ಬೊಮ್ಮಾಯಿ ನೂತನ ಸಿಎಂ: ಕೊನೆಗೆ, ಇಲ್ಲೂ ಗೆದ್ದದ್ದು ಯಡಿಯೂರಪ್ಪನವರ ಹಠ
"ನಾನು ಮುಖ್ಯಮಂತ್ರಿ ಹುದ್ದೆಗೆ ಲಾಬಿ ನಡೆಸಿದವನಲ್ಲ, ಅಪೇಕ್ಷ ಪಟ್ಟವನೂ ಅಲ್ಲ"ಎಂದು ಬಸವರಾಜ ಬೊಮ್ಮಾಯಿ ತಮ್ಮನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡುವ ಮುನ್ನ ಹೇಳಿದ್ದರು. ಶಿಗ್ಗಾಂವ್ ಕ್ಷೇತ್ರವನ್ನು ಪ್ರತಿನಿಧಿಸುವ ಬಸವರಾಜ ಬೊಮ್ಮಾಯಿ ರಾಜ್ಯದ ಸಿಎಂ ಆಗಿ ಆಯ್ಕೆಯಾಗಿದ್ದಾರೆ.
ಈ ಆಯ್ಕೆಯ ಮೂಲಕ ಬಿಜೆಪಿ ಹೈಕಮಾಂಡ್ ದೆಹಲಿಗೆ ಬಂದು ನನ್ನನ್ನು ಸಿಎಂ ಮಾಡಿ.. ಸಿಎಂ ಮಾಡಿ ಎಂದು ಲಾಬಿ ನಡೆಸಿದವರಿಗೆ ಸರಿಯಾದ ಪಾಠವನ್ನು ಕಲಿಸಿದೆ ಎನ್ನುವುದು ಒಂದು ಕಡೆ. ಇದರ ಜೊತೆಗೆ, ಗಮನಿಸಬೇಕಾದ ಅಂಶವೇನಂದರೆ ಗೆದ್ದದ್ದು ಇಲ್ಲಿ ಯಡಿಯೂರಪ್ಪನವರ ಮಾತೇ.
ಮುಖ್ಯಮಂತ್ರಿ ಹುದ್ದೆಗೆ ಅನಧಿಕೃತವಾಗಿ ಬೆಳೆಯುತ್ತಿದ್ದ ಪಟ್ಟಿಗೆ ಲೆಕ್ಕವೇ ಇರಲಿಲ್ಲ, ದಿನಕ್ಕೊಂದು ಹೆಸರು ಈ ಪಟ್ಟಿಗೆ ಸೇರುತ್ತಿತ್ತು. ಒಂದು ಹಂತದಲ್ಲಿ ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದ ಶ್ರೀಗಳ ಹೆಸರೂ ಕೇಳಿ ಬರುತ್ತಿತ್ತು.
ಆದರೆ, ಹೈಕಮಾಂಡ್ ತಲೆಯಲ್ಲಿ ಇದ್ದದ್ದು ಒಂದು ಹೆಸರಾದರೆ, ಹಂಗಾಮಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಯ್ಕೆ ಇನ್ನೊಂದಾಗಿತ್ತು. ಹೈಕಮಾಂಡ್ ದೆಹಲಿಯಿಂದ ಕಳುಹಿಸಿದ ಚೀಟಿಗೆ ಬಿಎಸ್ವೈ ಸಮ್ಮಿತಿಸಲಿಲ್ಲ ಎನ್ನುವುದು ಇಂದಿನ ವಿದ್ಯಮಾನದಿಂದ ಅತ್ಯಂತ ಸ್ಪಷ್ಟವಾಗಿತ್ತು.

ಸದಾ ಯಡಿಯೂರಪ್ಪನವರ ಜೊತೆಜೊತೆಗಿದ್ದ ಬಸವರಾಜ ಬೊಮ್ಮಾಯಿ
ಯಡಿಯೂರಪ್ಪ ಎರಡು ವರ್ಷದ ಹಿಂದೆ ಸಿಎಂ ಆದಾಗಿನಿಂದ ಅವರ ಜೊತೆಜೊತೆಗಿದ್ದ ಬಸವರಾಜ ಬೊಮ್ಮಾಯಿಗೆ ಬಿಎಸ್ವೈ ಭರ್ಜರಿ ಗಿಫ್ಟ್ ಅನ್ನೇ ನೀಡಿದ್ದಾರೆ. ಎಂಟಿಆರ್ ಹೊಟೇಲಿಗೇ ಹೋಗಲಿ, ಜನಾರ್ಧನ ಕೆಫೆಯಲ್ಲಿ ಮಸಾಲದೋಸೆ ಸವಿಯಲೂ ಹೋದರೂ, ಬಿಎಸ್ವೈ ಜೊತೆಗಿದ್ದದ್ದು ಬೊಮ್ಮಾಯಿ. ರಾಜೀನಾಮೆ ಸಲ್ಲಿಸಲು ರಾಜಭವನಕ್ಕೆ ಬಿಎಸ್ವೈ ತೆರಳಿದಾಗಲೂ, ಬೊಮ್ಮಾಯಿ ಅವರ ಜೊತೆಗಿದ್ದರು.

ಹೈಕಮಾಂಡ್ ಕಳುಹಿಸಿದ್ದ ಹೆಸರು ಅರವಿಂದ ಬೆಲ್ಲದ್
ಹೈಕಮಾಂಡ್ ಕಳುಹಿಸಿದ್ದ ಹೆಸರು ಅರವಿಂದ ಬೆಲ್ಲದ್, ಆದರೆ ಯಡಿಯೂರಪ್ಪ ಹೇಳಿದ ಹೆಸರು ಬಸವರಾಜ ಬೊಮ್ಮಾಯಿ. ಕೋರ್ ಕಮಿಟಿ ಸಭೆಗೂ ಮುನ್ನ ಉಸ್ತುವಾರಿ ಅರುಣ್ ಸಿಂಗ್, ವೀಕ್ಷಕರಾಗಿ ಬಂದಿದ್ದ ಧರ್ಮೇದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿಯವರಿಗೆ ಅತ್ಯಂತ ಸ್ಪಷ್ಟವಾಗಿ ಬಿಎಸ್ವೈ ಅವರು ಬೊಮ್ಮಾಯಿ ಹೆಸರನ್ನು ಸೂಚಿಸಿದ್ದರು.

ಬಿಎಸ್ವೈ ರಾಜೀನಾಮೆ ನೀಡಿದ್ದು, ಇವರನ್ನು ಕೇಂದ್ರದ ನಾಯಕರು ನಡೆಸಿಕೊಂಡ ರೀತಿ
ಈಗ ತಾನೇ, ಬಿಎಸ್ವೈ ಅವರು ರಾಜೀನಾಮೆ ನೀಡಿದ್ದು, ಇವರನ್ನು ಕೇಂದ್ರದ ನಾಯಕರು ನಡೆಸಿಕೊಂಡ ರೀತಿಗೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಒಳಗಾಗಿರುವುದು, ಲಿಂಗಾಯತ ಸಮುದಾಯದ ಕೋಪ, ಇದೆಲ್ಲವನ್ನೂ ಹೈಕಮಾಂಡ್ ತುರ್ತಾಗಿ ಶಮನಗೊಳಿಸಬೇಕಿತ್ತು. ಹಾಗಾಗಿ, ಬಿಎಸ್ವೈ ಮಾತಿಗೆ ದೂಸ್ರಾ ಮಾತನಾಡದ ಬಿಜೆಪಿ ವರಿಷ್ಠರು ಬೊಮ್ಮಾಯಿಯನ್ನು ಸಿಎಂ ಸ್ಥಾನಕ್ಕೆ ಸೂಚಿಸಿದರು.
Recommended Video

ಬೊಮ್ಮಾಯಿ ನೂತನ ಸಿಎಂ: ಕೊನೆಗೆ, ಇಲ್ಲೂ ಗೆದ್ದದ್ದು ಯಡಿಯೂರಪ್ಪನವರ ಹಠ
ಬೊಮ್ಮಾಯಿಯವರನ್ನು ನನ್ನ ನಂತರ ಸಿಎಂ ಮಾಡಬೇಕು ಎನ್ನುವ ಷರತ್ತನ್ನೂ ಯಡಿಯೂರಪ್ಪ ಹಾಕಿರಬಹುದು. ಒಟ್ಟಿನಲ್ಲಿ, ಇಲ್ಲಿ ಗೆದ್ದದ್ದು ಯಡಿಯೂರಪ್ಪನವರ ಹಠವೇ ಹೊರತು, ದೆಹಲಿಯಲ್ಲಿ ಕೂತು ಸಿಎಂ ಸ್ಥಾನಕ್ಕಾಗಿ ಲಾಬಿ ನಡೆಸಿದವರಿಗಲ್ಲ. ಎರಡು ವರ್ಷದಿಂದ ತನ್ನ ಜೊತೆಗಿದ್ದ ಬಸವರಾಜ ಬೊಮ್ಮಾಯಿಗೆ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಕೂರಿಸಿ, ಜೊತೆಗಿದ್ದವರನ್ನು ಕೈಬಿಡುವುದಿಲ್ಲ ಎಂದು ಸಾರಿದ್ದಾರೆ.












Click it and Unblock the Notifications