ಕೆಪಿಎಸ್ಸಿ ಫೈಟ್ : ಸುದರ್ಶನ್ ವಿರುದ್ಧ ಭೂ ಒತ್ತುವರಿ ದೂರು
ಬೆಂಗಳೂರು, ಜ. 8 : ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಹುದ್ದೆಗೆ ಶಿಫಾರಸುಗೊಂಡಿರುವ ವಿ.ಆರ್. ಸುದರ್ಶನ್ ಜಮೀನು ಒತ್ತುವರಿ ಮಾಡಿಕೊಂಡಿರುವುದಾಗಿ ಪ್ರತಿಪಕ್ಷ ಬಿಜೆಪಿ ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ಸುದರ್ಶನ್ ಆರೋಪವನ್ನು ತಳ್ಳಿಹಾಕಿದ್ದು, ಈ ವಿಚಾರವಾಗಿ ರಾಜಭವನ ಅಥವಾ ಸರ್ಕಾರ ಸ್ಪಷ್ಟೀಕರಣ ಕೇಳಿದರೆ ದಾಖಲೆ ಸಹಿತ ವಿವರ ನೀಡುತ್ತೇನೆ ಎಂದು ಹೇಳಿದ್ದಾರೆ.
ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ವಿ.ಆರ್.ಸುದರ್ಶನ್ ವಿರುದ್ಧ ಜಮೀನು ಒತ್ತುವರಿ ಆರೋಪ ಮಾಡಿದ್ದಾರೆ. ಕೋಲಾರದ ವೇಮಗಲ್ನ ಸರ್ವೆ ನಂಬರ್ 214/ ರಲ್ಲಿ 10 ಗುಂಟೆಯನ್ನು ಅತಿಕ್ರಮಿಸಿಕೊಂಡಿರುವ ಸುದರ್ಶನ್ ವಾಣಿಜ್ಯ ಕಟ್ಟಡ ನಿರ್ಮಿಸಿ ಬಾಡಿಗೆ ಪಡೆಯುತ್ತಿದ್ದಾರೆ. [ಕೆಪಿಎಸ್ ಸಿಗೆ ಸುದರ್ಶನ್ ಅಧ್ಯಕ್ಷರು?]

ಇದೇ ಸರ್ವೆ ನಂಬರ್ಗಳಲ್ಲಿ ಉಳದ ಭೂಮಿ ಪೊಲೀಸ್ ಠಾಣೆ ಮತ್ತು ಇತರೆ ಸರ್ಕಾರಿ ಕಚೇರಿಗಳಿಗೆ ಬಳಕೆಯಾಗುತ್ತಿದೆ. ತಮಗೆ ಮಂಜೂರಾಗದ ಭೂಮಿಯನ್ನು ಸುದರ್ಶನ್ ಅನುಭವಿಸುತ್ತಿದ್ದಾರೆ. 2014ರ ಏಪ್ರಿಲ್ನಲ್ಲಿ ವಿ. ಲೋಕೇಶ್ ಎಂಬುವವರು ಈ ಕುರಿತು ಕೋಲಾರ ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. [ಸರ್ಕಾರ, ರಾಜಭವನದ ನಡುವೆ ಕೆಪಿಎಸ್ ಸಿ ಫೈಟ್]
ಈ ದೂರಿನ ಬಗ್ಗೆ ಸೂಕ್ತ ತನಿಖೆಯಾಗಿಲ್ಲ. ಆದ್ದರಿಂದ, ಆರೋಪ ಎದುರಿಸುತ್ತಿರುವ ಸುದರ್ಶನ್ ಅವರನ್ನು ಅಧ್ಯಕ್ಷರಾಗಿ ನೇಮಿಸಬಾರದು ಎಂದು ಒತ್ತಾಯಿಸಿದ್ದಾರೆ. ಮಾಜಿ ಸಚಿವ ಸುರೇಶ್ ಕುಮಾರ್ ಮತ್ತು ಮೇಲ್ಮನೆ ಸದಸ್ಯ ಅಶ್ವತ್ಥನಾರಾಯಣ ಅವರೊಂದಿಗೆ ರಾಜಭವನಕ್ಕೆ ತೆರಳಿ ಸುದರ್ಶನ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ನೀಡಿ, ದೂರು ಸಲ್ಲಿಸಿದ್ದಾರೆ.
ಆರೋಪ ನಿರಾಕರಣೆ : ರಾಜ್ಯಪಾಲರಿಗೆ ಬಿಜೆಪಿ ದೂರು ಸಲ್ಲಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ವಿ.ಆರ್. ಸುದರ್ಶನ್ ಅವರು, ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಸರ್ಕಾರ ಮತ್ತು ರಾಜಭವನ ಈ ಕುರಿತು ಯಾವುದೇ ದಾಖಲೆ ಕೇಳಿದರೂ ಅದನ್ನು ನೀಡಲು ತಾವು ಸಿದ್ಧವಿರುವುದಾಗಿ ಹೇಳಿದ್ದಾರೆ.
ವೇಮಗಲ್ನಲ್ಲಿರುವ ಜಾಗ ಕಂದಾಯ ಭೂಮಿಯಲ್ಲ. ಅದು ಗ್ರಾಮ ಪಂಚಾಯಿತಿಗೆ ಸೇರಿದ್ದು. 1978-79 ರಲ್ಲೆ ನನ್ನ ತಂದೆ ಈ ಜಮೀನು ಪಡೆದುಕೊಂಡಿದ್ದರು. ಅಂದಿನಿಂದಲೂ ತೆರಿಗೆ ಪಾವತಿಸಲಾಗುತ್ತಿದೆ. ತಂದೆಯ ಬಳಿಕ ಈ ಸ್ಥಳ ನಮಗೆ ಬಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
2009 ರಲ್ಲಿ ನನ್ನ ಮಕ್ಕಳು ಮತ್ತು ಅಣ್ಣನ ಮಕ್ಕಳ ಹೆಸರಿಗೆ ಈ ಆಸ್ತಿಯನ್ನು ವರ್ಗಾವಣೆ ಮಾಡಲಾಗಿದೆ. ಈ ಕುರಿತು ತಹಸೀಲ್ದಾರ್, ಜಿಲ್ಲಾಧಿಕಾರಿ, ಲೋಕಾಯುಕ್ತರು ಮಾಹಿತಿ ಕೇಳಿದ್ದರು. ಅವರಿಗೆ 35 ದಾಖಲೆಗಳನ್ನು ಒದಗಿಸಲಾಗಿದೆ. ಬಿಜೆಪಿಯ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications