ಬಿಜೆಪಿ ಜೊತೆ ಮೈತ್ರಿ: ಕುಮಾರಸ್ವಾಮಿ ಹೇಳಿಕೆಯಿಂದಲೇ ಗೊಂದಲ ಶುರುವಾಗಿದ್ದು
Recommended Video

ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅತ್ತ ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ಮಂಗಳವಾರ (ಮಾ 27) ನಡೆಯುತ್ತಿದ್ದರೆ ಇತ್ತ ಬಿಜೆಪಿ - ಜೆಡಿಎಸ್ ಮೈತ್ರಿಯ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ತಾಣದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ದೇವೇಗೌಡ್ರು, ಕುಮಾರಸ್ವಾಮಿ, ಯಡಿಯೂರಪ್ಪ ಆದಿಯಾಗಿ ಬಿಜೆಪಿ ಮುಖಂಡರು ಮೈತ್ರಿಯ ವಿಚಾರವನ್ನು ಅಲ್ಲಗಳೆಯುತ್ತಿದ್ದರೂ, ಕಾಂಗ್ರೆಸ್ಸಿನ ಕೆಲವು ಮುಖಂಡರು ಮತ್ತೆ ಮತ್ತೆ ಮೈತ್ರಿಯ ವಿಚಾರವನ್ನು ಪ್ರಸ್ತಾವಿಸುತ್ತಿದ್ದಾರೆ. ಹಾಗಾದರೆ, ಈ ಗೊಂದಲಕ್ಕೆ ಕಾರಣವಾದ ಅಂಶಯಾವುದು?
ದೇವೇಗೌಡ್ರು, ಕಾಂಗ್ರೆಸ್ ಜೊತೆ ಮೈತ್ರಿಯ ಸಂಬಂಧ ಅಡ್ಡಗೋಡೆಯ ಮೇಲೆ ದೀಪ ಇಟ್ಟಹಾಗೆ ಹೇಳಿಕೆ ನೀಡಿದ್ರೂ, ಕುಮಾರಸ್ವಾಮಿ ಬಿಜೆಪಿಯ ವಿಚಾರದಲ್ಲಿ ನೀಡಿದ ಹೇಳಿಕೆಗೆ ಹೊಸ ಅರ್ಥ ಹುಟ್ಟಿ ಚರ್ಚೆಯ ವಿಷಯವಾಗಿದ್ದು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಇತ್ತೀಚಿನ ಕರ್ನಾಟಕ ಪ್ರವಾಸದ ವೇಳೆ, ಜೆಡಿಎಸ್ ಪಕ್ಷ ಬಿಜೆಪಿಯ 'ಬಿ ಟೀಂ' ಎನ್ನುವ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸುತ್ತಾ ಕುಮಾರಸ್ವಾಮಿ ನೀಡಿದ ಹೇಳಿಕೆ, ಬಿಜೆಪಿ ಜೊತೆ ಮುಂದಿನ ದಿನಗಳಲ್ಲಿ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನುವ ಅರ್ಥ ಬರುವಂತಿತ್ತು.
ತಾನು ನೀಡಿದ ಹೇಳಿಕೆ ಚರ್ಚೆಯ ವಿಷಯವಾಗುತ್ತಿದೆ ಎನ್ನುವುದನ್ನು ಅರಿತ ಕುಮಾರಸ್ವಾಮಿ, ಎರಡೂ ರಾಷ್ಟ್ರೀಯ ಪಕ್ಷಗಳನ್ನು ಬೆಂಡೆತ್ತುವ ಕೆಲಸಕ್ಕೆ ಮುಂದಾದರೂ, ಅತಂತ್ರ ಫಲಿತಾಂಶ ಬಂದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಕಾ ಎನ್ನುವ ರೀತಿಯಲ್ಲೇ ವ್ಯಾಖ್ಯಾನಿಸಲಾಗುತ್ತಿರುವುದು ಜೆಡಿಎಸ್ ಅನ್ನು ಗೊಂದಲಕ್ಕೀಡು ಮಾಡಿದೆ. ಅಸಲಿಗೆ ಕುಮಾರಸ್ವಾಮಿ ಹೇಳಿದ್ದೇನು? ಮುಂದೆ ಓದಿ..

ಹಳೇ ಮೈಸೂರು ಭಾಗದಲ್ಲಿ ಮಿಂಚಿನ ಚುನಾವಣಾ ಪ್ರಚಾರ
ಕೆಲವು ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಹಳೇ ಮೈಸೂರು ಭಾಗದಲ್ಲಿ ಚುನಾವಣಾ ಪ್ರಚಾರದಲ್ಲಿದ್ದರು. ಹಳೇ ಮೈಸೂರು ಎಂದರೆ ಜೆಡಿಎಸ್ ಪ್ರಾಭಲ್ಯವಿರುವ ಕ್ಷೇತ್ರಗಳು ಎನ್ನುವುದು ಗೊತ್ತಿರುವ ವಿಚಾರ. ಬಿಜೆಪಿಯನ್ನು ಬಿಟ್ಟು ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ್ದ ರಾಹುಲ್, ಜೆಡಿಎಸ್ ಪಕ್ಷವನ್ನು ಬಿಜೆಪಿಯ ' ಬಿ ಟೀಂ' ಎಂದು ಅಣಕವಾಡಿದ್ದರು.

ಜೆಡಿಎಸ್ ಅಂದರೆ ಜಾತ್ಯಾತೀತ ಜನತಾದಳ ಸಂಘಪರಿವಾರ
ಜೆಡಿಎಸ್ ಅಂದರೆ ಹಿಂದೆ ಜಾತ್ಯಾತೀತ ಜನತಾದಳ ಸೆಕ್ಯೂಲರ್ ಎಂದಿತ್ತು, ಆದರೆ ಈಗ ಹಾಗಿಲ್ಲ. ಈಗ ಜೆಡಿಎಸ್ ಅಂದರೆ ಜಾತ್ಯಾತೀತ ಜನತಾದಳ ಸಂಘಪರಿವಾರ ಎಂದು ರಾಹುಲ್ ಛೇಡಿಸಿದ್ದರು. ಈ ಭಾಗದಲ್ಲಿನ ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಲು ರಾಜ್ಯ ಕಾಂಗ್ರೆಸ್ ಮುಖಂಡರೇ ರಾಹುಲ್ ಗಾಂಧಿಗೆ ನೀಡಿದ ಐಡಿಯಾ ಇದು ಎಂದೇ ಹೇಳಲಾಗುತ್ತಿದೆ.

ನಾವೇನಾದರೂ ಬಿಜೆಪಿ ಜೊತೆ ಕೆಮ್ಮಿದರೆ, ಕಾಂಗ್ರೆಸ್ ಧೂಳೀಪಟ
ರಾಹುಲ್ ಹೇಳಿಕೆಗೆ ಕೆಂಡಾಮಂಡಲವಾದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, "ನನ್ನ ಮುಂದೆ ರಾಹುಲ್ ಏನೂ ಅಲ್ಲ. ಒಂದು ಬರೆದಿಟ್ಟುಕೊಳ್ಳಿ, ನಾವೇನಾದರೂ ಬಿಜೆಪಿ ಮುಖಂಡರ ಜೊತೆ ಒಂದೇ ವೇದಿಕೆಯಲ್ಲಿ ಕೆಮ್ಮಿದರೆ, ಕಾಂಗ್ರೆಸ್ ಧೂಳೀಪಟವಾಗುತ್ತದೆ" ಎಂದು ಪಕ್ಷದ ಪ್ರಚಾರ ಸಭೆಯಲ್ಲಿ ಹೇಳಿದ್ದರು.

ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಮುನ್ಸೂಚನೆಯೇ?
ಕುಮಾರಸ್ವಾಮಿಯವರ ಹೇಳಿಕೆಗೆ ಪಕ್ಷದ ಪ್ರಚಾರ ಸಮಾವೇಶದಲ್ಲಿ ವ್ಯಾಪಕ ಕರತಾಡನ ವ್ಯಕ್ತವಾದರೂ, ಎಚ್ಡಿಕೆ ಈ ನೀಡಿದ ಹೇಳಿಕೆ ಬೇರೇನೋ ಅರ್ಥಬರುವಂತಾಗಿದೆ. ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ, ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಮುನ್ಸೂಚನೆಯೇ ಕುಮಾರಸ್ವಾಮಿಯವರ ಈ ಹೇಳಿಕೆ ಎಂದು ಚರ್ಚಿಸಲಾಗುತ್ತಿದೆ.

ಜೆಪಿ, ಜೆಡಿಎಸ್, ಕಾಂಗ್ರೆಸ್ ಅಥವಾ ಅತಂತ್ರನೋ?
ಚುನಾವಣಾ ದಿನಾಂಕ ಘೋಷಣೆಯಾದ ನಂತರ ಆಖಾಡ ಇನ್ನಷ್ಟು ರಂಗೇರುತ್ತಿದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಥವಾ ಅತಂತ್ರನೋ, ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಅವಶ್ಯಕತೆ ಬರುತ್ತೋ, ಇಲ್ಲವೋ? ಕುಮಾರಸ್ವಾಮಿ ಮತ್ತು ದೇವೇಗೌಡ್ರು ಮೈತ್ರಿಯ ವಿಚಾರದಲ್ಲಿ ಜನರಿಗಿರುವ ಗೊಂದಲವನ್ನು ದೂರಪಡಿಸಬೇಕಾಗಿದೆ.












Click it and Unblock the Notifications