Yatnal: ಮಹಾಭಾರತದಲ್ಲಿ ಜಯಿಸಿದ್ದು ಶಕುನಿ, ಧೃತರಾಷ್ಟ್ರರಲ್ಲ: ಯತ್ನಾಳ್ ಹೊಸ ಸಂಕಲ್ಪ
ಬಿಜೆಪಿಯಿಂದ ಉಚ್ಛಾಟನೆ ಬೆನ್ನಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿ, ಬಿಜೆಪಿ ಹೈಕಮಾಂಡ್ ಮುಂದೆ ತೊಡೆ ತಟ್ಟಿದ್ದಾರೆ. ಇಂದು ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಲ್ಲಿ ಯುಗಾದಿ ಪಾಡ್ಯ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಿರುವ ಅವರು ವಿಜಯದಶಮಿ ವೇಳೆಗೆ ಹೊಸ ಪಕ್ಷ ಕಟ್ಟುವ ಸೂಚನೆ ನೀಡಿದ್ದಾರೆ. ತನ್ನ ಬೆಂಬಲಿಗರಿಗಾಗಿ ಸಂಕಲ್ಪ ಪತ್ರ ಬರೆದಿರುವ ಅವರು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪತ್ರದಲ್ಲಿ ಬಂಧುಗಳೇ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಶ್ರೀವಿಶ್ವಾವಸು ಸಂವತ್ಸರವು ನಿಮಗೆಲ್ಲರಿಗೂ ಸುಖ, ಶಾಂತಿ, ನೆಮ್ಮದಿ ನೀಡಲಿ. ರೈತರಿಗೆ, ಶ್ರಮಿಕರಿಗೆ ಈ ಸಂವತ್ಸರವು ಫಲಪ್ರದಾಯಕವಾಗಲಿ ಎಂದು ಆಶಿಸುತ್ತೇನೆ. ಜನ ಸೇವೆ ಮಾಡದೆ, ಪ್ರಜೆಗಳ ಕಷ್ಟ ಕಾರ್ಪಣ್ಯಕ್ಕೆ ಧ್ವನಿಯಾಗದೆ, ತಮ್ಮ ರಾಜಕೀಯ ಅಭ್ಯುದಯಕ್ಕೆ ಹೊಂದಾಣಿಕೆ ರಾಜಕಾರಣ ಮಾಡುವವರ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಸವಾಲ್ ಹಾಕಿದ್ದಾರೆ.

ಇನ್ನು ಮಹಾಭಾರತದಲ್ಲಿ ಜಯಗಳಿಸಿದ್ದು ಕೃಷ್ಣಾರ್ಜುನರೇ ಹೊರತು, ಶಕುನಿ ಹಾಗೂ ಧೃತರಾಷ್ಟ್ರರಲ್ಲ ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ಅವರ ಕುಟುಂಬವನ್ನು ಕುಟುಕಿದ್ದಾರೆ. ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣದ ವಿರುದ್ಧ ನಮ್ಮೆಲ್ಲರ ಹೋರಾಟ ಆರಂಭವಾಗಲಿದೆ ಎಂದೂ ಯತ್ನಾಳ್ ಹೇಳಿದ್ದಾರೆ.
ರಾಮ ರಾಜ್ಯ ಸ್ಥಾಪನೆ, ಉತ್ತರ ಕರ್ನಾಟಕದ ಅಭಿವೃದ್ಧಿ, ನೀರಾವರಿ, ಗೋವುಗಳ ರಕ್ಷಣೆ, ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ, ಬಾಣಂತಿಯರ ಸಾವು, ಲವ್ ಜಿಹಾದ್, ವಕ್ಫ್ ವಿರುದ್ಧ ನನ್ನ ಹೋರಾಟವನ್ನು ಮತ್ತಷ್ಟು ತೀಕ್ಷ್ಣಗೊಳಿಸಿ ಇದಕ್ಕೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಶುಭ ಹಾರೈಕೆಗಳನ್ನು, ಬೆಂಬಲ, ಪ್ರೋತ್ಸಾಹವನ್ನು ತೋರಿಸುತ್ತಿರುವ ಎಲ್ಲ ಸಹೃದಯೀ ಸ್ನೇಹಿತರಿಗೂ, ಅಭಿಮಾನಿಗಳಿಗೂ, ಹಿತೈಷಿಗಳಿಗೂ ಹಾಗೂ ಕರೆ ಮಾಡಿ ಬೆಂಬಲ, ಮನೋಸ್ಥೈರ್ಯ ನೀಡಿರುವ ಎಲ್ಲರಿಗೂ ಧನ್ಯವಾದಗಳು. ಭಾರತ ಮಾತೆಗೆ ಜಯವಾಗಲಿ ಎಂದು ಯತ್ನಾಳ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಉಚ್ಛಾಟನೆ ಬಳಿಕ ಮೊದಲಿಗೆ ಮುಂದಿನ ನಡೆ ಬಗ್ಗೆ ಏನೂ ತಿಳಿಸದ ಯತ್ನಾಳ್ ಅವರು ಯಡಿಯೂರಪ್ಪ ಹಾಗು ವಿಜಯೇಂದ್ರ ವಿರುದ್ಧ ತೊಡೆ ತಟ್ಟಿದ್ದರು. ಅಲ್ಲದೆ ಬೇರೆ ಪಕ್ಷಕ್ಕೂ ನಾನು ಹೋಗಲ್ಲ, ಇಲ್ಲೇ ಇರುತ್ತೇನೆ. ಬಿಜೆಪಿ ಮತ್ತೆ ಗೌರವದಿಂದ ಕರೆದರೆ ಅಲ್ಲಿಯೇ ಇರುತ್ತೇನೆ ಎಂದು ನಿನ್ನೆಯಷ್ಟೇ ಅವರು ಸ್ಪಷ್ಟನೆ ನೀಡಿದ್ದರು. ಆದರೆ ಒಂದೇ ದಿನದಲ್ಲಿ ಅವರು ನಿರ್ಧಾರ ಬದಲಿಸಿ, ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ.
ಮೊದಲಿಗೆ ಬಿಜೆಪಿಯವರು ಮತ್ತೆ ಕರೆಯದಿದ್ದರೆ ವಿಜಯದಶಮಿಯಂದು ತಮ್ಮ ನಿರ್ಧಾರ ತಿಳಿಸುವುದಾಗಿ ಯತ್ನಾಳ್ ಹೇಳಿದ್ದರು. ಆದರೆ, ಇಂದು ಏಕಾಏಕಿ ಪಕ್ಷ ಕಟ್ಟುವ ಬಗ್ಗೆ ಸುಳಿವು ನೀಡಿದ್ದಾರೆ. ಹಿಂದೂಗಳ ರಕ್ಷಣೆ ಹಾಗೂ ದೇಶಕ್ಕಾಗಿ ಹಿಂದೂ ಪಕ್ಷ ಅಸ್ತಿತ್ವಕ್ಕೆ ಬರಬೇಕಾಗಿದೆ. ತರಬೇಕಾಗಿದೆ. ಜನರ ಅಭಿಪ್ರಾಯ ಸಂಗ್ರಹಿಸಿ ಒಂದು ಪಕ್ಷವನ್ನು ಹುಟ್ಟುಹಾಕಬೇಕು. ಹಲವರು ಹೊಸ ಪಕ್ಷ ಕಟ್ಟುವಂತೆ ನನಗೆ ಹೇಳುತ್ತಿದ್ದಾರೆ. ಹಿಂದೂ ಪಕ್ಷ ಕಟ್ಟುವ ಬಗ್ಗೆ ಬೀದರ್ನಿಂದ ಚಾಮರಾಜನಗರವರೆಗೂ ಜನ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಹೊಸ ಪಕ್ಷದ ಕಟ್ಟುವ ಬಗ್ಗೆ ನಾವು ಜನಾಭಿಪ್ರಾಯ ಸಂಗ್ರಹಿಸುತ್ತೇವೆ ಎಂದು ಯತ್ನಾಳ್ ಹೇಳಿದ್ದಾರೆ.
ಬಹಳಷ್ಟು ಮಂದಿ ಬಿಜೆಪಿ ಹಿಂದೂಗಳ ರಕ್ಷಣೆ ಮಾಡ್ತಿಲ್ಲ ಎಂದು ದೂರಿದ್ದಾರೆ. ಯಡಿಯೂರಪ್ಪ ಅವರು ಕುಟುಂಬ ರಾಜಕಾರಣ ಮಾಡಿಕೊಂಡು ಬಿಜೆಪಿಯನ್ನ ದುರ್ಬಲ ಮಾಡಿದ್ದಾರೆ. ನಾವು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರೋಧಿಯಲ್ಲ, ಆದರೆ ಯಡಿಯೂರಪ್ಪ ಅವರೇ ನಮಗೆ ಬೇಕು ಎನ್ನುವುದಾದರೆ ನಮ್ಮ ದಾರಿಯನ್ನ ನಾವು ಕಂಡುಕೊಳ್ಳಲೇಬೇಕು ಎಂದು ಯತ್ನಾಳ್ ಎಚ್ಚರಿಕೆ ಕೊಟ್ಟಿದ್ದಾರೆ.












Click it and Unblock the Notifications