ದಕ್ಷಿಣ ಕನ್ನಡ vs ಕಲಬುರಗಿ: ಎಸ್ಎಸ್ಎಲ್ಸಿ ಫಲಿತಾಂಶ ಮುಂದಿಟ್ಟು ಜಿಲ್ಲೆಯನ್ನು ಹೀಯಾಳಿಸುವುದಕ್ಕೆ ನೆಟ್ಟಿಗರ ಆಕ್ರೋಶ
ಇತ್ತೀಚೆಗೆ ಪ್ರಕಟವಾದ ಎಸ್ಎಸ್ಎಲ್ಸಿ ಫಲಿತಾಂಶ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉತ್ತಮ ಫಲಿತಾಂಶವನ್ನು ಮುಂದಿಟ್ಟುಕೊಂಡು ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯನ್ನು ಹೀಯಾಳಿಸುವವರ ಸಂಖ್ಯೆ ಹೆಚ್ಚಾಗಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪ್ರಗತಿಪರರು, ಸ್ಥಳೀಯರು ಹಾಗೂ ನೆಟ್ಟಿಗರು ಈ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದು, ಮುಗ್ಧ ವಿದ್ಯಾರ್ಥಿಗಳ ಬದಲು ಭ್ರಷ್ಟ ವ್ಯವಸ್ಥೆ ಹಾಗೂ ರಾಜಕಾರಣಿಗಳನ್ನು ಪ್ರಶ್ನಿಸುವಂತೆ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ಗಳಲ್ಲಿ, ಕೆಲವು ಶಕ್ತಿಗಳು ದಕ್ಷಿಣ ಕನ್ನಡ ಜಿಲ್ಲೆಯ ಸಾಧನೆಯನ್ನು ಮುಂದಿಟ್ಟುಕೊಂಡು ಕಲಬುರಗಿ ಜಿಲ್ಲೆಯನ್ನು ಕೀಳಾಗಿ ಕಾಣುತ್ತಿವೆ. ಆದರೆ, ಕಲಬುರಗಿ ಜಿಲ್ಲೆ ಈ ಬಾರಿ ಶೇಕಡಾ 85 ರಷ್ಟು ಸಾಧನೆ ಮಾಡಿದ್ದು, ಇದು ಸಣ್ಣ ವಿಷಯವೇನಲ್ಲ. ಈ ಸಾಧನೆಗಾಗಿ ಅಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಭಿನಂದನೆಗೆ ಅರ್ಹರಾಗಿದ್ದಾರೆ. ಇಡೀ ಜಿಲ್ಲೆಯನ್ನು ಹೀಯಾಳಿಸುವುದು ಅತ್ಯಂತ ಖಂಡನೀಯ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯನ್ನು "ಕೋಮುವಾದಿ ಜಿಲ್ಲೆ" ಎಂದು ಕರೆಯುವುದಕ್ಕೂ ತೀವ್ರ ವಿರೋಧ ವ್ಯಕ್ತವಾಗಿದೆ. ಕೇವಲ ಕೆಲವರ ವರ್ತನೆಯಿಂದ ಇಡೀ ಜಿಲ್ಲೆಗೆ ಹಣೆಪಟ್ಟಿ ಕಟ್ಟುವುದು ತಪ್ಪು. ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರ ಶ್ರಮ ಮತ್ತು ವಿದ್ಯಾರ್ಥಿಗಳ ಅಧ್ಯಯನವೇ ಕಾರಣವೇ ಹೊರತು, ಬೇರಾವುದೇ ವಿಚಾರಗಳಲ್ಲ. ಮಕ್ಕಳ ಮನವೊಲಿಸಿ ಓದಲು ಕೂರಿಸಿದ ಅಧ್ಯಾಪಕರ ಕೊಡುಗೆ ಇದರಲ್ಲಿ ದೊಡ್ಡದಿದೆ. ಶೈಕ್ಷಣಿಕ ಸಾಧನೆಗೆ ಯಾವ ಕೋಮುವಾದವೂ ಕಾರಣವಾಗಲಾರದು ಎಂದು ಪ್ರಜ್ಞಾವಂತರು ಪ್ರಶ್ನಿಸಿದ್ದಾರೆ.
ಈ ಎಲ್ಲದರ ಮಧ್ಯೆ ಕಲ್ಯಾಣ ಕರ್ನಾಟಕದ ಹಿಂದುಳಿಯುವಿಕೆಗೆ ಜನಸಾಮಾನ್ಯರಾಗಲೀ, ವಿದ್ಯಾರ್ಥಿಗಳಾಗಲೀ ಕಾರಣರಲ್ಲ; ಬದಲಿಗೆ ಅಲ್ಲಿನ ರಾಜಕಾರಣಿಗಳೇ ನೇರ ಹೊಣೆ ಎಂಬ ಮಾತನ್ನ ಹಲವರು ಆಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆಂದು ಹರಿದು ಬರುವ ಸಾವಿರಾರು ಕೋಟಿ ರೂಪಾಯಿ ಅನುದಾನ ಎಲ್ಲಿಗೆ ಹೋಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸಚಿವ ಪ್ರಿಯಾಂಕ್ ಖರ್ಗೆಯಂತಹ ಪ್ರಭಾವಿ ರಾಜಕಾರಣಿಗಳ ಹೇಳಿಕೆಗಳು ಇಂತಹ ಪ್ರಚೋದನೆಗೆ ಕಾರಣವಾಗುತ್ತಿವೆ ಎಂಬ ಆರೋಪಗಳೂ ಕೂಡ ಕೇಳಿಬಂದಿವೆ. ತಮ್ಮ ಕ್ಷೇತ್ರದ ಪ್ರಗತಿಯ ಬಗ್ಗೆ ಗಮನಹರಿಸದ ರಾಜಕಾರಣಿಗಳು, ಅಭಿವೃದ್ಧಿ ಹೊರತುಪಡಿಸಿ ಉಳಿದೆಲ್ಲ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಇವರೇ ಜಿಲ್ಲೆಯ ಹಿಂದುಳಿಯುವಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ರಾಜಕಾರಣಿಗಳ ಮೇಲಿನ ಕೋಪವನ್ನು ಅಥವಾ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮುಗ್ಧ ವಿದ್ಯಾರ್ಥಿಗಳ ಮೇಲೆ ತೀರಿಸಿಕೊಳ್ಳುವುದು ಸರಿಯಲ್ಲ. ರಾಜಕಾರಣಿಗಳಾದ ಖರ್ಗೆಯವರನ್ನು ಟೀಕಿಸಿ, ಟ್ರೋಲ್ ಮಾಡಿ; ಆದರೆ, ಅದಕ್ಕಾಗಿ ಕಲಬುರಗಿ ಎಂಬ ಊರನ್ನು, ಅಲ್ಲಿನ ಮುಗ್ಧ ಜನರನ್ನು ಕೀಳಾಗಿ ಕಾಣಬೇಡಿ. ಆ ಊರಿಗೆ ಭೇಟಿ ನೀಡಿ, ವ್ಯವಸ್ಥೆಯನ್ನು ಇಂದಿಗೂ ನೂರು ವರ್ಷಗಳಷ್ಟು ಹಿಂದಕ್ಕೆ ತಳ್ಳಿದ ದುರಾಡಳಿತದ ವಿರುದ್ಧ ಧ್ವನಿ ಎತ್ತಿ. ವ್ಯವಸ್ಥೆಯನ್ನು ಧಿಕ್ಕರಿಸಬೇಕೇ ಹೊರತು, ಪಾಪದ ಊರನ್ನಲ್ಲ ಎಂದು ನೆಟ್ಟಿಗರು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಈ ಎರಡು ಜಿಲ್ಲೆಗಳ ನಡುವಿನ ಶೈಕ್ಷಣಿಕ ಹೋಲಿಕೆ ಈಗ ರಾಜಕೀಯ ಹಾಗೂ ವ್ಯವಸ್ಥೆಯ ವೈಫಲ್ಯದ ಬಿಸಿಬಿಸಿ ಚರ್ಚೆಯಾಗಿದೆ.












Click it and Unblock the Notifications