ಬಿಜೆಪಿ ಸರ್ಕಾರ ರಚನೆಗೆ ಆಹ್ವಾನ ಕೊಟ್ಟಿರುವುದು ಸರಿಯಲ್ಲ : ಉಗ್ರಪ್ಪ
ಬೆಂಗಳೂರು, ಜುಲೈ 26 : "ಪಕ್ಷ 112 ಸದಸ್ಯರ ಬಲವನ್ನು ಹೊಂದಿದ್ದರೆ ಮಾತ್ರ ಸರ್ಕಾರ ರಚನೆಗೆ ಆಹ್ವಾನ ಕೊಡಬಹುದು. 105 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ರಾಜ್ಯಪಾಲರು ಆಹ್ವಾನ ಕೊಟ್ಟಿರುವುದು ಸರಿಯಲ್ಲ" ಎಂದು ಕಾಂಗ್ರೆಸ್ ನಾಯಕ ವಿ. ಎಸ್. ಉಗ್ರಪ್ಪ ಹೇಳಿದರು.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಪತ್ರಿಕಾಗೋಷ್ಠಿ ನಡೆಸಿದರು. "ಬಿಜೆಪಿ ಮತ್ತು ರಾಜ್ಯಪಾಲರು ಸೇರಿ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
"ಕಾಂಗ್ರೆಸ್-ಜೆಡಿಎಸ್ ಸರ್ಕಾರವಿದ್ದಾಗ ಸದನ ನಡೆಯುವಾಗ ರಾಜ್ಯಪಾಲರು ವಿಶ್ವಾಸಮತ ನಿರ್ಣಯದ ಬಗ್ಗೆ ತರಾತುರಿ ತೋರಿದರು. ಈಗ ಹೊಸ ಸರ್ಕಾರ ರಚನೆ ಮಾಡುವುದರಲ್ಲೂ ತರಾತುರಿ ತೋರುತ್ತಿದ್ದಾರೆ" ಎಂದು ಉಗ್ರಪ್ಪ ದೂರಿದರು.

"112 ಸದಸ್ಯರ ಬಲ ಇದ್ದರೆ ಮಾತ್ರ ಸರ್ಕಾರ ರಚನೆಗೆ ಆಹ್ವಾನ ಮಾಡಬಹುದು. ಆದರೆ, 105 ಸಂಖ್ಯಾಬಲ ಇರುವ ಬಿಜೆಪಿಗೆ ಆಹ್ವಾನ ಕೊಟ್ಟಿದ್ದು ಸರಿಯಲ್ಲ. ಹೊಸ ಸಂಪ್ರದಾಯವನ್ನು ರಾಜ್ಯಪಾಲರು ಆರಂಭಿಸಿದ್ದಾರೆ" ಎಂದು ಉಗ್ರಪ್ಪ ಹೇಳಿದರು.
"ಸದಸ್ಯ ಬಲ 112 ಆಗಬೇಕು ಅಂದರೆ ಕುದರೆ ವ್ಯಾಪಾರ ಮಾಡುವುದು ಒಂದೇ ಇವರ ಮುಂದೆ ಇರುವ ದಾರಿ. ಇದಕ್ಕೆ ರಾಜ್ಯಪಾಲರು ಕುಮ್ಮಕ್ಕು ಕೊಡುತ್ತಿದ್ದಾರೆ. ಹೊಸ ಸಂಪ್ರದಾಯ ಆರಂಭ ಮಾಡುವುದು ಬಿಟ್ಟು ಜನಾದೇಶಕ್ಕೆ ಹೋಗೋಣ ಬನ್ನಿ" ಎಂದು ಉಗ್ರಪ್ಪ ಆಹ್ವಾನ ನೀಡಿದರು.
ಕರ್ನಾಟಕದಲ್ಲಿ ಮಂಗಳವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿತ್ತು. ಶುಕ್ರವಾರ ಬಿಜೆಪಿ ಸರ್ಕಾರ ರಚನೆಯಾಗುತ್ತಿದೆ. ಬಿ. ಎಸ್. ಯಡಿಯೂರಪ್ಪ ಅವರು ಸಂಜೆ 6 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ.












Click it and Unblock the Notifications