ಕಠಿಣ ದಿನಗಳಿಗೆ ಸಿದ್ಧರಾಗಿ, ಎಐ ಹೈಪ್ ಹೆಚ್ಚು ದಿನ ಇರಲ್ಲ: ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಎಚ್ಚರಿಕೆ
ಜಾಗತಿಕವಾಗಿ ಉದ್ಯೋಗ ಕಡಿತದ ಆತಂಕಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಪ್ರಮುಖ ಸಾಫ್ಟ್ವೇರ್ ಸಂಸ್ಥೆ 'ಜೋಹೋ' (Zoho) ಮುಖ್ಯಸ್ಥ ಶ್ರೀಧರ್ ವೆಂಬು ಆಘಾತಕಾರಿ ಮುನ್ಸೂಚನೆಯೊಂದನ್ನು ನೀಡಿದ್ದಾರೆ. ಜಾಗತಿಕ ಆರ್ಥಿಕ ಪರಿಸ್ಥಿತಿ ತೀರಾ ಕಳವಳಕಾರಿಯಾಗುತ್ತಿದ್ದು, ಮುಂಬರುವ ಕಠಿಣ ದಿನಗಳನ್ನು ಎದುರಿಸಲು ಸಿದ್ಧರಾಗುವಂತೆ ಅವರು ಜನರಿಗೆ ಕರೆ ನೀಡಿದ್ದಾರೆ. ಅಲ್ಲದೆ, ಕೇವಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದಿಂದ ಮಾತ್ರ ಜಗತ್ತಿನ ಆಳವಾದ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
AI ಓಟದ ನಡುವೆಯೂ ಅಮೆರಿಕದಲ್ಲಿ ಆತಂಕವೇಕೆ?
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಶ್ರೀಧರ್ ವೆಂಬು, ಇಡೀ ವಿಶ್ವದಲ್ಲೇ ಎಐ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಎಐ ಅನ್ನು ನೆಗೆಟಿವ್ ಆಗಿ ನೋಡುತ್ತಿರುವುದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. "ಇತ್ತೀಚಿನ ದಿನಗಳಲ್ಲಿ ಕಂಪನಿಗಳು ತಮಗಾಗುತ್ತಿರುವ ಆರ್ಥಿಕ ನಷ್ಟ ಮತ್ತು ಉದ್ಯೋಗ ಕಡಿತವನ್ನು ಮುಚ್ಚಿಹಾಕಲು ಎಐ ಅನ್ನು ನೆಪವಾಗಿ ಬಳಸಿಕೊಳ್ಳುತ್ತಿವೆ. ಉದ್ಯೋಗ ಕಡಿತಕ್ಕೆ ಎಐ ಕಾರಣ ಎಂದು ಬಿಂಬಿಸುವುದು ಕಂಪನಿಗಳಿಗೆ ಸುಲಭದ ದಾರಿಯಾಗಿದೆ" ಎಂದು ವೆಂಬು ಟೀಕಿಸಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಉದ್ಯೋಗ ಕಡಿತಕ್ಕೆ ನಿಜವಾದ ಕಾರಣ ಹೆಚ್ಚುತ್ತಿರುವ ಆರ್ಥಿಕ ಒತ್ತಡವೇ ಹೊರತು ಎಐ ಅಲ್ಲ. ಈ ಬಿಕ್ಕಟ್ಟನ್ನು ತಮ್ಮ ಸ್ವಂತ ಕಂಪನಿಯಾದ ಜೋಹೋ ಕೂಡ ಪ್ರತ್ಯಕ್ಷವಾಗಿ ಎದುರಿಸುತ್ತಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಜಾಗತಿಕ ಆರ್ಥಿಕತೆಯ ಇತಿಹಾಸವನ್ನು ಉಲ್ಲೇಖಿಸಿರುವ ಅವರು, "ದಶಕಗಳ ಹಂತದಲ್ಲಿ ಯೋಚಿಸಿ, ಎರಡನೇ ಮಹಾಯುದ್ಧದ ನಂತರ ಜಗತ್ತಿನಲ್ಲಿ ನಿರ್ಮಾಣವಾಗಿದ್ದ ಜಾಗತಿಕ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ಈಗ ನಿಧಾನವಾಗಿ ದುರ್ಬಲಗೊಳ್ಳುತ್ತಿದೆ. ಇದು ನಿನ್ನೆ ಮೊನ್ನೆ ಆರಂಭವಾದದ್ದಲ್ಲ, 2008ರ ಜಾಗತಿಕ ಆರ್ಥಿಕ ಹಿಂಜರಿತದ ವೇಳೆಯೇ ಇದು ಗೋಚರಿಸಿತ್ತು" ಎಂದಿದ್ದಾರೆ.
ಅಂದು ಐಫೋನ್ನಂತಹ ಕ್ರಾಂತಿಕಾರಿ ಮೊಬೈಲ್ ತಂತ್ರಜ್ಞಾನ ಮಾರುಕಟ್ಟೆಗೆ ಬಂದಿದ್ದರೂ ಆರ್ಥಿಕ ಬಿಕ್ಕಟ್ಟನ್ನು ತಡೆಯಲು ಸಾಧ್ಯವಾಗಲಿಲ್ಲ. ಅದೇ ರೀತಿ ಇಂದು ಎಐ ಮೇಲಿನ ಅತಿಯಾದ ಹೂಡಿಕೆ ಮತ್ತು ಕ್ರೇಜ್ ಅಮೆರಿಕದ ಆರ್ಥಿಕತೆಯನ್ನು ಸದ್ಯಕ್ಕೆ ತೇಲಿಸುತ್ತಿದೆಯಾದರೂ, ಈ ಹೈಪ್ ಮತ್ತು ವೇಗ ಸದಾಕಾಲ ಮುಂದುವರಿಯುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಶ್ರೀಧರ್ ವೆಂಬು ಅವರ ಈ ಪೋಸ್ಟ್ ಆನ್ಲೈನ್ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ವೆಂಬು ಮಾತಿಗೆ ನೆಟ್ಟಿಗರು ಹೇಳಿದ್ದೇನು?
ಆರ್ಥಿಕ ಕುಸಿತದ ಭವಿಷ್ಯ ನುಡಿಯುವಾಗ ಕೇವಲ ಊಹೆಗಳಿಗಿಂತ ಮ್ಯಾಕ್ರೋ-ಎಕನಾಮಿಕ್ ಡೇಟಾ ಮತ್ತು ತಜ್ಞರ ವಿಶ್ಲೇಷಣೆ ಇರಬೇಕು ಎಂದಿದ್ದಾರೆ. ಅಸಲಿ ಅಪಾಯ ಎಐ ತಂತ್ರಜ್ಞಾನದಲ್ಲಲ್ಲ, ಬದಲಿಗೆ ತಂತ್ರಜ್ಞಾನ ಬದಲಾಗುತ್ತಿರುವ ವೇಗಕ್ಕೆ ತಕ್ಕಂತೆ ಅಪ್ಡೇಟ್ ಆಗಲು ಸರ್ಕಾರಗಳು, ಸಂಸ್ಥೆಗಳು ಮತ್ತು ಕಂಪನಿಗಳು ಸಿದ್ಧವಿಲ್ಲದಿರುವುದೇ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಕಂಪನಿಗಳು ತಮ್ಮ ಪ್ರತಿಯೊಂದು ತಪ್ಪು ಆರ್ಥಿಕ ನಿರ್ಧಾರಗಳಿಗೂ ಎಐ ಅನ್ನು ಹೊಣೆ ಮಾಡುತ್ತಾ ಹೋದರೆ, ಸಾರ್ವಜನಿಕರಿಗೆ ತಂತ್ರಜ್ಞಾನದ ಮೇಲಿರುವ ನಂಬಿಕೆ ಹೋಗುತ್ತದೆ ಎಂದಿದ್ದಾರೆ.
ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆಯೇ, ಲಾಭ ಕಡಿಮೆಯಾಗಿದೆಯೇ ಅಥವಾ ನಿಜವಾಗಿಯೂ ಆಟೊಮೇಷನ್ ಕಾರಣವೇ ಎಂಬುದನ್ನು ಕಂಪನಿಗಳು ಉದ್ಯೋಗಿಗಳಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಆರ್ಥಿಕ ಅಸಮತೋಲನಕ್ಕೆ ಎಐ ಯಾವುದೇ ಮಾಂತ್ರಿಕ ಪರಿಹಾರವಲ್ಲ ಎಂದಿರುವ ವೆಂಬು, ಭವಿಷ್ಯದ ಸವಾಲುಗಳನ್ನು ಎದುರಿಸಲು ಪೂರ್ವಸಿದ್ಧತೆ ಅಗತ್ಯ ಎಂದು ಎಚ್ಚರಿಸಿದ್ದಾರೆ.













Click it and Unblock the Notifications