ಕಾಂಗ್ರೆಸ್ ಸೇರುವ ಬದಲು ಬಿಜೆಪಿ ಸೇರಲು ಬಯಸಿದ್ದರೇ ಸಿಎಂ ಸಿದ್ದರಾಮಯ್ಯ?
Recommended Video
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸೇರಲು ಬಯಸಿದ್ದರು ಎನ್ನುವ ಮಾಹಿತಿಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅಂದಿನ ಪರಿಸ್ಥಿತಿಯನ್ನು ವಿವರಿಸುತ್ತಾ, ಅಧಿಕಾರ ಬೇಕಾದಾಗ ಸಿದ್ದರಾಮಯ್ಯನವರಿಗೆ ಯಾವ ಜಾತಿ, ಕೋಮು ಲೆಕ್ಕಕ್ಕೆ ಬರುವುದಿಲ್ಲ. ಬಿಜೆಪಿಯನ್ನು ಕೋಮುವಾದಿ ಎಂದು ಈಗ ಟೀಕಿಸುತ್ತಿರುವ ಸಿದ್ದರಾಮಯ್ಯ ಅಂದು ಬಿಜೆಪಿಯನ್ನು ಸೇರಲು ತುದಿಗಾಲಿನಲ್ಲಿ ನಿಂತಿದ್ದರು ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಸಿದ್ದರಾಮಯ್ಯ, ಬಿಬಿಎಂಪಿ, ಉತ್ತರಪ್ರದೇಶ ಚುನಾವಣೆ ಮುಂತಾದ ವಿಚಾರಗಳನ್ನು ಒಂದೊಂದಾಗಿ ವಿವರಿಸುತ್ತಾ ಹೋದ ಕುಮಾರಸ್ವಾಮಿ, ಎಚ್ ವಿಶ್ವನಾಥ್ ಅವರನ್ನು ಮೂಲೆಗುಂಪು ಮಾಡಿದ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ವಿಶ್ವನಾಥ್ ಕಾಂಗ್ರೆಸ್ ಬಿಡುವಂತೆ ಮಾಡಿದರು.
ಇದೇ ವಿಶ್ವನಾಥ್ ಸಹಾಯದಿಂದ ಅಂದು ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದು ಎನ್ನುವುದನ್ನು ಮುಖ್ಯಮಂತ್ರಿಗಳು ಮರೆತಿದಿದ್ದಾರೆ. ಜೆಡಿಎಸ್ ತೊರೆಯುವ ವೇಳೆ ದ್ವಂದ್ವ ಮನಸ್ಥಿತಿಯಲ್ಲಿದ್ದ ಸಿದ್ದರಾಮಯ್ಯ ಬಗ್ಗೆ, ನನಗಿಂತ ಹೆಚ್ಚು ಮುಕುಡಪ್ಪ ಮತ್ತು ಕೋದಂಡರಾಮಯ್ಯ ಅವರಿಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಅಧಿಕಾರ ಸಿಗುವುದು ಗ್ಯಾರಂಟಿ ಎಂದಾದ ಮೇಲೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಸೇರಿದ್ದು, ಬಿಜೆಪಿಯಲ್ಲಿ ಸಿಗುತ್ತಿದ್ದರೆ ಅಲ್ಲಿಗೇ ಹೋಗುತ್ತಿದ್ದರು. ಸೋನಿಯಾ, ರಾಹುಲ್ ಗಾಂಧಿ ಅಂದು ಅಧಿಕಾರ ಕರೆದು ಕೊಟ್ಟಿದ್ದಕ್ಕೆ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರಿಗೆ 'ಜಾತ್ಯಾತೀತ ಪಕ್ಷ'ವಾಯಿತು ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಮುಂದೆ ಓದಿ..
ದುಡ್ಡು ಸರಬರಾಜು ಮಾಡುವ ಜವಾಬ್ದಾರಿ ಸಿದ್ದರಾಮಯ್ಯಗೆ
ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ದುಡ್ಡು ಸರಬರಾಜು ಮಾಡುವ ಜವಾಬ್ದಾರಿಯನ್ನು ಸಿದ್ದರಾಮಯ್ಯ ವಹಿಸಿಕೊಂಡಿದ್ದರು. ಒಂಬತ್ತು ಕಂತುಗಳಲ್ಲಿ ಕಾಂಗ್ರೆಸ್ ಹೈಕಮಾಂಡಿಗೆ ದುಡ್ಡು ಇಲ್ಲಿಂದ ಹೋಗಿದೆ. ದುಡ್ಡು ಇಲ್ಲಿಂದ ಹೋಗಲು ಹೇಗೆ ಸಾಧ್ಯ? ಭ್ರಷ್ಟಾಚಾರದ ಹಣವಿಲ್ಲದೇ ಇನ್ನೆಲ್ಲಿಂದ ದುಡ್ಡು ಕಳುಹಿಸಲು ಸಾಧ್ಯ ಎಂದು ಸಿದ್ದರಾಮಯ್ಯನವರನ್ನು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬಿಬಿಎಂಪಿ ಎನ್ನುವುದು ಭ್ರಷ್ಟಾಚಾರದ ಕೂಪ
ಬಿಬಿಎಂಪಿ ಎನ್ನುವುದು ಭ್ರಷ್ಟಾಚಾರದ ಕೂಪವಾಗಿದೆ, ನಾವು ಕಾಂಗ್ರೆಸ್ಸಿಗೆ ಬೆಂಬಲ ನೀಡಿದ್ದರೂ ಏನೂ ಹೇಳಲಾಗದ ಪರಿಸ್ಥಿತಿಯಲ್ಲಿದ್ದೇವೆ. ಗೊತ್ತುಗುರಿಯಿಲ್ಲದೇ ಟೆಂಡರುಗಳು ಅನುಮೋದನೆಗೊಳ್ಳುತ್ತಿವೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಸಾಲ ಮಾಡಬೇಕು ಎನ್ನುವ ಮಾತನ್ನು ಮುಖ್ಯಮಂತ್ರಿಗಳು ಹೇಳುತ್ತಾರೆ.
ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ
ಬಿಬಿಎಂಪಿ ಸುಮಾರು 800 ಕೋಟಿ ರೂಪಾಯಿ ಗುತ್ತಿಗೆದಾರರಿಗೆ ಪಾವತಿಸಬೇಕಿದೆ, ಇದಕ್ಕೆ ಸಾಲ ಮಾಡಬೇಕು ಎನ್ನುವ ಸಿದ್ದರಾಮಯ್ಯನವರ ಉದ್ದೇಶವೇನು? ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗೆ ಹಣ ಹೊಂದಿಸಲು ಈ ನಾಟಕವಾಡುತ್ತಿದ್ದಾರಾ ಎಂದು ಎಚ್ಡಿಕೆ, ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.
ನಾನು, ರೇವಣ್ಣನಾಗಲಿ ಯಾವ ಪಕ್ಷದ ಬಾಗಿಲಿಗೂ ಹೋಗಿಲ್ಲ
ನಾವು ರಾಷ್ಟ್ರೀಯ ಪಕ್ಷಗಳ ಕದತಟ್ಟಿದ್ದೆವು ಎನ್ನುವ ಮಾತನ್ನು ಜಮೀರ್ ಹೇಳುತ್ತಾರೆ. ನಾನಾಗಲಿ ನನ್ನ ಸಹೋದರ ರೇವಣ್ಣನಾಗಲಿ ಯಾವ ಪಕ್ಷದ ಬಾಗಿಲಿಗೂ ಹೋಗಿಲ್ಲ. ಜಮೀರ್ ತಮ್ಮ ಹೇಳಿಕೆಯನ್ನು ರುಜುವಾತು ಪಡಿಸಿದರೆ, ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆಂದು ಕುಮಾರಸ್ವಾಮಿ, ಜಮೀರ್ ಅಹಮದಿಗೆ ಚಾಲೆಂಜ್ ಮಾಡಿದ್ದಾರೆ.
ತಾನೇ ಸತ್ಯ ಹರಿಶ್ಚಂದ್ರರಂತೆ ಮಾತನಾಡುವ ಸಿದ್ದರಾಮಯ್ಯ
ಹೂಳೆತ್ತುವ, ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಅದೆಷ್ಟು ದುಡ್ಡು ಸಿದ್ದರಾಮಯ್ಯ ಸರಕಾರ ನುಂಗಿದೆಯೋ ಶಿವನೇ ಬಲ್ಲ. ಟೆಂಡರ್ ಮೊತ್ತಕ್ಕಿಂತ ಶೇ.20 ಹೆಚ್ಚು ಬಿಲ್ ಮಾಡಲಾಗಿದೆ ಎನ್ನುವ ಮಾಹಿತಿಯಿದೆ. ತಾನೇ ಸತ್ಯ ಹರಿಶ್ಚಂದ್ರರಂತೆ ಮಾತನಾಡುವ ಸಿದ್ದರಾಮಯ್ಯ, ಅದಕ್ಕೆ ಸಾಥ್ ನೀಡುತ್ತಿರುವ ಸಚಿವ ಜಾರ್ಜ್ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.