Yatnal vs Vijayendra: 'ರಾಜವಂಶ' ರಾಜಕಾರಣದ ವಿರುದ್ಧ 'ಯತ್ನಾಳ್' ಸಮರ, ಸಭೆ ಬಗ್ಗೆ ಹೇಳಿದ್ದೇನು?
ಬೆಳಗಾವಿ, ಡಿಸೆಂಬರ್ 04: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಪಕ್ಷದ ಶಾಸಕಾಂಗ ಸಭೆಗಳನ್ನು ಬಹಿಷ್ಕರಿಸುತ್ತೇನೆ ಎಂದು ಸೋಮವಾರ ಘೋಷಿಸಿದ್ದಾರೆ. ರಾಜ್ಯದಲ್ಲಿ ವಂಶ ರಾಜಕಾರಣ ಕುರಿತು ಅವರು ತೀಕ್ಷ್ಣವಾಗಿ ಮಾತನಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ನಂತರ ರಾಜವಂಶ ರಾಜಕಾರಣದ ವಿರುದ್ಧ ತಮ್ಮ ಹೋರಾಟ ಆರಂಭವಾಗಲಿದೆ ಎಂದು ಯತ್ನಾಳ್ ತಿಳಿಸಿದ್ದಾರೆ ಎಂದು ಡಿಎಚ್ ವರದಿ ಮಾಡಿದೆ.

ಉತ್ತರ ಕರ್ನಾಟಕಕ್ಕೆ 'ನ್ಯಾಯ'ಕ್ಕಾಗಿ, ನಮ್ಮ ಬೇಡಿಕೆಯನ್ನು ಪರಿಹರಿಸುವವರೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗಳಿಂದ ದೂರ ಉಳಿಯುವುದಾಗಿ ನಿರ್ಧರಿಸಿದ್ದರ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ದೇಶದಲ್ಲಿ ವಂಶ ರಾಜಕಾರಣವನ್ನು ಕೊನೆಗಾಣಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಮರ ಸಾರಿದ್ದಾರೆ. ಇದಕ್ಕೆ ನಾನು ನನ್ನ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದರು.
ಚುನಾವಣೆ ಬಳಿಕ ರಾಜವಂಶದ ವಿರುದ್ಧ ಯತ್ನಾಳ್ ಸಮರ
ಕರ್ನಾಟಕದಲ್ಲಿ, ರಾಜವಂಶದ ರಾಜಕೀಯವನ್ನು ಕೊನೆಗೊಳಿಸುವ ನನ್ನ ಹೋರಾಟವು ಲೋಕಸಭಾ ಚುನಾವಣೆಯ ನಂತರವೇ ಪ್ರಾರಂಭವಾಗುತ್ತದೆ. ಲೋಕಸಭಾ ಚುನಾವಣೆಗಳು ಮುಗಿದ ನಂತರ ವಿಜಯೇಂದ್ರ ಅವರ ವಿರುದ್ಧ ಸಮರ ಸಾರುವ ಕುರಿತು ಅವರು ಸೂಚನೆ ನೀಡಿದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂದಿನಿಂದೂ ಸ್ವಪಕ್ಷದ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ಹಾಗೂ ಅನುದಾನಕ್ಕಾಗಿ ತಮ್ಮ ಹೋರಾಟ ವಿಧಾನಸೌಧದ ಹೊರಗೆ ಮತ್ತು ಒಳಗೆ ಮುಂದುವರಿಯುತ್ತದೆ ಎಂದು ತಿಳಿಸಿದರು.

ಉ.ಕ ಭಾಗವರಿಗೆ ರಾಜಕೀಯ ಸ್ಥಾನ ನೀಡಿ
ಉತ್ತರ ಕರ್ನಾಟಕದ ಯಾರನ್ನಾದರೂ ಪಕ್ಷದ ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಬೇಕೆಂಬ ನನ್ನ ಬೇಡಿಕೆ ಈಡೇರಬೇಕು. ಅಲ್ಲಿಯವರೆಗೆ ನಾನು ಬಿಜೆಪಿ ಶಾಸಕಾಂಗ ಸಭೆಗೆ ಹಾಜರಾಗುವುದಿಲ್ಲ. ಉತ್ತರ ಕರ್ನಾಟಕದ ಜನರು ದಕ್ಷಿಣ ಕರ್ನಾಟಕದ 'ಗುಲಾಮರು ಅಲ್ಲ ಎಂದು ಅವರು ಕಿಡಿ ಕಾರಿದರು.
ಉತ್ತರ ಕರ್ನಾಟಕದವರು ಮತಕ್ಕಾಗಿ ಬೇಕು. ನೇಮಕಾತಿ ವಿಚಾರಕ್ಕೆ ಬಂದರೆ ದಕ್ಷಿಣ ಕರ್ನಾಟಕಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತದೆ. ನಾನು ಎಲ್ಲಿದ್ದರೂ ಈ ಪ್ರಶ್ನೆಗೆ ಧ್ವನಿ ಎತ್ತುತ್ತೇನೆ. ನಾನು ಯಾವುದಕ್ಕೂ ಹೆದರುವುದಿಲ್ಲ.
ಚರ್ಚೆಗೆ ಅವಕಾಶ ಸಿಗದಿದ್ದರೆ ಧರಣಿ
ಬೆಳಗಾವಿ ಸದನದಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕಕ್ಕೆ ರಾಜಕೀಯ ಅನ್ಯಾಯದ ಕುರಿತು ಚರ್ಚೆಗೆ ಅವಕಾಶ ನೀಡದಿದ್ದರೆ ನೆಲದ ಮೇಲೆ ಕೂತು ಧರಣಿ ನಡೆಸುವುದಾಗಿ ತಿಳಿಸಿದರು. ಕೇವಲ ಕೊನೆಯ ಎರಡು ದಿನ ಮಾತ್ರ ಚರ್ಚೆಗೆ ಇಟ್ಟುಕೊಳ್ಳುವುದು ಸರಿಯಲ್ಲ. ಉತ್ತರ ಕರ್ನಾಟಕಕ್ಕೆ ಆಗಿರುವ ರಾಜಕೀಯ ಅನ್ಯಾಯದ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.
ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈಗಾಗಲೇ ಪ್ರತಿಕ್ರಿಯೆ ನೀಡಿದ್ದರೆ. ಯತ್ನಾಳ್ ಇಚ್ಛೆಯಂತೆ ಬದಲಾವಣೆಗಳು ನಡೆದರೆ ನಾನು ಹೆಚ್ಚು ಸಂತೋಷ ಪಡುತ್ತೇನೆ ಎಂದು ಟಾಂಗ್ ನೀಡಿದರು.












Click it and Unblock the Notifications