ಬೆಡ್ ಬಡಿದಾಟ: ಲಕ್ಷಣ ಕಂಡುಬಾರದಿದ್ದರೆ ಕೊವಿಡ್-19 ರೋಗಿಗಳೂ ರಿಲೀಸ್!
ಬೆಂಗಳೂರು, ಜುಲೈ.13: ಕೊರೊನಾವೈರಸ್ ಸೋಂಕಿನ ಹರಡುವಿಕೆ ಬಗ್ಗೆ ಕನ್ನಡಿಗರು ಪ್ರತಿಕ್ಷಣವೂ ಆತಂಕದಲ್ಲೇ ದಿನ ಕಳೆಯುವಂತಾ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಕೊವಿಡ್ ಕೇರ್ ಸೆಂಟರ್ ನಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಜನರನ್ನು ಮತ್ತಷ್ಟು ಚಿಂತೆಗೀಡು ಮಾಡುತ್ತಿದೆ.
ಬೆಂಗಳೂರಿನ ಕೊವಿಡ್ ಕೇರ್ ಸೆಂಟರ್ ನಲ್ಲಿ ಬೆಡ್ ಗಳನ್ನು ಖಾಲಿ ಮಾಡುವುದೇ ಮುಖ್ಯಧ್ಯೇಯವಾದಂತೆ ಕಾಣುತ್ತಿದೆ. ಸೋಂಕಿತ ಲಕ್ಷಣಗಳು ಕಂಡು ಬಾರದ ವ್ಯಕ್ತಿಗಳನ್ನು 7 ದಿನಗಳಲ್ಲೇ ಮನೆಗಳಿಗೆ ವಾಪಸ್ ಕಳುಹಿಸಲಾಗುತ್ತಿದೆ. ಇದಕ್ಕೂ ಮುನ್ನ ಯಾವುದೇ ರೀತಿ ಸೋಂಕಿನ ತಪಾಸಣೆ ನಡೆಸದೇ ಇರುವುದು ಆತಂಕಕ್ಕೆ ಕಾರಣವಾಗಿದೆ.
ಕೊವಿಡ್-19 ಟೆಸ್ಟ್ ಮುಗಿಸಿದ್ರಾ ಮುಂದೇನು ಗತಿ; ಹೀಗಿದೆ ವಾಸ್ತವ ಸ್ಥಿತಿ!
ಕೊರೊನಾವೈರಸ್ ಸೋಂಕು ತಪಾಸಣೆ ನಡೆಸದೇ ಕೊವಿಡ್ ಕೇರ್ ಸೆಂಟರ್ ಗಳಿಂದ ಲಕ್ಷಣರಹಿತರನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಒಂದು ವೇಳೆ ಸೋಂಕು ತಗಲಿದ್ದಲ್ಲಿ ಅಂಥ ರೋಗಿಗಳು ಅಸ್ವಸ್ಥಗೊಳ್ಳುತ್ತಾರೆ. ಇದರಿಂದ ನೆರೆಹೊರೆಯವರಿಗೂ ಸೋಂಕು ಹರಡುವ ಆತಂಕ ಎದುರಾಗಿದೆ.
ಲಕ್ಷಣರಹಿತರಿಗೆ ಯಾವುದೇ ಪರೀಕ್ಷೆಗಳಿಲ್ಲದೇ ಬಿಡುಗಡೆ
ಸರ್ಕಾರವು ಆರಂಭದಲ್ಲಿ ಕೋವಿಡ್ ರೋಗಿಗಳನ್ನು 24 ಗಂಟೆಗಳ ಒಳಗೆ ಎರಡು ದೃಢೀಕರಣ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿತ್ತು. ಆದರೆ ನಂತರ ಯಾವುದೇ ಪರೀಕ್ಷೆಯಿಲ್ಲದೆ 7 ದಿನಗಳ ನಂತರ ಲಕ್ಷಣರಹಿತ ರೋಗಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿತು. ಈ ನಡೆಯು ಇದೀಗ ಪ್ರಶ್ನಾತೀತವಾಗಿದ್ದು, ಜನರಲ್ಲಿ ಆತಂಕವನ್ನು ಹುಟ್ಟಿಸುತ್ತಿದೆ.
ಲಕ್ಷಣರಹಿತರಲ್ಲೇ ಕಾಣಿಸಿಕೊಂಡಿದ್ದು ಕೊವಿಡ್-19
ಕೊರೊನಾವೈರಸ್ ಸೋಂಕಿತ ಲಕ್ಷಣಗಳು ಇಲ್ಲದ ವ್ಯಕ್ತಿಗಳಲ್ಲೇ ಕೊವಿಡ್-19 ಪತ್ತೆಯಾಗಿರುವ ಉದಾಹರಣೆಗಳು ಇತ್ತೀಚಿಗಷ್ಟೇ ಬೆಳಕಿಗೆ ಬಂದಿದ್ದವು. ಜೂನ್.26ರಂದು 40 ವರ್ಷದ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರಿಗೆ ಕೊರೊನಾವೈರಸ್ ಸೋಂಕು ತಗಲಿದ್ದು, ಜುಲೈ.03ರಂದು ಅವರನ್ನು ಕೊವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಅದಾಗಿ ಸ್ವಲ್ಪ ದಿನದಲ್ಲೇ ಮತ್ತೆ ಅವರಲ್ಲಿ ಕೊರೊನಾವೈರಸ್ ಸೋಂಕು ಪತ್ತೆಯಾಗಿತ್ತು. ಇನ್ನೊಂದು ಕಡೆ ಜುಲೈ.01ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕೊರೊನಾವೈರಸ್ ಸೋಂಕಿತನನ್ನು ಯಾವುದೇ ರೀತಿ ಮರುಪರೀಕ್ಷೆ ನಡೆಸದೇ ಮನೆಗೆ ಕಳುಹಿಸಿರುವುದು ಬೆಳಕಿಗೆ ಬಂದಿದೆ.
ಮನೆಗೆ ವಾಪಸ್ ತೆರಳುವುದಕ್ಕೆ ನೆಗೆಟಿವ್ ವರದಿ ಅಗತ್ಯ
ಕೊರೊನಾವೈರಸ್ ಸೋಂಕಿನ ಲಕ್ಷಣಗಳಿಲ್ಲ ಎಂಬ ಕಾರಣಕ್ಕೆ ಕೊವಿಡ್ ಕೇರ್ ಸೆಂಟರ್ ನಿಂದ ಒಂದೇ ವಾರದಲ್ಲಿ ಮನೆಗಳಿಗೆ ವಾಪಸ್ ಕಳುಹಿಸಲಾಗುತ್ತಿದೆ. ಆದರೆ ನೆರೆಹೊರೆಯವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಜೂನ್.29ರಂದು ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತ ಲಕ್ಷಣವಿಲ್ಲದ ಕಾರಣ ಒಂದೇ ವಾರದಲ್ಲಿ ಅವರನ್ನು ಮನೆಗೆ ಕಳುಸಿದ್ದರು. ಆದರೆ ನೆಗೆಟಿವ್ ವರದಿ ಪಡೆದುಕೊಳ್ಳದೇ ಮನೆಗೆ ಹೇಗೆ ವಾಪಸ್ ಕರೆ ತಂದಿದ್ದೀರಿ ಎಂದು ಅಕ್ಕಪಕ್ಕದ ಮನೆಯವರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಸೋಂಕಿತ ವ್ಯಕ್ತಿಯೊಬ್ಬರ ಪುತ್ರಿ ಪ್ರಣತಿ ಪ್ರಶ್ನೆ ಮಾಡಿದ್ದಾರೆ.
ಕೊವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಯಾಗಿರುವ ತಮ್ಮ ಚಿಕ್ಕಪ್ಪ ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೋ ಇಲ್ಲವೋ ಎಂಬ ಬಗ್ಗೆ ಸ್ವತಃ ಮನೆಯವರೇ ಆತಂಕದಲ್ಲಿದ್ದಾರೆ. ಹೀಗಾಗಿ ಲಕ್ಷಣರಹಿತರ ಬಿಡುಗಡೆಗೂ ಮೊದಲು ಕೊವಿಡ್-19 ತಪಾಸಣೆ ನಡೆಸುವುದು ಉತ್ತಮ ಎಂದು ಪುತ್ರಿ ಪ್ರಣತಿ ಎಂಬುವರು ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರ ಸಮಸ್ಯೆಗಳಿಗೆ ಆಹ್ವಾನ ನೀಡುತ್ತಿದೆಯಾ?
300ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ದೊಮ್ಮಲೂರು ರೆಸಿಡೆನ್ಸಿಯಲ್ ವೆಲ್ಫೇರ್ ಅಸೋಸಿಯೇಷನ್ ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. "ಪ್ರಾಥಮಿಕ ಮಾಹಿತಿಯ ಪ್ರಕಾರ ಪ್ರಾರಂಭದಲ್ಲಿ ಸೌಮ್ಯ ಪ್ರಕರಣಗಳ ವೈದ್ಯಕೀಯ ಚೇತರಿಕೆಯ ಸರಾಸರಿ ಸಮಯವನ್ನು ಅಂದಾಜು ಎರಡು ವಾರಗಳು ಮತ್ತು ತೀವ್ರತರವಾದ ಪ್ರಕರಣಗಳಿಗೆ 3-6 ವಾರಗಳು ಎಂದು ನಿಗದಿಪಡಿಸಲಾಗಿತ್ತು. ಆದರೆ ಸರ್ಕಾರವು ಯಾವುದೇ ಪರೀಕ್ಷೆಯಿಲ್ಲದೆ ಏಳು ದಿನಗಳ ನಂತರ ರೋಗಿಗಳನ್ನು ಮನೆಗೆ ಕಳುಹಿಸುವುದು ತೊಂದರೆಯನ್ನು ಆಹ್ವಾನಿಸುವಂತಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ವಿ ನಾಯ್ಡು ದೂರಿದ್ದಾರೆ.