Bengaluru-Mangaluru Road: ಬೆಂಗಳೂರು-ಮಂಗಳೂರು ಹೆದ್ದಾರಿ ದುಸ್ಥಿತಿ, ವಾಹನ ಸವಾರರ ಪರದಾಟ
ಬೆಂಗಳೂರು, ಜನವರಿ 06: ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸುವ ಪ್ರಮುಖ ರಸ್ತೆ ವಾಹನ ಸವಾರರ ಪಾಲಿಗೆ ಸಂಕಷ್ಟ ತಂದಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಅವ್ಯವಸ್ಥೆಗೆ ಜನರು ಅಸಮಾಧಾನಗೊಂಡಿದ್ದಾರೆ. ಬೆಂಗಳೂರು, ಹಾಸನ ಮೂಲಕ ಮಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಇಷ್ಟು ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳು ಏಕೆ ಮೌನವಾಗಿದ್ದಾರೆ?, ಅಪೂರ್ಣಗೊಂಡ ಕಾಮಗಾರಿಗಳು ಮುಗಿಯಲು ಸರ್ಕಾರ ನೀಡಿರುವ ಗಡುವು ಯಾವುದು? ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುವ ಶಿರಾಡಿ ಘಾಟ್ನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನ ವರದಿ (ಡಿಪಿಆರ್) ಸಿದ್ದಪಡಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಮೊದಲು ಇರುವ ರಸ್ತೆಯನ್ನು ಸರಿಪಡಿಸಿ ಬಳಿಕ ಸುರಂಗ ಮಾರ್ಗ ಮಾಡಿ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿನಿತ್ಯ ಬೆಂಗಳೂರು-ಮಂಗಳೂರು ನಡುವೆ ಸಾವಿರಾರು ವಾಹನಗಳು ಸಂಚಾರ ನಡೆಸುತ್ತವೆ. ಆದರೆ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಳಿದೇ ಟೋಲ್ ಸಂಗ್ರಹ ಮಾಡುವ ಮೂಲಕ ವಾಹನ ಸವಾರರ ಕೆಂಗಣ್ಣಿಗೆ ಎನ್ಎಚ್ಎಐ ಗುರಿಯಾಗಿದೆ. 2021ರಲ್ಲಿ ಕಾಮಗಾರಿ ಆರಂಭವಾದರೂ ಸಹ ಇನ್ನೂ ಪೂರ್ಣಗೊಂಡಿಲ್ಲ. ಜನರು ವಾಹನ ಬಿಟ್ಟು ವಿಮಾನದಲ್ಲಿ ಸಂಚಾರ ನಡೆಸಬೇಕೆ? ಎಂದು ಜನರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ವಾಹನ ಸವಾರರ ಆಕ್ರೋಶ: ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಈ ಕುರಿತು ಮಾತನಾಡಿದ್ದಾರೆ. "ಮಂಗಳೂರಿಗೆ ಹೊಸ ರಸ್ತೆ ಯೋಜನೆಗಿಂತ ಇವಾಗ ಇರುವ ಯೋಜನೆ ಪೂರ್ಣಗೊಳಿಸಿ. ಹತ್ತು ವರ್ಷ ಆದರೂ ರಸ್ತೆಯ ಕೆಲವು ಭಾಗಗಳು ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ಎಕ್ಸ್ಪ್ರೆಸ್ ವೇ ಮಾಡುವ ಮೊದಲು ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಿ" ಎಂದು ಒತ್ತಾಯಿಸಿದ್ದಾರೆ.
"ಈ ರಸ್ತೆಯಲ್ಲಿ ಘಾಟ್ ಇದೆ. ಇಲ್ಲಿ ರಸ್ತೆ ಹಾಗೂ ತಿರುವುಗಳು ಹೊಸ ಸೇತುವೆ ನಿರ್ಮಾಣ, ಕಾರ್ಯ ನಡೆಯದೆ ಇರುವುದರಿಂದ ಮಂಗಳೂರಿನ ಕಡೆಗೆ ವಾಹನ ಕಳಿಸಿದರೆ ಮುಂಗಡವಾಗಿ ಟಯರ್ ಬುಕ್ ಮಾಡಿ ಇಡಬೇಕಾದ ಪರಿಸ್ಥಿತಿ ಇದೆ" ಎಂದು ರಸ್ತೆಯ ಸ್ಥಿತಿಯ ವಿವರ ನೀಡಿದ್ದಾರೆ.
"ಓವರ್ ಲೋಡ್ ಲಾರಿಗಳು ಹಳ್ಳಕ್ಕೆ ಬಿದ್ದಲ್ಲಿ ಮೂರೂ ಮೂರು ದಿನ ಅಲ್ಲಿಯೇ ಇರುತ್ತವೆ. ರಸ್ತೆ ಅವಾಂತರಗಳು ನೋಡಲು ಸಾಧ್ಯವಿಲ್ಲ. ಕಲ್ಲಡ್ಕ, ಬಿಸಿ ರೋರ್ ರಸ್ತೆ, ಉಪ್ಪಿನಂಗಡಿ ಗುಂಡ್ಯ, ಮುಂಜ್ಜರಾಬಾದ್, ಸಕಲೇಶಪುರ, ಹಾಸನ ಬೈಪಾಸ್ ರಸ್ತೆ ಬಹಳ ಸುಖಕರವಾದ ರಸ್ತೆ ಎಂದು ಎನ್ಎಚ್ಎಐಗೆ ಪ್ರಶಸ್ತಿ ಕೊಡಬೇಕು" ಎಂದು ಹೇಳಿದ್ದಾರೆ.
"ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಚಿವರುಗಳು ದಯಮಾಡಿ ಆ ರಸ್ತೆಯಲ್ಲಿ ತಮ್ಮ (ಖಾಸಗಿ ವಾಹನ) ವಾಹನದಲ್ಲಿ ಸಂಚಾರ ನಡೆಸಿ ರಸ್ತೆಯನ್ನು ಒಮ್ಮೆ ನೋಡಿ ಬರಲಿ. ರಸ್ತೆ ಬಳಕೆ ಮಾಡುವವರ ಮೇಲೆ ಸ್ವಲ್ಪ ಆದರೂ ಇವರಿಗೆ ಕಳಕಳಿ ಇರಲಿ. ರಸ್ತೆ ಅವ್ಯವಸ್ಥೆ ಬಗ್ಗೆ ಏಕೆ ಅವರು ಮಾತನಾಡುತ್ತಿಲ್ಲ" ಎಂದು ಪ್ರಶ್ನೆಮಾಡಿದ್ದಾರೆ.
ಬೆಂಗಳೂರು-ಮೈಸೂರು ಮಾದರಿಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಎಕ್ಸ್ಪ್ರೆಸ್ ವೇ ನಿರ್ಮಾಣ ಮಾಡುವ ಕುರಿತು ಚರ್ಚೆಗಳು ನಡೆದಿವೆ. ಈಗ ಬಾಕಿ ಇರುವ ಕಾಮಗಾರಿಗಳನ್ನು ಯಾವಾಗ ಪೂರ್ಣ ಮಾಡುತ್ತೀರಿ. ಹೊಸ ರಸ್ತೆ ನಿರ್ಮಾಣ ಮಾಡುವ ಬದಲು ಈಗಿರುವ ರಸ್ತೆಯನ್ನು ವಾಹನ ಸವಾರರಿಗೆ ಅನುಕೂಲವಾಗುವಂತೆ ಮಾಡಿ ಎಂದು ಒತ್ತಾಯಿಸಲಾಗಿದೆ.












Click it and Unblock the Notifications