘ (40/ 78), ಕ.ರಾ.ರ.ಸಾ.ಸಂಸ್ಥೆ ಪ.ಜಾ. /ಪ.ಪಂ.ಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) (671/ 2001), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ (ರಿ) ಇವೆ.
ಪ್ರಮುಖ ಬೇಡಿಕೆಗಳು
* 01.01.2020 ರಿಂದ 38 ತಿಂಗಳ ವೇತನ ಹಿಂಬಾಕಿ ಪಾವತಿಸಲೇಬೇಕು.
* 01.01.2024 ರಿಂದ ಹೊಸ ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆ ಇತ್ಯರ್ಥಪಡಿಸಬೇಕು.
* ನಿವೃತ್ತರಾದ ನೌಕರರಿಗೆ 27.06.2024ರ ಸುತ್ತೋಲೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು.












Click it and Unblock the Notifications