ತನಿಖೆಗೆ ಮೊದಲೇ ಆರೋಪಿಗಳ ಗುರುತು ಬಹಿರಂಗಪಡಿಸದಂತೆ ಪೊಲೀಸರಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜುಲೈ 02: ತನಿಖೆಗೆ ಮೊದಲೇ ಮಾಧ್ಯಮಗಳಿಗೆ ಆರೋಪಿಗಳ ಗುರುತು ಬಹಿರಂಗಪಡಿಸದಂತೆ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿದ್ದು, ಈಚೆಗಿನ ಪೊಲೀಸ್ ಪ್ರಕಟಣೆಗಳಲ್ಲಿ ಈ ಆದೇಶದ ಪಾಲನೆ ಕಂಡುಬರುತ್ತಿದೆ.
ಈಚೆಗೆ ಯಾವುದೇ ಅಪರಾಧ ಪ್ರಕರಣ ಸಂಬಂಧ ಪೊಲೀಸರ ಪ್ರಕಟಣೆಯಲ್ಲಿ ಆರೋಪಿಗಳ ಹೆಸರು ಪ್ರಕಟಣೆ ಮಾಡಲಾಗುತ್ತಿಲ್ಲ ಹಾಗೂ ಅವರ ಚಿತ್ರಗಳನ್ನು ಮಸುಕುಗೊಳಿಸಿ ಪ್ರಕಟಿಸಿರುವುದು ಕಂಡುಬರುತ್ತಿದೆ.

ಜೂನ್ 15ರಂದು ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಈ ಸೂಚನೆ ನೀಡಿತ್ತು. ವಕೀಲ್ ಎಚ್. ನಾಗಭೂಷಣ್ ರಾವ್ ಅವರು, ಮಾಧ್ಯಮಗಳಿಗೆ ಪೊಲೀಸರು ಆರೋಪಿಗಳು ಹಾಗೂ ತನಿಖಾ ವಿವರಗಳನ್ನು ಹಂಚಿಕೊಳ್ಳುವುದರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಆನಂತರ, ತನಿಖೆ ಪೂರ್ಣಗೊಳ್ಳುವವರೆಗೂ ಆರೋಪಿಗಳ ವಿವರಗಳನ್ನು ಬಹಿರಂಗಪಡಿಸದಂತೆ ಹೈಕೋರ್ಟ್ ಪೊಲೀಸರಿಗೆ ಸೂಚಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರಗಳು ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ತಿಳಿಸಿತ್ತು.
"ತನಿಖೆ ಪೂರ್ಣಗೊಳ್ಳುವ ಮುನ್ನ, ಪೊಲೀಸರು ತನಿಖೆಯ ಸ್ವರೂಪ, ತನಿಖೆ ಸಮಯದಲ್ಲಿ ಸಂಗ್ರಹಿಸಿದ ವಸ್ತುಗಳು ಇತ್ಯಾದಿಗಳನ್ನು ಬಹಿರಂಗಪಡಿಸಬಾರದು. ಪೊಲೀಸರಿಗೆ ಸಮಗ್ರ ನಿರ್ದೇಶನಗಳನ್ನು ನೀಡಬೇಕಾಗಿದೆ" ಎಂದು ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ತಿಳಿಸಿದ್ದರು.
ಈ ನಿರ್ದೇಶನಗಳನ್ನು ಉಲ್ಲಂಘಿಸಿದರೆ ಪೊಲೀಸ್ ಅಧಿಕಾರಿಗಳ ವಿರುದ್ಧ ದಂಡನಾತ್ಮಕ ಕ್ರಮ ಜಾರಿಗೊಳಿಸಬೇಕಾಗುತ್ತದೆ ಎಂದು ಹೇಳಿದ ಪೀಠವು, ನಾಲ್ಕು ವಾರಗಳಲ್ಲಿ ಈ ನಿರ್ದೇಶನ ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಹನ್ನೊಂದು ಕನ್ನಡ ಚಾನೆಲ್ಗಳು, ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಪ್ರತಿವಾದಿಗಳೆಂದು ಹೆಸರಿಸಿರುವ ರಿಟ್ ಅರ್ಜಿಯಲ್ಲಿ, "ತನಿಖೆ ಪೂರ್ಣಗೊಳ್ಳುವ ಮುನ್ನವೇ ಪೊಲೀಸರು ಪ್ರಕರಣಗಳ ವಿವರಗಳನ್ನು ಒದಗಿಸುತ್ತಿದ್ದಾರೆ. ಇದು ನ್ಯಾಯಾಲಯದಲ್ಲಿ ನ್ಯಾಯ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ" ಎಂದು ದೂರಲಾಗಿತ್ತು.
ಜುಲೈ 20ಕ್ಕೆ ವಿಚಾರಣೆ ಮುಂದೂಡಲಾಗಿದೆ. ಸದ್ಯಕ್ಕೆ ಹೈಕೋರ್ಟ್ ನೀಡಿದ ಈ ನಿರ್ದೇಶನಗಳನ್ನು ಬೆಂಗಳೂರಿನಲ್ಲಿ ಪೊಲೀಸರು ಪಾಲಿಸುತ್ತಿರುವುದು ಕಂಡುಬಂದಿದೆ.












Click it and Unblock the Notifications