Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ?
ಬೆಂಗಳೂರು: ವಿವಿಧ ರೈಲುಗಳು ಕರ್ನಾಟಕದ ದಕ್ಷಿಣ ಭಾಗದಿಂದ ಮುಂಬೈಗೆ ಸಂಪರ್ಕ ಕಲ್ಪಿಸುತ್ತವೆ. ಆದರೆ ಇತ್ತೀಚೆಗೆ ಸ್ಲೀಪರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (Sleepr Vande Bharat Express Train) ಸಂಚಾರ ಮಾಡುವಂತೆ ಭಾರತೀಯ ರೈಲ್ವೆ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಜೋರಾಗಿ ಕೇಳಿ ಬಂದಿತ್ತು. ಈ ಸಂಬಂಧ ರಾಜ್ಯ ಸಂಸದರು, ಸಚಿವರು ಮನವಿ ಮಾಡಿದ್ದರು. ಇದೀಗ ಕೇಂದ್ರ ಸರ್ಕಾರ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆಗೆ ಅನುಮೋದನೆ ನೀಡಿದೆ. ಯಾವೆಲ್ಲ ನಿಲ್ದಾಣಗಳ ಮೂಲಕ ಸಂಚರಿಸುತ್ತದೆ, ಕರ್ನಾಟಕದ ಎಷ್ಟು ಜಿಲ್ಲೆಗಳಲ್ಲಿ ಹಾದು ಹೋಗಲಿದೆ. ಇದರ ಪ್ರಯೋಜನೆ, ಸಮಯ-ವೇಳಾಪಟ್ಟಿ ಮಾಹಿತಿ ಇಲ್ಲಿದೆ.
ಬಿಜೆಪಿ ಸಂಸದ ಪಿಸಿ ಮೋಹನ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಅಧಿಕೃತ ಅನುಮೋದನೆ ಪತ್ರ ಹಂಚಿಕೊಂಡಿದ್ದಾರೆ. 'ಕೇಂದ್ರ ಸರ್ಕಾರ ಬಹುನಿರೀಕ್ಷೆಯ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣವರೆಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ' ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ. ಏಪ್ರಿಲ್ 5ರಂದು ಅನುಮೋದನೆ ನೀಡಿದ್ದಾಗಿ ಪತ್ರದಲ್ಲಿ ತಿಳಿಸಲಾಗಿದೆ.

ರಾಜ್ಯದ ಪ್ರಯಾಣಿಕರಿಗೆ ಐಶಾರಾಮಿ ರೈಲು ಸೇವೆ
ಈ ಮೂಲಕ ಬೆಂಗಳೂರು, ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳ ಸಾವಿರಾರು ಪ್ರಯಾಣಿಕರು ಹಾಗೂ ಮಹಾರಾಷ್ಟ್ರದ ಪುಣೆ, ಮುಂಬೈ ಇನ್ನಿತರ ನಗರಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ತ್ವರಿತ ಹಾಗೂ ಆರಾಮದಾಯಕ ರೈಲು ಸಾರಿಗೆ ಸಿಕ್ಕಂತಾಗಿದೆ. ಇತ್ತೀಚೆಗಷ್ಟೆ ದೇಶದಲ್ಲಿ ಮೊದಲು ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭಿಸಲಾಗಿದೆ. ಸುದೀರ್ಘ ಹಾಗೂ ರಾತ್ರಿ ಪ್ರಯಾಣದ ಉದ್ದೇಶದಿಂದ ಈ ರೈಲನ್ನು ಪರಿಚಯಿಸಲಾಗಿದೆ. ಐಶಾರಾಮಿ ಮತ್ತು ಉತ್ತಮ ಪ್ರಯಾಣದ ಅನುಭವ ನೀಡುತ್ತದೆ. ಪ್ರಯಾಣಿಕ ಸ್ನೇಹಿ ವ್ಯವಸ್ಥೆ, ವಿನ್ಯಾಸ, ಆಧುನಿಕ ರೈಲ್ವೆ ಮೂಲಸೌಕರ್ಯಗಳನ್ನು ಈ ರೈಲು ಒಳಗೊಂಡಿದೆ.
ಕೇಂದ್ರದ ಈ ನಿರ್ಧಾರಕ್ಕಾಗಿ ಪಿಸಿ ಮೋಹನ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪ್ರಯಾಣಿಕರ ಪರವಾಗಿ ಧನ್ಯವಾದ ತಿಳಿಸಿದ್ದಾರೆ. ಈ ರೈಲು ಯಾವೆಲ್ಲ ಮಾರ್ಗದಲ್ಲಿ ಸಂಚರಿಸಲಿದೆ, ಕರ್ನಾಟಕಕ್ಕೆ ಏನೆಲ್ಲ ಪ್ರಯೋಜನವಿದೆ ಎಂಬ ಮಾಹಿತಿ ಮುಂದಿದೆ.
ಸತತ ಪ್ರಯತ್ನ: ರೈಲು ಸಂಚಾರಕ್ಕೆ ಒಪ್ಪಿಗೆ
ಕಳೆದ ವರ್ಷ ಡಿಸೆಂಬರ್ 2 ರಂದು ನೈಋತ್ಯ ರೈಲ್ವೆ (SWR) ಸ್ಥಾಯಿ ಸಮಿತಿಯ ಮಾರ್ಗ ಅಧ್ಯಯನಕ್ಕೆ ಬಂದಾಗ ಪಿಸಿ ಮೋಹನ್ ಅವರು ವಂದೇ ಭಾರತ್ ಸ್ಲೀಪರ್ ರೈಲನ್ನು ಪರಿಚಯಿಸಲು ಒತ್ತಾಯಿಸಿದರು, SMVT ಬೆಂಗಳೂರು ನಿಲ್ದಾಣ ಅಥವಾ ಇತರ ನಿಲ್ದಾಣದಿಂದ ರೈಲು ಕಾರ್ಯಾಚರಣೆಗೆ ಕೋರಿದ್ದರು. ಸತತ ಪ್ರಯತ್ನದ ಭಾಗವಾಗಿ ರೈಲು ಕಾರ್ಯಾಚರಣೆಗೆ ಕೇಂದ್ರ ಒಪ್ಪಿಗೆ ನೀಡಿದೆ.
ಸ್ಲೀಪರ್ ರೈಲು ಮಾರ್ಗ, ನಿಲುಗಡೆ ನಿಲ್ದಾಣಗಳು
ಮುಂಬೈ-ಬೆಂಗಳೂರು ಸ್ಲೀಪರ್ ವಂದೇ ಭಾರತ್ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ತುಮಕೂರು, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಪುಣೆ, ಲೋನಾವಲ, ಕಲ್ಯಾಣ್ ಜಂಕ್ಷನ್ ಮಾರ್ಗವಾಗಿ ಮುಂಬೈನ ಪ್ರಸಿದ್ಧ ಛತ್ರಪತಿ ಶಿವಾಜಿ ರೈಲು ನಿಲ್ದಾಣ ತಲುಪಲಿದೆ. ಆದರೆ ಈ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಬರಬೇಕಿದೆ.
ರಾಜ್ಯ ಪ್ರವಾಸೋದ್ಯಮಕ್ಕೆ ಉತ್ತೇಜನ, ಸಾರಿಗೆಗೆ ಪೂರಕ
ಕರ್ನಾಟಕದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಜಿಲ್ಲೆಗಳು ಹಾಗೂ ಅಕ್ಕಪಕ್ಕ ಜಿಲ್ಲೆಗಳ ಸುದೀರ್ಘ ಪ್ರಯಾಣದ ಪ್ರಯಾಣಿಕರಿಗೆ ಈ ರೈಲಿನಿಂದ ಅನುಕೂಲವಾಗಲಿದೆ. ಶೈಕ್ಷಣಿಕ, ಉದ್ಯೋಗ, ಪ್ರವಾಸೋಧ್ಯಮಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ. ಕೈಗಾರಿಕೆ, ವ್ಯಾಪಾರ ವಹೀವಾಟು ವಿಚಾರದಲ್ಲೂ ಒಂದಷ್ಟು ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ.
ಕರ್ನಾಟಕದ ಮೊದಲ ಸ್ಲೀಪರ್ ವಿಬಿ ರೈಲು
ಮುಂಬೈ-ಬೆಂಗಳೂರು ಮಧ್ಯೆ ಸುಮಾರು 1211 ಕಿಲೋ ಮೀಟರ್ ದೂರವಿದೆ. ಇಷ್ಟು ದೂರವನ್ನು ಸುಮಾರು 20 ಗಂಟೆ ಒಳಗೆ ಕ್ರಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ರೈಲು ಬೆಂಗಳೂರು ಮತ್ತು ಮುಂಬೈಗೆ ಆಗಮನ, ನಿರ್ಗಮನ, ಸಮಯದ ಮಿತಿ, ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಕೆಲವೇ ದಿನಗಳಲ್ಲಿ ಪ್ರಕಟಿಸಲಿದೆ. ಒಟ್ಟಾರೆ ನೋಡುವುದಾದರೆ ಬೆಂಗಳೂರು ಒಳಗೊಂಡಂತೆ ಕರ್ನಾಟಕಕ್ಕೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಿಕ್ಕಂತಾಗಿದೆ.












Click it and Unblock the Notifications