ಸೆಪ್ಟೆಂಬರ್ 25 ರಿಂದ ಬೆಂಗಳೂರು-ಹೈದರಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ, ಮಾರ್ಗ, ವೇಳಾಪಟ್ಟಿ ವಿವರ ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್ 21: ಕರ್ನಾಟಕಕ್ಕೆ ಮೂರನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೆಪ್ಟೆಂಬರ್ 25 ರಂದು ಸಂಚಾರ ಮಾಡಲಿದೆ. ಇದು ದಕ್ಷಿಣ ಭಾರತದ ಎರಡು ಪ್ರಮುಖ ಟೆಕ್ ಹಬ್ಗಳಾದ ಬೆಂಗಳೂರು ಮತ್ತು ಹೈದರಾಬಾದ್ ನಗರಗಳನ್ನು ಸಂಪರ್ಕಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ಸೆಮಿ-ಹೈ-ಸ್ಪೀಡ್ ರೈಲು ಯಶವಂತಪುರ ಮತ್ತು ಕಾಚಿಗುಡ ನಡುವೆ 609.81 ಕಿಮೀ ಕ್ರಮಿಸಲು ಸರಾಸರಿ 71.74 ಕಿಮೀ ವೇಗದಲ್ಲಿ 8.30 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಪ್ರಸ್ತುತ ವೇಗದ ರೈಲಿಗಿಂತ (ದುರೊಂತೊ ಎಕ್ಸ್ಪ್ರೆಸ್) ಒಂದು ಗಂಟೆ ವೇಗವಾಗಿರುತ್ತದೆ. ಆದರೆ, ಇದು ಕರ್ನಾಟಕದ ಯಾವುದೇ ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂದು ಡಿಎಚ್ ವರದಿ ಮಾಡಿದೆ.

ರೈಲು ರಾಯಚೂರು ಮಾರ್ಗವಾಗಿ ಸಂಚರಿಸಿ ಯಲಹಂಕದಲ್ಲಿ ನಿಲುಗಡೆಯಾಗಲಿದೆ ಎಂದು ರೈಲ್ವೆ ಆಸಕ್ತರು ನಿರೀಕ್ಷಿಸಿದ್ದರು. ಆದರೆ ಅದು ಇಲ್ಲದಾಗಿದೆ. ರೈಲನ್ನು ಸಿಕಂದರಾಬಾದ್ ಪ್ರಧಾನ ಕಚೇರಿಯ ದಕ್ಷಿಣ ಮಧ್ಯ ರೈಲ್ವೇ (SCR) ನಿರ್ವಹಿಸುತ್ತದೆ ಮತ್ತು ಕಾಚಿಗುಡದಲ್ಲಿ ಅದರ ಪ್ರಾಥಮಿಕ ನಿರ್ವಹಣೆಯನ್ನು ಹೊಂದಿರುತ್ತದೆ.
ನೂತನ ಬೆಂಗಳೂರು ಹೈದರಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ ಸೆಪ್ಟೆಂಬರ್ 24 ರಂದು ಕಾಚಿಗುಡದಲ್ಲಿ ಚಾಲನೆಗೊಳ್ಳಲಿದೆ. ಆ ದಿನ ಮಾರ್ಗದ ಬಹುತೇಕ ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ವಾಣಿಜ್ಯ ಕಾರ್ಯಾಚರಣೆಗಳು ಮರುದಿನ ಪ್ರಾರಂಭವಾಗಲಿವೆ ಎಂದು ಎಸ್ಸಿಆರ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು, ನೈಋತ್ಯ ರೈಲ್ವೆ (SWR) ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್, ಪ್ರತಿದಿನ ಎರಡು ನಗರಗಳ ನಡುವೆ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ರೈಲು ವೇಗವಾಗಿ ಮತ್ತು ಹೆಚ್ಚು ಆರಾಮದಾಯಕ ಸಾರಿಗೆ ವಿಧಾನವಾಗಿದೆ ಎಂದು ಆಶಿಸಿದರು. ರೈಲ್ವೇ ಮಂಡಳಿಯು ನಿಖರವಾದ ಸಮಯ ಮತ್ತು ದರವನ್ನು ಇನ್ನೂ ತಿಳಿಸಬೇಕಾಗಿದೆ ಎಂದು ನೈಋತ್ಯ ರೈಲ್ವೆ ಮೂಲಗಳು ತಿಳಿಸಿವೆ.

ಗುರುವಾರ ಸದರಿ ರೈಲಿನ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ಕಾಚಿಗುಡದಿಂದ ಮಧ್ಯಾಹ್ನ 2 ಗಂಟೆಗೆ ಯಶವಂತಪುರಕ್ಕೆ ಆಗಮಿಸುವ ರೈಲು, ಹಿಂತಿರುಗುವಾಗ 2.45 ಕ್ಕೆ ಹೊರಡಲಿದೆ. ಕರ್ನಾಟಕ ರೈಲ್ವೇ ವೇದಿಕೆಯ ಕೆಎನ್ ಕೃಷ್ಣ ಪ್ರಸಾದ್ ಮಾತನಾಡಿ, ರೈಲಿನಿಂದ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಈ ರೈಲು ರಾಯಚೂರು ಮಾರ್ಗವಾಗಿ ಸಂಚರಿಸಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಆವರಿಸಿದರೆ ಉತ್ತಮ ಎಂದು ಹೇಳಿಕೆ ನೀಡಿದ್ದಾರೆ.
ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಯಲಹಂಕದಲ್ಲಿ ನಿಲುಗಡೆ ಮಾಡಬೇಕು. ಏಕೆಂದರೆ ಇದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಮತ್ತು ಬರುವ ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಇದು ಕರ್ನಾಟಕ ಮತ್ತು ತೆಲಂಗಾಣ ಎರಡಕ್ಕೂ ಮೂರನೇ ವಂದೇ ಭಾರತ್ ಎಕ್ಸ್ಪ್ರೆಸ್ ಆಗಿರುತ್ತದೆ.
ಕರ್ನಾಟಕದ ಮೊದಲ ಎರಡು ವಂದೇ ಭಾರತ್ ರೈಲುಗಳು ಮೈಸೂರಿನಿಂದ ಬೆಂಗಳೂರಿನ ಮೂಲಕ ಚೆನ್ನೈ ಮತ್ತು ಬೆಂಗಳೂರನ್ನು ಧಾರವಾಡದೊಂದಿಗೆ ಸಂಪರ್ಕಿಸುತ್ತವೆ. ತೆಲಂಗಾಣದ ಮೊದಲ ಎರಡು ವಂದೇ ಭಾರತ್ ರೈಲುಗಳು ಸಿಕಂದರಾಬಾದ್ ಅನ್ನು ವಿಶಾಖಪಟ್ಟಣಂ ಮತ್ತು ತಿರುಪತಿಯೊಂದಿಗೆ ಸಂಪರ್ಕಿಸುತ್ತವೆ.
ಬೆಂಗಳೂರು-ಹೈದರಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ನ ಬಗ್ಗೆ ತಿಳಿಯಬೇಕಾದ ಅಂಶಗಳು
1. ದೂರ: 609.81 ಕಿಮೀ (ಎರಡು ಮಾರ್ಗದಲ್ಲಿ: 355.03 ಕಿಮೀ, ಒಂದು ಕಡೆ ಮಾರ್ಗ: 254.78 ಕಿಮೀ)
2. ಪ್ರಯಾಣದ ಸಮಯ: 8.30 ಗಂಟೆಗಳು
3. ವಾರದಲ್ಲಿ 6 ದಿನಗಳು (ಬುಧವಾರ ಯಾವುದೇ ಸೇವೆ ಇರಲ್ಲ)
4. ಬೋಗಿಗಳ ಸಂಖ್ಯೆ: 16 (14 ಚೇರ್ ಕಾರುಗಳು, 2 ಕಾರ್ಯನಿರ್ವಾಹಕ ವರ್ಗಗಳು)
ವೇಳಾಪಟ್ಟಿ
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಖ್ಯೆ 20703 (ಕಾಚಿಗುಡ- ಯಶವಂತಪುರ): ಕಾಚಿಗುಡದಿಂದ ಬೆಳಿಗ್ಗೆ 5.30 ಹೊರಡುತ್ತದೆ, ನಂತರ ಮಹೆಬೂಬನಗರ ಬೆಳಗ್ಗೆ 7; ಕರ್ನೂಲು ನಗರ ಬೆಳಗ್ಗೆ 8.40, ಅನಂತಪುರ ಬೆಳಗ್ಗೆ 10.55, ಧರ್ಮಾವರಂ ಬೆಳಗ್ಗೆ 11.30 ಮತ್ತು ಯಶವಂತಪುರ ಮಧ್ಯಾಹ್ನ 2ಕ್ಕೆ ಬಂದು ತಲುಪುತ್ತದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಖ್ಯೆ 20704 (ಯಶವಂತಪುರದಿಂದ ಕಾಚೇಗೌಡಕ್ಕೆ): ಯಶವಂತಪುರದಿಂದ ಮಧ್ಯಾಹ್ನ 2.45ಕ್ಕೆ ಹೊರಟು, ಧರ್ಮಾವರಂ ಸಂಜೆ 5.20; ಅನಂತಪುರ ಸಂಜೆ 5.41, ಕರ್ನೂಲು ನಗರ ರಾತ್ರಿ 7.51, ಮಹೆಬೂಬ್ನಗರ ರಾತ್ರಿ 9.40 ಮತ್ತು ಕಾಚೇಗೌಡ ರಾತ್ರಿ 11.15ಕ್ಕೆ ಬಂದು ತಲುಪುತ್ತದೆ.












Click it and Unblock the Notifications