ನೇರವಾಗಿ ಪ್ರಧಾನಿಗೇ ಉದ್ಯಮಿಗಳ ಈಮೇಲ್: ಅಡಕತ್ತರಿಯಲ್ಲಿ ಬೊಮ್ಮಾಯಿ
ಬೆಂಗಳೂರು, ಏಪ್ರಿಲ್ 9: ರಾಜ್ಯದ ಮತ್ತು ರಾಜಧಾನಿ ಬೆಂಗಳೂರಿನ ಮೂಲಭೂತ ಸೌಕರ್ಯದ ಬಗ್ಗೆ ಇಬ್ಬರು ರಾಜ್ಯದ ಉದ್ಯಮಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೇ ಈಮೇಲ್ ಬರೆದಿದ್ದು, ರಾಜ್ಯ ಸರಕಾರ ತೀವ್ರ ಮುಜುಗರ ಎದುರಿಸುವಂತಾಗಿದೆ.
ಒಂದು ಕಡೆ, ಪಕ್ಕದ ತೆಲಂಗಾಣ ಮತ್ತು ತಮಿಳುನಾಡು ಸರಕಾರಗಳು ನಮ್ಮಲ್ಲಿಗೆ ಬನ್ನಿ ಎಂದು ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಉದ್ಯಮಿಗಳಿಗೆ ಆಹ್ವಾನ ನೀಡುತ್ತಿವೆ. ಇದರ ಜೊತೆಗೆ, ರಾಜ್ಯದಲ್ಲಿನ ಮತೀಯ ಸಂಘರ್ಷಗಳು.
ಧಾರ್ಮಿಕ ವಿಭಜನೆ: ಕಿರಣ್ ಮಜುಂದಾರ್ ಶಾ ಟ್ವೀಟ್ಗೆ ಬಿಜೆಪಿ ತಿರುಗೇಟು
ಹಿಜಾಬ್ ನಿಂದ ಆರಂಭವಾದ ಕೋಮು ಸಾಮರಸ್ಯ ಕದಡುವ ಕೆಲಸಗಳು ವಿವಿಧ ಆಯಾಮಗಳನ್ನು ಪಡೆದುಕೊಳ್ಳುತ್ತಿವೆ. ಇನ್ನೊಂದು ಕಡೆ, ರಸ್ತೆ, ಒಳಚರಂಡಿ ಸೇರಿದಂತೆ ಹಲವು ತೊಂದರೆಗಳು ಎದುರಾಗುತ್ತಿವೆ. ಇದ್ಯಾವುದನ್ನೂ ಬೊಮ್ಮಾಯಿ ಸರಕಾರ ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎನ್ನುವ ಅಸಮಾಧಾನವೂ ಹೆಚ್ಚಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇತ್ತೀಚೆಗೆ ಹೇಳಿಕೆ ನೀಡುತ್ತಾ, "ನಮ್ಮ ರಾಜ್ಯದ ಸಮಸ್ಯೆಗಳ ಗಮನ ಹರಿಸಿ ಎಂದು ಖ್ಯಾತ ಉದ್ಯಮಿಗಳು ಪ್ರಧಾನಿಗೇ ಪತ್ರ ಬರೆಯುತ್ತಾರೆಂದರೆ ಏನರ್ಥ, ರಾಜ್ಯ ಸರಕಾರ ಅಸಮರ್ಥ ಎಂದಲ್ಲವೇ"ಎಂದು ಪ್ರಶ್ನಿಸಿದ್ದರು.
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಟ್ವೀಟ್
ಕೆಲವು ದಿನಗಳ ಹಿಂದೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿ, "ಮುಖ್ಯಮಂತ್ರಿಗಳಾಗಲಿ ಅಥವಾ ರಾಜ್ಯದ ಇತರ ಯಾವುದೇ ಮಂತ್ರಿಗಳು ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತೇವೆ ಎಂದು ಹೇಳಿಲ್ಲ. ನಾನು ಎತ್ತಿರುವ ಯಾವುದೇ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸರಕಾರದ ಕಡೆಯಿಂದ ಬಂದಿಲ್ಲ"ಎಂದು ಆಕ್ರೋಶ ಹೊರಹಾಕಿದ್ದರು. ಧಾರ್ಮಿಕ ಅಶಾಂತಿಯ ವಿಚಾರದಲ್ಲಿ ಮತ್ತು ತೆಲಂಗಾಣದ ಐಟಿಬಿಟಿ ಸಚಿವ ಕೆ.ಟಿ.ರಾಮರಾವ್ ನಮ್ಮ ರಾಜ್ಯಕ್ಕೆ ಬನ್ನಿ ಎಂದು ನೀಡಿದ್ದ ಆಹ್ವಾನವನ್ನು ಉಲ್ಲೇಖಿಸಿ ಕಿರಣ್ ಮಜುಂದಾರ್ ಶಾ ಈ ರೀತಿ ಟ್ವೀಟ್ ಮಾಡಿದ್ದರು.
ಪ್ರಧಾನಮಂತ್ರಿ ಸೇರಿದಂತೆ ಹಲವರನ್ನು ಟ್ಯಾಗ್ ಮಾಡಿ ಮೋಹನದಾಸ್ ಪೈ ಟ್ವೀಟ್
"69 ಲಕ್ಷ ಕೋಟಿ ತೆರಿಗೆ ಕಟ್ಟುತ್ತಿರುವ Bengaluru ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದೆ, ಮಾನ್ಯ ಪ್ರಧಾನಿಗಳೇ ನೀವು ಮಧ್ಯ ಪ್ರವೇಶಿಸಬೇಕು" ಎಂದು ಪ್ರಧಾನಮಂತ್ರಿ, ಪ್ರಧಾನಿ ಕಾರ್ಯಾಲಯ, ನಿರ್ಮಲಾ ಸೀತಾರಾಮನ್, ಸಿಎಂ ಬೊಮ್ಮಾಯಿ ಸೇರಿದಂತೆ ಹಲವರನ್ನು ಟ್ಯಾಗ್ ಮಾಡಿ ಉದ್ಯಮಿ ಟಿ.ವಿ. ಮೋಹನದಾಸ್ ಪೈ ಟ್ವೀಟ್ ಮಾಡಿದ್ದರು. "ವರ್ಷಕ್ಕೆ ಆರು ನೂರು ಕೋಟಿ ರೂಪಾಯಿ ಬಿಬಿಎಂಪಿ ಸ್ವಚ್ಚತೆಗಾಗಿ ಖರ್ಚು ಮಾಡುತ್ತಿದೆ. ಕರ್ನಾಟಕ ಎರಡೂವರೆ ಲಕ್ಷ ಕೋಟಿ ಬಜೆಟ್ ಅನ್ನು ಮಂಡಿಸುತ್ತದೆ. ನಾವು ಭಾರತ ಸರಕಾರಕ್ಕೆ ತೆರಿಗೆ ಕಟ್ಟುತ್ತಿದ್ದೇವೆ, ಜಿಎಸ್ಟಿ ಕಟ್ಟುವಲ್ಲಿ ನಮ್ಮ ರಾಜ್ಯ ಮೂರನೇ ಸ್ಥಾನದಲ್ಲಿದೆ. ಮನೆದೀಪವಿಲ್ಲ, ರಸ್ತೆಗಳು ಸರಿಯಿಲ್ಲ. ಈ ಸರಕಾರ ಏನು ಮಾಡುತ್ತಿದೆ"ಎಂದು ಆಕ್ರೋಶ ಹೊರಹಾಕಿದ್ದರು.
ಪ್ರಧಾನಿಗೆ ದೂರು ಹೋಗಿರುವ ಗಂಭೀರತೆಯನ್ನು ಅರಿತ ಸಿಎಂ ಬಸವರಾಜ ಬೊಮ್ಮಾಯಿ
ಉದ್ಯಮಿಗಳಿಬ್ಬರ ಆಕ್ರೋಶ ಮತ್ತು ಪ್ರಧಾನಿಗೆ ದೂರು ಹೋಗಿರುವ ಗಂಭೀರತೆಯನ್ನು ಅರಿತ ಸಿಎಂ ಬಸವರಾಜ ಬೊಮ್ಮಾಯಿಯವರು ತುರ್ತಾಗಿ ಇದಕ್ಕೆ ಸ್ಪಂದಿಸಿದ್ದಾರೆ. "ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ಸುಧಾರಣೆಗೊಳ್ಳುತ್ತಿದೆ. ಕಳೆದ ಬಾರಿ ಅಕಾಲಿಕ ಮಳೆ ಸುರಿಯುತ್ತಿದ್ದರಿಂದ ಮೂಲಭೂತ ಸೌಕರ್ಯಗಳ ಕಡೆ ಗಮನ ಕೊಡುವುದು ವಿಳಂಬವಾಯಿತು. ಮುಂದಿನ ದಿನಗಳಲ್ಲಿ ಹೆಚ್ಚಿನ ಗಮನ ಕೊಡಲಾಗುವುದು. ವೈಯಕ್ತಿಕವಾಗಿ ನಾನು ಮೋಹನದಾಸ್ ಪೈ ಅವರ ಬಳಿ ಮಾತನಾಡುವೆ"ಎಂದು ಬಸವರಾಜ ಬೊಮ್ಮಾಯಿ ಆಶ್ವಾಸನೆಯನ್ನು ನೀಡಿದ್ದಾರೆ.
ಮೂಲಭೂತ ಸೌಕರ್ಯದ ಕೆಲಸಗಳು ವೇಗವನ್ನು ಪಡೆದುಕೊಳ್ಳಲಿದೆ
"ನಾವು ಎಷ್ಟು ಕಿಲೋಮೀಟರ್ ಅಭಿವೃದ್ಧಿ ಮಾಡಿದ್ದೇವೆ ಮತ್ತು ಸರಕಾರದ ಅಭಿವೃದ್ದಿ ಸೇರಿದಂತೆ ಎಲ್ಲಾ ವಿವರಗಳು ಸಾರ್ವಜನಿಕ ಡೊಮೇನ್ನಲ್ಲಿವೆ. ನಗರೋತ್ಥಾನ ಕಾರ್ಯಕ್ರಮಗಳ ಅಡಿಯಲ್ಲಿ ಹಣವನ್ನು ಬಿಡುಗಡೆ ಮಾಡಿದ್ದೇನೆ ಮತ್ತು ಬಿಬಿಎಂಪಿ ಬಜೆಟ್ನಲ್ಲೂ ಹಣವನ್ನು ಮೀಸಲಿಡಲಾಗಿದೆ, ಇದರಿಂದಾಗಿ ಮೂಲಭೂತ ಸೌಕರ್ಯದ ಕೆಲಸಗಳು ವೇಗವನ್ನು ಪಡೆದುಕೊಳ್ಳಲಿದೆ"ಎಂದು ಬೊಮ್ಮಾಯಿ ಭರವಸೆಯನ್ನು ನೀಡಿದ್ದಾರೆ.
Recommended Video