ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: ಭಕ್ತರ ಜೊತೆ 320 ಕಿ.ಮೀ ನಡೆದ 'ಶಿವನ ದೂತ' ಶ್ವಾನ!
ಧರ್ಮಸ್ಥಳ: ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದಾರೆ. ಈ ನಡುವೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟಿರುವ ಭಕ್ತರ ತಂಡವೊಂದಕ್ಕೆ ಒಂದು ಶ್ವಾನ ಅಚ್ಚರಿಯ ಸಂಗಾತಿಯಾಗಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಬೆಂಗಳೂರಿನ ಯಲಹಂಕ ಮೂಲದ ಶ್ವೇತಾ ಮತ್ತು ಭವ್ಯ ಅವರ ನೇತೃತ್ವದ ತಂಡವು ಸುಮಾರು 320 ಕಿಲೋಮೀಟರ್ ಪಾದಯಾತ್ರೆ ಕೈಗೊಂಡಿದೆ. ಪರಶುರಾಮ ದೇವಸ್ಥಾನದ ಬಳಿ ಈ ತಂಡಕ್ಕೆ ಒಂದು ಶ್ವಾನ ಸೇರಿಕೊಂಡಿದ್ದು, ಕಳೆದ 10 ಕಿಲೋಮೀಟರ್ನಿಂದ ನಿರಂತರವಾಗಿ ಜೊತೆಯಾಗಿ ನಡೆಯುತ್ತಿದೆ.

ಭಕ್ತರ ಪ್ರಕಾರ, ಆರಂಭದಲ್ಲಿ ಶ್ವಾನ ರಸ್ತೆ ಬದಿಯಲ್ಲಿ ಮಲಗಿದ್ದರೂ, ತಂಡವನ್ನು ಕಂಡ ತಕ್ಷಣ ಎದ್ದು ಅವರ ಹಿಂದೆ ಸಾಗತೊಡಗಿತು. ಕಾಲುಗಳು ನೋವಿನಿಂದ ಬಳಲುತ್ತಿದ್ದರೂ ಕೂಡ ಶ್ವಾನವು ವಿಶ್ರಾಂತಿ ಪಡೆಯದೇ ತಂಡದ ಜೊತೆಗೆ ಸಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ಭಕ್ತರು ನೀಡಿದ ನೀರನ್ನು ಶ್ವಾನ ಕುಡಿಯದೆ, ಸ್ವಲ್ಪ ಹಾಲು ಮಾತ್ರ ಸೇವಿಸಿ ಮತ್ತೆ ಪಾದಯಾತ್ರೆ ಮುಂದುವರೆಸಿದೆ. ಪಾದಯಾತ್ರಿಗಳು ಮುಂದೆ ಸಾಗುತ್ತಿದ್ದಾರೆಯೇ ಎಂದು ಪದೇ ಪದೇ ಹಿಂದಿರುಗಿ ನೋಡುತ್ತಾ, ಒಂದು ರೀತಿಯ ರಕ್ಷಣೆಯಂತೆ ನಡೆದುಕೊಳ್ಳುತ್ತಿದೆ ಎಂದು ಭಕ್ತರು ಹೇಳುತ್ತಾರೆ.
ಈ ಹಿಂದೆ ಯಡಿಯೂರಿನ ಬಳಿ ರಾಘವೇಂದ್ರ ಸ್ವಾಮಿಗಳ ಸ್ತೋತ್ರ ಪಠಿಸುವಾಗಲೂ ಇಂತಹದ್ದೇ ಅನುಭವ ಎದುರಾಗಿತ್ತು ಎಂದು ಭಕ್ತರು ನೆನಪಿಸಿಕೊಂಡಿದ್ದಾರೆ.
"ನಮಗೆ ಶಿವನ ಮೇಲೆ ಅಪಾರ ಭಕ್ತಿ ಇದೆ. ನಾವು ಯಾವುದನ್ನೂ ಬೇಡಲು ಪಾದಯಾತ್ರೆ ಮಾಡುತ್ತಿಲ್ಲ. ಮುಂದಿನ ಜನ್ಮದಲ್ಲೂ ಶಿವನ ಭಕ್ತರಾಗಿಯೇ ಹುಟ್ಟಬೇಕು ಎನ್ನುವುದೇ ನಮ್ಮ ಸಂಕಲ್ಪ," ಎಂದು ಭಕ್ತರು ಹೇಳಿದ್ದಾರೆ.
'ನಮ್ಮ ನಡಿಗೆ ಮಂಜಪ್ಪನ ಕಡೆಗೆ' ಎಂಬ ಸಂಕಲ್ಪದೊಂದಿಗೆ ಸಾಗುತ್ತಿರುವ ಈ ತಂಡಕ್ಕೆ, ಶ್ವಾನದ ರೂಪದಲ್ಲಿ ಶಿವನ ಆಶೀರ್ವಾದ ದೊರೆತಿದೆ ಎಂಬ ನಂಬಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications