ಅನರ್ಹ ಶಾಸಕರ ತೀರ್ಪಿನ ಬಳಿಕ ಬಿಜೆಪಿ ಮಹತ್ವದ ಸಭೆ
ಬೆಂಗಳೂರು, ನವೆಂಬರ್ 13 : ಶಾಸಕರ ಅನರ್ಹತೆ ಬಗ್ಗೆ ಸುಪ್ರೀಂಕೋರ್ಟ್ನಿಂದ ಬುಧವಾರ ತೀರ್ಪು ಹೊರಬೀಳಲಿದೆ. ಈ ತೀರ್ಪಿನ ಬಳಿಕ ಕರ್ನಾಟಕ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಕರೆಯಲಾಗಿದೆ.
ಬುಧವಾರ ಮಧ್ಯಾಹ್ನ 3 ಗಂಟೆಯ ಬಳಿಕ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.
ಡಿಸೆಂಬರ್ 5ರಂದು ನಡೆಯಲಿರುವ 15 ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಈ ಸಭೆ ನಡೆಯಲಿದೆ. ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಅನರ್ಹ ಶಾಸಕರು ಚುನಾವಣಾ ಕಣಕ್ಕಿಳಿಯಬಹುದೇ? ಎಂದು ಸ್ಪಷ್ಟಪಡಿಸಲಿದೆ.

ಕಾಂಗ್ರೆಸ್ ಈಗಾಗಲೇ 15 ಕ್ಷೇತ್ರಗಳ ಪೈಕಿ 8 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ, ಬಿಜೆಪಿ ಮತ್ತು ಜೆಡಿಎಸ್ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ತೀರ್ಪಿನ ಬಳಿಕ ನಡೆಯಲಿರುವ ರಾಜಕೀಯ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.
ಅನರ್ಹ ಶಾಸಕರು ಚುನಾವಣಾ ಕಣಕ್ಕಿಳಿಯಲು ಅವಕಾಶ ಸಿಗದಿದ್ದರೆ ರಾಜಕೀಯ ಹೈಡ್ರಾಮ ನಡೆಯಲಿದೆ. ಶಾಸಕರು ತಮ್ಮ ಕುಟುಂಬ ಸದಸ್ಯರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಬೇಡಿಕೆ ಇಡಬಹುದು. ಇದು ಸ್ಥಳೀಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಲಿದೆ.
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಬಿ. ಎಸ್. ಯಡಿಯೂರಪ್ಪ ಮಧ್ಯಾಹ್ನ 3 ಗಂಟೆ ತನಕ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಸಹಜವಾಗಿಯೇ ತೀರ್ಪಿನ ಬಗ್ಗೆ ಸಿಎಂಗೆ ಟೆಂಕ್ಷನ್ ಹೆಚ್ಚಿದೆ. ಮಧ್ಯಾಹ್ನದ ತನಕ ಅವರು 'ಧವಳಗಿರಿ' ನಿವಾಸದಲ್ಲಿಯೇ ಇರಲಿದ್ದಾರೆ.
ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ದೆಹಲಿ ತಲುಪಿದ್ದಾರೆ. ಅನರ್ಹ ಶಾಸಕರ ಜೊತೆ ಅವರು ಇದ್ದು, ದೆಹಲಿಯಲ್ಲಿ ನಡೆಯಲಿರುವ ಬೆಳವಣಿಗೆ ಕುರಿತು ಯಡಿಯೂರಪ್ಪಗೆ ಮಾಹಿತಿಯನ್ನು ಕೊಡಲಿದ್ದಾರೆ.












Click it and Unblock the Notifications