ಶಾಸಕರ ಅಸಮಾಧಾನ ಮಧ್ಯೆ ಬಿಜೆಪಿ ಶಾಸಕಾಂಗ ಸಭೆ: ಚರ್ಚೆ ಆಗಿದ್ದೇನು, ಗೈರಾದ ಶಾಸಕರು ಇವರು?
ಬೆಳಗಾವಿ, ಡಿಸೆಂಬರ್ 13: ಕಾಂಗ್ರೆಸ್ನಲ್ಲಿ ಶಾಸಕರ ಭಿನ್ನಮತ ಶಮನವಾಗುತ್ತಿದ್ದಂತೆ ಇದೀಗ ಬಿಜೆಪಿಯಲ್ಲಿನ ಒಡಕು ಹೆಚ್ಚಾಗಿದೆ. ಶಾಸಕರು ಅಸಮಾಧಾನಗೊಂಡಿದ್ದಾರೆ. ಲೋಕಸಭೆ ಚುನಾವಣೆಗೂ ಮೊದಲೇ ಇದು ಬಹಿರಂಗೊಂಡಿದೆ. ಈ ಬೆಳವಣಿಗೆ ಮಧ್ಯದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ನಡೆದಿದೆ. ಹಾಗಾದರೆ ಗೈರಾದವರು, ಏನೆಲ್ಲ ಚರ್ಚೆ ನಡೆದಿವೆ, ಸೂಚನೆಗಳು ಏನೇನು? ಎಂಬ ಮಾಹಿತಿ ಇಲ್ಲಿದೆ.
ಚಳಿಗಾಲದ ಅಧಿವೇಶನದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ನಡುವೆಯೂ ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸುವಲ್ಲಿ ಹಿನ್ನೆಡೆ ಸಾಧಿಸಿರುವ ಬಿಜೆಪಿ ಮಂಗಳವಾರ ರಾತ್ರಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲಾಗಿದೆ. ಆದರೂ ಸಹಿತ ಕೆಲವು ಶಾಸಕರು ಸಭೆಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ಮತ್ತೊಮ್ಮೆ ಹೊರ ಹಾಕಿದ್ದಾರೆ. ಇದು ಪಕ್ಷಕ್ಕೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಬೆಳಗಾವಿಯ ಖಾಸಗಿ ಹೊಟೇಲ್ನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಗೈರಾದ ಶಾಸಕರು: ಮತ್ತೆ ಅಸಮಾಧಾನ
ಆದರೆ ನಿರೀಕ್ಷೆಯಂತೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ರಮೇಶ ಜಾರಕಿಹೊಳಿ, ಎಸ್.ಟಿ.ಸೋಮಶೇಖರ್ ಅವರು ಸಭೆಗೆ ಗೈರಾಗುವ ಮೂಲಕ ಮತ್ತೊಮ್ಮ ಪಕ್ಷದ ವಿರುದ್ಧ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಸರ್ಕಾರದ ವಿರುದ್ಧ ಸೆಟೆದು ನಿಲ್ಲಬೇಕಾದ ವಿರೋಧ ಪಕ್ಷ ಬಿಜೆಪಿಯಲ್ಲಿ ಒಗ್ಗಟ್ಟಿನ ಬಲದಲ್ಲಿ ಕೊರತೆ ಕಂಡು ಬರುತ್ತಿದೆ.
ಸಭೆಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಎಲ್ಲ ಶಾಸಕರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲಿಸಬೇಕಾಗಿದೆ ಎಂದು ಕರೆ ನೀಡಿದರು.

ಇಂದಿನ ಹೋರಾಟ ಯಶಸ್ವಿಗೊಳಿಸಿ: ಬಿಎಸ್ವೈ
ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಯಾವುದೇ ಸಂದರ್ಭದಲ್ಲಿ ಕರೆದರೂ ಬರಲು ಸಿದ್ಧನಿದ್ದೇನೆ. ಬುಧವಾರ ಸಂಜೆ ಹಮ್ಮಿಕೊಂಡಿರುವ ಹೋರಾಟದಲ್ಲಿ ಎಲ್ಲ ಶಾಸಕರೂ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಯಡಿಯೂರಪ್ಪ ಪಾಲ್ಗೊಂಡಿದ್ದ ಶಾಸಕರಲ್ಲಿ ಮನವಿ ಮಾಡಿದರು.
ವಿಧಾನಮಂಡಲದಲ್ಲಿ ಹೋರಾಟ ಮಾಡುವಾಗ ಹಿರಿಯ ಶಾಸಕರ ಜತೆ ಚರ್ಚಿಸಿ ಒಮ್ಮತದ ನಿರ್ಣಯ ತೆಗೆದುಕೊಂಡು ಅಖಾಡಕ್ಕಿಳಿಯಬೇಕು ಎಂದು ಯಡಿಯೂರಪ್ಪ ಅವರು ಸಲಹೆ ನೀಡಿದರು.
ಭಿನ್ನಾಭಿಪ್ರಾಯ ಪಕ್ಷದೊಳಗೆ ಚರ್ಚೆಯಾಗಲಿ: ವಿಜಯೇಂದ್ರ
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಏನೇ ಭಿನ್ನ ಅಭಿಪ್ರಾಯಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ. ಬಹಿರಂಗವಾಗಿ ಮಾತನಾಡುವುದು ಬೇಡ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲಸಬೇಕಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, 'ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿರುವುದರಿಂದ ನಮಗೆ ಮತ್ತಷ್ಟು ಶಕ್ತಿ ಬಂದಿದೆ. ಕೆಲವು ಮಂತ್ರಿಗಳು ಕೊಬ್ಬಿದ್ದಾರೆ. ಅಧಿವೇಶನ ಮುಗಿದ ಬಳಿಕ ಅವರ ವಿರುದ್ಧ ಹೋರಾಟ ನಡೆಸಬೇಕಾಗಿದೆ' ಎಂದರು. ಸಭೆಯಲ್ಲಿ ಶಾಸಕರಿಗೆ ಮಾತನಾಡಲು ಅವಕಾಶ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಸಭೆ ಆಗಮಿಸಿದ್ದ ಶಾಸಕರು ಸೂಚನೆಗಳನ್ನಷ್ಟೇ ಆಲಿಸಬೇಕಾಯಿತು. ಅವರಿಗೆ ಮಾತನಾಡಲು ಆಗಲಿಲ್ಲ.












Click it and Unblock the Notifications