ಪವನಸುತ ಹನುಮನ ಜನ್ಮಸ್ಥಳ ವಿವಾದಕ್ಕೆ ಟಿಟಿಡಿ ಮರುಜೀವ
ಪ್ರಭು ಶ್ರೀರಾಮಚಂದ್ರನ ಪರಮಭಕ್ತ ಪವನಸುತ, ಮುಖ್ಯಪ್ರಾಣ, ಹನುಮಂತ, ವಾಯುಪುತ್ರ, ಚಿರಂಜೀವಿ ಎಂದೆಲ್ಲಾ ಕರೆಯಲ್ಪಡುವ ಆಂಜನೇಯನ ಜನ್ಮಸ್ಥಳ ಯಾವುದು ಎನ್ನುವ ವಿವಾದಕ್ಕೆ ತಿರುಮಲ ತಿರುಪತಿ ದೇವಾಲಯದ ಬೋರ್ಡ್ (ಟಿಟಿಡಿ) ಮರುಜೀವ ನೀಡಿದೆ.
ತಿರುಮಲದ ಬಳಿಯಿರುವ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯ ಜನ್ಮತಾಳಿದ್ದು ಎನ್ನುವ ಪಟ್ಟನ್ನು ಟಿಟಿಡಿ ಸಡಿಲಸದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕ್ಷೇತ್ರದ ಅಭಿವೃದ್ದಿಗಾಗಿ ಪ್ರಾಧಿಕಾರ ರಚಿಸಿ ಅದಕ್ಕೆ ಚಾಲನೆ ನೀಡುವುದಾಗಿ ಟಿಟಿಡಿ ಹೇಳಿದೆ.
ತಿರುಮಲದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ; ಘೋಷಣೆ ಮಾಡಿದ ಟಿಟಿಡಿ
ಕರ್ನಾಟಕದ ಅಂಜನಾದ್ರಿ ಪರ್ವತ ಆಂಜನೇಯನ ಜನ್ಮಸ್ಥಳವೆಂದು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ ಎನ್ನುವುದು ಕರ್ನಾಟಕದ ವಾದ. ಆದರೆ, ಇದಕ್ಕೆ ಸೊಪ್ಪು ಹಾಕದ ಟಿಟಿಡಿ ಈ ಸಂಬಂಧ ವಿದ್ವಾಂಸಕರು ಮತ್ತು ಸಂಶೋಧಕರನ್ನು ಆಹ್ವಾನಿಸಿದೆ.
ಪುರಾಣಗಳ ಪ್ರಕಾರ, ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯ ಜನ್ಮ ತಾಳಿದ ಎನ್ನುವ ಕರ್ನಾಟಕದ ವಾದಕ್ಕೆ ಟಿಟಿಡಿ ಸಡ್ಡು ಹೊಡೆದಿದ್ದು, 'ಹನುಮಾನ್ ಜನ್ಮಭೂಮಿ ಅಭಿವೃದ್ದಿ ಯೋಜನೆ'ಗೆ ಬುಧವಾರ (ಫೆ 16) ಚಾಲನೆ ನೀಡುವುದಾಗಿ ಪ್ರಕಟಿಸಿದೆ. ಏನಿದು ವಿವಾದ?
ತಾರಾ ಪರ್ವತ, ಋಷಿಮುಖ ಪರ್ವತ, ವಾಲಿ ಪರ್ವತ, ಅಂಜನಾದ್ರಿ ಪರ್ವತ, ಮಾತಂಗ ಪರ್ವತ
ರಾಜ್ಯದ ಇತಿಹಾಸದಲ್ಲಿ ಅಂಜನಾದ್ರಿ ಪರ್ವತಕ್ಕೆ ವಿಶೇಷ ಸ್ಥಾನವಿದೆ. ಅಂಜನಾ ದೇವಿ ಆಂಜನೇಯನಿಗೆ ಇಲ್ಲಿ ಜನ್ಮ ನೀಡಿದ್ದರಿಂದ ಈ ಬೆಟ್ಟಕ್ಕೆ ಅಂಜನಾದ್ರಿ ಪರ್ವತ ಎಂಬ ಹೆಸರು ಬಂದಿದೆ. ಧರ್ಮ ರಕ್ಷಣೆಗೆ ಉಗಮವಾಗಿರುವ ಪಂಚ ಪರ್ವತಗಳು ಎಂದು ವ್ಯಾಖ್ಯಾನಿಸಲ್ಪಡುವ ತಾರಾ ಪರ್ವತ, ಋಷಿಮುಖ ಪರ್ವತ, ವಾಲಿ ಪರ್ವತ, ಅಂಜನಾದ್ರಿ ಪರ್ವತ, ಮಾತಂಗ ಪರ್ವತಗಳು ಈ ಭಾಗದಲ್ಲಿದೆ. ಇವುಗಳು ರಾಮಾಯಣ ಕಾಲದಿಂದಲೂ ಧರ್ಮ ರಕ್ಷಣೆಗಾಗಿ ಉಗಮವಾಗಿರುವ ಪರ್ವತಗಳು ಎನ್ನುವ ನಂಬಿಕೆ ಒಂದು ಕಡೆಯಾದರೆ, ಆಂಜನೇಯ ತನ್ನ ಬಾಲ್ಯವನ್ನು ಈ ಪರ್ವತಗಳಲ್ಲಿಯೇ ಕಳೆದಿದ್ದಾನೆ ಎನ್ನುವುದು ರಾಜ್ಯದ ಶ್ರೀಹನುಮಾನ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ಕಿಷ್ಕಿಂದೆ ವಾದ.
ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ, ಅಂಜನಾದ್ರಿ, ವೃಷಭಾದ್ರಿ, ನಾರಾಯಣಾದ್ರಿ, ವೆಂಕಟಾದ್ರಿ
ಆದರೆ, ತಿರುಮಲದಲ್ಲಿರುವ ಸಪ್ತ ಬೆಟ್ಟಗಳಾದ ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ, ಅಂಜನಾದ್ರಿ, ವೃಷಭಾದ್ರಿ, ನಾರಾಯಣಾದ್ರಿ ಹಾಗೂ ವೆಂಕಟಾದ್ರಿ ಪೈಕಿ, ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನ ತಾಯಿ ಅಂಜನಿಯು ತಪ್ಪಸ್ಸು ಮಾಡಿದ್ದರ ಫಲವಾಗಿ ಆಂಜನೇಯನ ಜನನವಾಯಿತು ಎನ್ನುವುದು ಟಿಟಿಡಿ ವಾದ. ಆಂಜನೇಯನ ಜನ್ಮಸ್ಥಳದ ಕುರಿತು ಎರಡು ಸಂಸ್ಥೆಗಳಾದ ಕಿಷ್ಕಿಂಧೆ ಟ್ರಸ್ಟ್ ಟಿಟಿಡಿ ನಡುವೆ ಸಂಘರ್ಷ ಬೆಳೆಯುತ್ತಲೇ ಇದೆ. ಈಗ, ಟಿಟಿಡಿ ಅಂಜಾನದ್ರಿಯಲ್ಲಿರುವ ಆಕಾಶಗಂಗಾವನ್ನು ಅಭಿವೃದ್ದಿ ಪಡಿಸುವುದಾಗಿ ಹೇಳಿದೆ.
ಟಿಟಿಡಿಯ ಅಧಿಕಾರಿ ಎ.ವಿ.ಧರ್ಮಾರೆಡ್ಡಿ
ಅಯೋಧ್ಯೆ, ಚಿತ್ರಕೂಟ ಸೇರಿದಂತೆ ರಾಮಾಯಣದಲ್ಲಿ ಬರುವ ಪ್ರದೇಶಗಳಿಂದ ವಿದ್ವಾಂಸಕರು ಮತ್ತು ಸಂಶೋಧಕರನ್ನು ಟಿಟಿಡಿ ತಿರುಮಲಕ್ಕೆ ಆಹ್ವಾನಿಸಿದೆ. ಬುಧವಾರ ಚಾಲನಗೊಳ್ಳಲಿರುವ ಹನುಮಾನ್ ಜನ್ಮಭೂಮಿ ಅಭಿವೃದ್ದಿ ಯೋಜನೆಯ ವೇಳೆ ಉಪಸ್ಥಿತರಿರುವಂತೆ ಟಿಟಿಡಿ ಇವರಲ್ಲಿ ಮನವಿ ಮಾಡಿದೆ. "ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಈ ಸಂಬಂಧ ವಿಚಾರ ಸಂಕಿರಣವೊಂದನ್ನು ಆಯೋಜಿಸಿದ್ದೆವು. ಅಂಜನಾದ್ರಿಯಲ್ಲಿರುವ ಆಕಾಶಗಂಗೆಯೇ ಹನುಮನ ಜನ್ಮಸ್ಥಳ ಎನ್ನುವುದು ಖಚಿತವಾಗಿದೆ"ಎಂದು ಟಿಟಿಡಿಯ ಅಧಿಕಾರಿ ಎ.ವಿ.ಧರ್ಮಾರೆಡ್ಡಿ ಹೇಳಿದ್ದಾರೆ.
ತಿರುಮಲದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎನ್ನುವ ತೀರ್ಮಾನ
ಟಿಟಿಡಿ ಹಠವನ್ನು ಒಪ್ಪದ ಹಂಪಿ ಶ್ರೀಹನುಮಾನ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಕಿಷ್ಕೆಂಧೆಯ ಸ್ಥಾಪಕ ಸ್ವಾಮಿ ಗೋವಿಂದನಂದ ಸರಸ್ವತಿ ತಮ್ಮ ವಾದವನ್ನು ಮಂಡಿಸಲು ತಿರುಪತಿಗೆ ತೆರಳಿದ್ದಾರೆ. ಆಂಜನೇಯನ ಜನ್ಮಸ್ಥಳದ ಕುರಿತು ಅಧ್ಯಯನ ನಡೆಸಲು ಟಿಟಿಡಿ ಅಧ್ಯಯನ ಸಮಿತಿಯನ್ನು ರಚಿಸಿ ಕಳೆದ ಡಿಸೆಂಬರ್ನಲ್ಲಿ ತಜ್ಞರನ್ನು ನೇಮಿಸಿತ್ತು. ಅಧ್ಯಯನ ನಡೆಸಿ ಅಭಿಪ್ರಾಯ ತಿಳಿಸುವಂತೆ ರಾಷ್ಟ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಮುರಳೀಧರ ಶರ್ಮಾ ಅವರ ನೇತೃತ್ವದಲ್ಲಿ ವಿದ್ವಾಂಸರನ್ನು ಒಳಗೊಂಡ ಸಮಿತಿಗೆ ಸೂಚಿಸಿತ್ತು. "ಪುರಾತನ ಸಾಹಿತ್ಯ, ಶಾಸನಗಳು, ಐತಿಹಾಸಿಕ ಸಂಗತಿಗಳ ಆಧಾರದಲ್ಲಿ ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಿ ತಿರುಮಲದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎನ್ನುವ ತೀರ್ಮಾನಕ್ಕೆ ಬರಲಾಗಿದೆ ಎಂದು ಪ್ರೊ. ಶರ್ಮಾ ಹೇಳಿದ್ದರು.
Recommended Video