ಮೋಹಿನಿ ಏಕಾದಶಿ ಯಾವತ್ತು? ದಿನಾಂಕ, ಮಹತ್ವದ ವಿವರ ಇಲ್ಲಿದೆ
Mohini Ekadashi 2026: ಏನಿದು ಮೋಹಿನಿ ಏಕಾದಶಿ.ಯಾಕೆ ಅದನ್ನು ಆಚರಿಸುತ್ತಾರೆ. ಎಲ್ಲಾ ಏಕಾದಶಿಗಳು ಮಹಾವಿಷ್ಣುವಿಗೆ ಸಮರ್ಪಿತ. ಆದರೆ ಯಾಕೆ ಮೋಹಿನಿ ಏಕಾದಶಿ ಮಹಾಲಕ್ಷ್ಮಿಗೆ ಅರ್ಪಿತ ಗೊತ್ತಾ?. ಮೋಹಿನಿ ಏಕಾದಶಿಯಿಂದಾಗುವ ಆಧ್ಯಾತ್ಮಿಕ ಲಾಭಗಳೇನು? ಒಂದೊಂದಾಗಿ ತಿಳಿಯುತ್ತಾ ಬರೋಣ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳು ಎರಡು ಏಕಾದಶಿಗಳು ಬರುತ್ತವೆ. ಆದರೆ, ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಮಾತ್ರ ಮೋಹಿನಿ ಏಕಾದಶಿ ಎಂದು ಆಚರಿಸಲಾಗುತ್ತದೆ. ಮೋಹಿನಿ ಏಕಾದಶಿಯು ವಿಶೇಷ ಮಹತ್ವವನ್ನು ಹೊಂದಿದೆ.

ಯಾವತ್ತು ಮೋಹಿನಿ ಏಕಾದಶಿ?:
ಈ ಸಲ ಏಪ್ರಿಲ್ 27, ರಂದು ಮೋಹಿನಿ ಏಕಾದಶಿ ಆಚರಿಸಲಾಗುತ್ತದೆ. ಈ ದಿನ ಭಕ್ತರು ವಿಷ್ಣುವನ್ನು ಮೋಹಿನಿ ರೂಪದಲ್ಲಿ ಪೂಜಿಸುತ್ತಾರೆ. ಈ ದಿನ ಉಪವಾಸ ವೃತ ಆಚರಿಸುವುದರಿಂದ ಪಾಪಗಳು ದೂರವಾಗುತ್ತವೆ ಎನ್ನುವುದು ನಂಬಿಕೆ.
ಮೋಹಿನಿ ಏಕಾದಶಿಯ ಮಹತ್ವ:
ಈ ದಿನ ಉಪವಾಸ ವೃತ ಕೈಗೊಳ್ಳುವುದರಿಂದ ವ್ಯಕ್ತಿಗೆ ಮೋಕ್ಷ ಸಿಗಲು ಸಹಾಯ ಆಗುತ್ತದೆ. ಈ ದಿನದಂದು ಪೂಜೆ ಮಾಡುವುದರಿಂದ ಮಾನಸಿಕ ಶಾಂತಿ, ಸಂಪತ್ತು, ಖ್ಯಾತಿ ಮತ್ತು ಸಮೃದ್ಧಿ ಸಿಗುತ್ತದೆ. ಈ ದಿನ ಭಕ್ತರು ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ವಿಶೇಷವಾಗಿ ಪೂಜಿಸುತ್ತಾರೆ. ವಿಷ್ಣು ಮತ್ತು ಲಕ್ಷ್ಮಿ ಕೃಪೆಗಾಗಿಯೇ ಉಪವಾಸ ಆಚರಿಸುತ್ತಾರೆ. ತಿಳಿಯದೇ ಮಾಡಿದ ತಪ್ಪು, ಪಾಪ ಕರ್ಮಗಳು ಈ ದಿನ ಪೂಜಾ ಫಲವಾಗಿ ನಿವಾರಣೆಯಾಗುತ್ತದೆ ಎನ್ನಲಾಗಿದೆ.
ಹಿಂದೂ ಸಂಪ್ರದಾಯದಲ್ಲಿ, ಒಂದು ವರ್ಷದಲ್ಲಿ 24 ಏಕಾದಶಿಗಳು ಬರುತ್ತವೆ. ಅವೆಲ್ಲವೂ ವಿಷ್ಣುವಿಗೆ ಸಮರ್ಪಿತವಾಗಿವೆ. ಪ್ರತಿಯೊಂದು ಏಕಾದಶಿಯೂ ತನ್ನದೇ ಆದ ಪ್ರಾಮುಖ್ಯತೆ ಹೊಂದಿದ್ದರೂ, ವೈಶಾಖ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿ ಅಂದರೆ ಮೋಹಿನಿ ಏಕಾದಶಿಯು ವಿಶೇಷ ಮಹತ್ವದ್ದಾಗಿದೆ.ಹಿಂದಿನ ಪಾಪಗಳಿಂದ ಮುಕ್ತರಾಗಲು ಮತ್ತು ಶಾಂತಿಯುತ ಸಮೃದ್ಧ ಜೀವನವನ್ನು ನಡೆಸುವ ಸಲುವಾಗಿ ಮೋಹಿನಿ ಏಕಾದಶಿ ಆಚರಿಸಲಾಗುತ್ತದೆ.
ಮೋಹಿನಿ ಏಕಾದಶಿ ದಿನಾಂಕ ಮತ್ತು ಸಮಯ:
ಹಿಂದೂ ಕ್ಯಾಲೆಂಡರ್ ಪ್ರಕಾರ, ಏಕಾದಶಿ ತಿಥಿ ಏಪ್ರಿಲ್ 26 ರಂದು ಸಂಜೆ 6:08 ಕ್ಕೆ ಪ್ರಾರಂಭವಾಗಿ ಏಪ್ರಿಲ್ 27, 2026 ರ ಸಂಜೆ 6:17 ಕ್ಕೆ ಕೊನೆಗೊಳ್ಳುತ್ತದೆ. ಸೂರ್ಯೋದಯದ ಸಮಯವನ್ನು (ಉದಯ ತಿಥಿ) ಆಧರಿಸಿ, ಏಪ್ರಿಲ್ 27 ರಂದು ಈ ಉಪವಾಸವನ್ನು ಆಚರಿಸಲಾಗುತ್ತದೆ.
ಧರ್ಮಗ್ರಂಥಗಳಲ್ಲಿ ಮಹತ್ವ:
ಪುರಾಣಗಳ ಪ್ರಕಾರ, ಏಕಾದಶಿಯನ್ನು ಹರಿವಾಸರ ಎಂದು ಕರೆಯಲಾಗುತ್ತದೆ. ಇದು ವಿಷ್ಣುವಿಗೆ ಮೀಸಲಾದ ದಿನ. ಈ ದಿನ ಉಪವಾಸ ಮಾಡಿದರೆ, ಯಜ್ಞ ಯಾಗಾದಿಗಳಿಗಿಂತಲೂ ಶ್ರೇಷ್ಠತರಹದ ಆಧ್ಯಾತ್ಮಿಕ ಪ್ರಯೋಜನ ಸಿಗುತ್ತದೆ ಎನ್ನಲಾಗಿದೆ. ಸ್ಕಂದ ಪುರಾಣ ಮತ್ತು ಪದ್ಮ ಪುರಾಣದಂತಹ ಗ್ರಂಥಗಳು ಏಕಾದಶಿ ಉಪವಾಸದಿಂದ ಪಾಪ ನಿವಾರಣೆಯಾಗುತ್ತದೆ ಎಂದು ಹೇಳಿವೆ. ಮೋಕ್ಷ ಪ್ರಾಪ್ತಿಗೂ ಏಕಾದಶಿ ಕಾರಣವಾಗುತ್ತದೆ ಎಂದು ಹೇಳುತ್ತಾರೆ.
ಪೂಜಾ ವಿಧಿ:
ಮೋಹಿನಿ ಏಕಾದಶಿಯಂದು, ಬ್ರಹ್ಮ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿ, ಹಳದಿ ಬಟ್ಟೆ ಧರಿಸಬೇಕು. ವಿಷ್ಣುವನ್ನು ಪೂಜಿಸಿ ಮತ್ತು 'ಓಂ ನಮೋ ಭಗವತೇ ವಾಸುದೇವಾಯ' ಎಂಬ ಮಂತ್ರವನ್ನು ಪಠಿಸಬೇಕು. ಆಚರಣೆಯ ಭಾಗವಾಗಿ ಧೂಪ, ದೀಪ ಮತ್ತು ನೈವೇದ್ಯವನ್ನು ಅರ್ಪಿಸಬೇಕು. ಹಳದಿ ಹೂವುಗಳು ಮತ್ತು ಹಣ್ಣುಗಳನ್ನು ದೇವರಿಗೆ ಅರ್ಪಿಸಿ ತಮ್ಮಿಂದ ಯಾವುದೇ ರೀತಿಯಲ್ಲಿ ತಪ್ಪಾಗಿದ್ದರೂ ಕ್ಷಮಿಸುವಂತೆ ದೇವರನ್ನು ಕೋರಬೇಕು. ಈ ದಿನ ಸಂಜೆ ಕೂಡಾ ಪೂಜೆ ಮಾಡಬೇಕು. ಮರುದಿನ, ಬ್ರಾಹ್ಮಣರಿಗೆ ಊಟ ಹಾಕಿ ಉಪವಾಸ ಪೂರ್ಣಗೊಳಿಸಬೇಕು.
ಪೌರಾಣಿಕ ಕಥೆ:
ಪುರಾಣಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಅಮರತ್ವದ ಅಮೃತದ ಬಗ್ಗೆ ದೇವರುಗಳು ಮತ್ತು ರಾಕ್ಷಸರ ನಡುವೆ ಜಗಳ ನಡೆಯುತ್ತದೆ. ಇದನ್ನು ಪರಿಹರಿಸಲು, ವಿಷ್ಣು ಸುಂದರ ಮಹಿಳೆ ಮೋಹಿನಿಯ ರೂಪ ತಾಳಿ ರಾಕ್ಷಸರ ಗಮನ ಬೇರೆಡೆ ತಿರುಗಿಸುತ್ತಾರೆ. ಇದರಿಂದ ದೇವತೆಗಳಿಗೆ ಅಮೃತ ಸಿಗುತ್ತದೆ. ಈ ಘಟನೆಯು ವೈಶಾಖ ಶುಕ್ಲ ಪಕ್ಷದ ಏಕಾದಶಿಯಂದು ನಡೆದಿದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಈ ದಿನವನ್ನು ಮೋಹಿನಿ ಏಕಾದಶಿ ಎಂದು ಆಚರಿಸಲಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications