ಶಾಸಕ ಜಮೀರ್ ಅಹ್ಮದ್ ವಿಚಾರಕ್ಕೆ ಬೊಮ್ಮಾಯಿ ಪ್ರತಿಕ್ರಿಯೆ!
ಬೆಂಗಳೂರು, ಸೆ. 11: ಡ್ರಗ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಅವರ ಕುರಿತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಇಡೀ ರಾಜ್ಯದ್ಯಾಂತ ಡ್ರಗ್ ಮಾಫಿಯಾ ಮಟ್ಟ ಹಾಕುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಡ್ರಗ್ ಮಾಫಿಯಾದೊಂದಿಗೆ ಹವಾಲಾ ದಂಧೆಗೂ ನಂಟಿರುವುದರಿಂದ ಜಾರಿ ನಿರ್ದೇಶನಾಲಯ ಇಡಿ ಕೂಡ ತನಿಖೆ ಆರಂಭಿಸಿದೆ ಎಂದು ಬೆಂಗಳೂರಿನ ಆರ್ಟಿ ನಗರದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ.
ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಕಾರ್ಯಾಚರಣೆ ಇಡೀ ರಾಜ್ಯಾದ್ಯಂತ ಮುಂದುವರೆದಿದೆ. ನಿನ್ನೆ ಒಂದೇ ದಿನ ಭಾರೀ ಪ್ರಮಾಣದ ಮಾದಕವಸ್ತು ಗಾಂಜಾವನ್ನು ನಮ್ಮ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಲಬುರ್ಗಿಲ್ಲಿ 1350 ಕೆಜಿ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ಸಿಸಿಬಿ ಕಾರ್ಯಾಚರಣೆ ಮುಂದುವರೆಯುತ್ತದೆ. ಮಾಧ್ಯಮವೂ ಸೇರಿದಂತೆ ಎಲ್ಲಾ ಕಡೆಗಳಿಂದ ಸಿಗುವ ಮಾಹಿತಿ ಆಧರಿಸಿ ಕ್ರಮಕೈಗೊಳ್ಳುತ್ತಿದ್ದೇವೆ ಎಂದಿದ್ದಾರೆ.
ಡ್ರಗ್ ಮಾಫಿಯಾ ಮಟ್ಟ ಹಾಕಲು ಬಿಗಿ ಕಾನೂನು: ಬಸವರಾಜ್ ಬೊಮ್ಮಾಯಿ
ಇದೇ ಸಂದರ್ಭದಲ್ಲಿ ವೀರೇನ್ ಖನ್ನಾ ಆಸ್ತಿ ವಿಚಾರವಾಗಿ ಇಡಿ ತನಿಖೆ ಆರಂಭಿಸಿರುವ ಕುರಿತು ಬೊಮ್ಮಾಯಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಹಣಕಾಸು ಆಯಾಮವೂ ಇದೆ. ದೇಶದ ಹೊರಗೆ ಇರುವವರೊಂದಿಗೂ ಸಂಬಂಧ ಹೊಂದಿರುವ ಶಂಕೆ ಇದೆ. ಡ್ರಗ್ಸ್ ಹೊರತು ಪಡಿಸಿ ಇತರೆ ಹಣಕಾಸು ವ್ಯವಹಾರಗಳನ್ನು ನಡೆಸುವವರ ಜತೆಗೂ ಡ್ರಗ್ಸ್ ಮಾಫಿಯಾ ಸಂಬಂಧವಿದೆ. ಡ್ರಗ್ ಮಾಫಿಯಾ ಜೊತೆಗೆ ಹವಾಲಾ ಸಂಬಂಧವೂ ಇದೆ. ಈ ಎಲ್ಲ ಆಯಾಮಗಳನ್ನು ಪೂರ್ಣವಾಗಿ ತನಿಖೆ ನಡೆಸಲು ಇಡಿ ತನಿಖೆ ಆರಂಭಿಸಿದೆ. ಇಡಿ ಇಲಾಖೆ ಅವರ ವ್ಯಾಪ್ತಿಯ ವಿಷಯಗಳ ತನಿಖೆ ನಡೆಸುತ್ತಾರೆ.
Recommended Video
ಶಾಸಕ ಜಮೀರ್ ಅಹ್ಮದ್ ಅವರನ್ನು ಯಾಕೆ ಬಂಧಿಸಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟಿರಯುವ ಬೊಮ್ಮಾಯಿ ಅವರು, ಯಾವುದೇ ಮೂಲಗಳಿಂದಲು, ಯಾರ ಹೆಸರು ಬಂದರೂ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅದಕ್ಕೆ ಯಾರೂ ಹೊರತಲ್ಲ ಎಂದು ಜಮೀರ್ ವಿಚಾರ ಕುರಿತು ಸಂಸದ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜಡ್ಡು ಗಟ್ಟಿದ ಡ್ರಗ್ ದಂಧೆ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.