ಸಂಪುಟ ವಿಸ್ತರಣೆ: ಅಸಮಾಧಾನದ ಹೊಗೆ ಜ್ವಾಲೆಯಾಗಲಿ ಎಂದು ಕಾಯುತ್ತಿರುವ ಬಿಜೆಪಿ
ಸರಕಾರ ನಡೆಸುವವರಿಗೆ ಹಲವು ಒತ್ತಡಗಳು ಇರುತ್ತವೆ, ನನ್ನನ್ನು ಸಚಿವನನ್ನಾಗಿ ಮಾಡಲು ದೇವೇಗೌಡರಿಗೆ ಮತ್ತು ಕುಮಾರಸ್ವಾಮಿಯವರಿಗೆ ಅದೇನು ಸಮಸ್ಯೆ ಇದೆಯೋ ಗೊತ್ತಿಲ್ಲ ಎನ್ನುವ ಹಿರಿಯ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿಯಂತವರೂ ಇರುತ್ತಾರೆ.
ಮುಂದಿನ ಸಂಪುಟ ವಿಸ್ತರಣೆಯ ವೇಳೆ ನಿಮ್ಮನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿ, ಮತ್ತೆ 'ಕೈ'ಕೊಟ್ಟಾಗ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸುವ ಬಿ ಸಿ ಪಾಟೀಲ್, ಎಂಬಿ ಪಾಟೀಲ್ ಅಂತವರೂ ಇರುತ್ತಾರೆ.
ಸಂಪುಟ ವಿಸ್ತರಣೆಯ ನಂತರ, ಸಮ್ಮಿಶ್ರ ಸರಕಾರದಲ್ಲಿ ಬಿರುಗಾಳಿ ಏಳಲಿದ್ದು ಸರಕಾರ ಪತನವಾಗುವುದು ಖಚಿತ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಜೊತೆಗೆ, ಸರಕಾರದಲ್ಲಾಗುವ ವಿದ್ಯಮಾನಗಳನ್ನು ಹದ್ದಿನ ಕಣ್ಣಿನಲ್ಲಿ ಬಿಜೆಪಿ ನೋಡುತ್ತಿದೆ.
ನಾವೇನು ಆಪರೇಶನ್ ಕಮಲ ಮಾಡುತ್ತಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡರು ಹೇಳುತ್ತಿದ್ದರೂ, ಸಂಪುಟದಿಂದ ಕೈಬಿಡಲಾಗುವ ಸಚಿವರ ಮತ್ತು ಸಚಿವ ಸ್ಥಾನ ವಂಚಿತರ ಪ್ರತೀ ಹೆಜ್ಜೆಯನ್ನೂ ಬಿಜೆಪಿ ಗಮನಿಸುತ್ತಿದ್ದು, ಒಂದು ವೇಳೆ ಸಮ್ಮಿಶ್ರ ಸರಕಾರ ಪತನಗೊಂಡರೆ, ಮತ್ತೆ ಸರಕಾರ ರಚಿಸಲು ಬೇಕಾಗುವ ಎಲ್ಲಾ ರಾಜಕೀಯ ಬಾಗಿಲನ್ನು ಮುಕ್ತವಾಗಿರಿಸಿ ಕೊಂಡಿದೆ.
ಸಚಿವ ಸ್ಥಾನದಿಂದ ಕೈಬಿಡಲಾಗುತ್ತಿರುವ ಮುಖಂಡರಿಂದ ಕಾಂಗ್ರೆಸ್ಸಿಗೆ ಭಾರೀ ಹಿನ್ನಡೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಹಲವು ಕಾಂಗ್ರೆಸ್ ಮುಖಂಡರು, ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿಯೂ ಆಗಿದೆ.

ಬಿಜೆಪಿ ಪಕ್ಷದ ಶಾಸಕಾಂಗ ಸಭೆಯನ್ನು ಕರೆಯುತ್ತೇನೆ, ಯಡಿಯೂರಪ್ಪ
ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಪಕ್ಷದಿಂದ ಕೈಬಿಟ್ಟರೆ ಸರಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ನಾವು 104 ಶಾಸಕರು ಒಗ್ಗಟ್ಟಾಗಿದ್ದೇವೆ. ಅಸಮಾಧಾನ ಭುಗಿಲೆದ್ದ ಮೇಲೆ, ನಾವು ಬಿಜೆಪಿ ಪಕ್ಷದ ಶಾಸಕಾಂಗ ಸಭೆಯನ್ನು ಕರೆಯುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಬಿಎಸ್ವೈ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ
ಸದ್ಯದಲ್ಲೇ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆಂದು ಬಿಜೆಪಿಯ ಹಿರಿಯ ಮುಖಂಡ ಈಶ್ವರಪ್ಪ ಮತ್ತು ಸಿ ಟಿ ರವಿ ಹಲವು ಬಾರಿ ಹೇಳಿದ್ದಾಗಿದೆ. ಸಚಿವ ಸಂಪುಟ ವಿಸ್ತರಣೆಯ ನಂತರ ಸರಕಾರ ತನ್ನಿಂದ ತಾನೇ ಪತನಗೊಳ್ಳಲಿದೆ ಎಂದು ಈ ಇಬ್ಬರೂ ಮುಖಂಡರು ಕೆಲವು ದಿನಗಳ ಹಿಂದೆ ಭವಿಷ್ಯ ನುಡಿದಿದ್ದರು.
ಕೈ ಗ್ಯಾಂಗಿಗೆ ಸಿದ್ದುವೇ ಚಕ್ರವರ್ತಿ, ಮಿಡ್ಲ್ ಮನ್ ಫುಲ್ಲು ನಿಶ್ಯಕ್ತಿ

ಅಸಮಾಧಾನದ ಹೊಗೆ ಜ್ವಾಲೆಯಾಗಲಿ
ಬಿಜೆಪಿ ಮುಖಂಡರ ಹೇಳಿಕೆಗೆ ಪೂರಕ ಎನ್ನುವಂತೆ, ಸಚಿವ ಸಂಪುಟ ವಿಸ್ತರಣೆಯ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿ ಭಾರೀ ಅಸಮಾಧಾನ ಹೊರಬೀಳುವ ಸೂಚನೆ ಸಿಕ್ಕಿದೆ. ಹಲವು ಮುಖಂಡರು, ಬಹಿರಂಗವಾಗಿಯೇ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲಾ ವಿದ್ಯಮಾನಗಳನ್ನು ಗಮನಿಸುತ್ತಿರುವ ಬಿಜೆಪಿ, ಅಸಮಾಧಾನದ ಹೊಗೆ ಜ್ವಾಲೆಯಾಗಲಿ ಎಂದೇ ಕಾಯುತ್ತಿದೆ.

ಕಾಂಗ್ರೆಸ್ ಗುಂಪಿನಲ್ಲಿ ಅಸಮಾಧಾನ ಭುಗಿಲೆದ್ದಿದೆ
ಬಳ್ಳಾರಿ ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಲಾಗಿದೆ ಎನ್ನುವ ವಿಚಾರದಲ್ಲಿ, ಕಾಂಗ್ರೆಸ್ ಗುಂಪಿನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಪರಮೇಶ್ವರ್ ನಾಯಕ್ ವಿರುದ್ದ ಪಕ್ಷದ ಮುಖಂಡ ಭೀಮಾ ನಾಯಕ್ ಮಾಧ್ಯಮದವರ ಮುಂದೆ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ. ಪರಮೇಶ್ವರ್ ನಾಯಕ್ ಅವರಿಂದ ಪಕ್ಷ ಸಂಘಟನೆಗೆ ಏನೂ ಲಾಭವಿಲ್ಲ ಎನ್ನುವ ಮಾತು ಬಳ್ಳಾರಿ ಕಾಂಗ್ರೆಸ್ ಘಟಕದಿಂದ ಕೇಳಿಬರುತ್ತಿದೆ.

ಚಾಲುಕ್ಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ
ನನಗೆ ಯಾವ ರೀತಿಯ ಪಾರ್ಲಿಮೆಂಟ್ ಸೆಕ್ರೆಟರಿ ಅಥವಾ ಯಾವುದೇ ರೀತಿಯ ಹುದ್ದೆ ಬೇಡ, ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿರುವವರಿಗೆ ಹಿಂದೇಟು ಆಗುವುದು ರಾಜಕೀಯದ ಒಂದು ಭಾಗವಾದರೂ, ಇದರಿಂದ ಪಕ್ಷಕ್ಕೆ ನಿಷ್ಠೆಯಿಂದ ದುಡಿದವರಿಗೆ ಬೇಸರವಾಗುತ್ತದೆ ಎಂದು ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಹೇಳಿದ್ದಾರೆ. ರಾಮಲಿಂಗ ರೆಡ್ಡಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಚಾಲುಕ್ಯ ವೃತ್ತದಲ್ಲಿ ಶನಿವಾರ (ಡಿ 22) ಬೃಹತ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ.












Click it and Unblock the Notifications