ಕನ್ನಡಿಗರಿಗೆ ಉದ್ಯೋಗ : ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ ಹನುಮಂತಯ್ಯ
ಬೆಂಗಳೂರು, ಆಗಸ್ಟ್ 06 : ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕರ್ನಾಟಕದ ಬ್ಯಾಂಕ್ಗಳಲ್ಲಿನ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು ಎಂಬ ಕೂಗು ಕೇಳಿಬಂದಿದೆ.
ರಾಜ್ಯಸಭೆ ಕಲಾಪದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಅವರು ಈ ಕುರಿತು ಮಾತನಾಡಿದ್ದಾರೆ, 'ಬ್ಯಾಂಕಿಂಗ್ ಉದ್ಯೋಗಕ್ಕೆ ಕೇಂದ್ರ ಸರ್ಕಾರವೇ ಪರೀಕ್ಷೆ ನಡೆಸುತ್ತಿರುವುದರಿಂದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ' ಎಂದು ಅವರು ವಿಷಯ ಪ್ರಸ್ತಾಪಿಸಿದ್ದಾರೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕಲಾಪ ನಡೆಸಿಕೊಡುವಾಗ ಎಲ್.ಹನುಮಂತಯ್ಯ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. 'ಹೊರ ರಾಜ್ಯಗಳ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿರುವುದರಿಂದ, ಸ್ಥಳೀಯ ನೇಮಕಾತಿಗಳನ್ನು ಕಡೆಗಣಿಸಿದಂತಾಗುತ್ತದೆ' ಎಂದು ಹೇಳಿದ್ದಾರೆ.

'ಕರ್ನಾಟಕದಲ್ಲಿ 80,000 ಬ್ಯಾಂಕ್ ಹುದ್ದೆಗಳಿಗೆ ನೇಮಕಾತಿ ನಡೆದರೆ, 1060 ಹುದ್ದೆಗಳು ಮಾತ್ರ ಕನ್ನಡಿಗರಿಗೆ ಸಿಗುತ್ತಿವೆ. ಇದರಿಂದ ಗ್ರಾಮೀಣ ಮತ್ತು ತಾಲೂಕು ಕೇಂದ್ರಗಳ ಬ್ಯಾಂಕ್ಗಳಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ' ಎಂದು ಹನುಮಂತಯ್ಯ ಗಮನಸೆಳೆದಿದ್ದಾರೆ.
'ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್ ಸಿಬ್ಬಂದಿ ಮತ್ತು ಜನರ ನಡುವಿನ ಸಂವಹನಕ್ಕೆ ತೊಂದರೆ ಉಂಟಾಗುತ್ತಿದೆ. ಇದು ಕರ್ನಾಟಕ ಮಾತ್ರವಲ್ಲ ಎಲ್ಲಾ ರಾಜ್ಯಗಳಲ್ಲಿನ ಸಮಸ್ಯೆ ಆಗಿದೆ' ಎಂದು ಹನುಮಂತಯ್ಯ ಹೇಳಿದರು.
'ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಇದನ್ನು ಬದಲಾವಣೆ ಮಾಡುವಂತೆ ಕೋರಿ ಪತ್ರ ಬರೆದಿದ್ದರು. ಪ್ರಾದೇಶಿಕ ನೇಮಕಾತಿ ಸಂಸ್ಥೆಯನ್ನು ಪುನಃ ಕಾರ್ಯರೂಪಕ್ಕೆ ತರಲು ಒಪ್ಪಿಗೆ ನೀಡಬೇಕು ಎಂದು ಕೋರಿದ್ದರು' ಎಂದರು.
ಹನುಮಂತಯ್ಯ ಭಾಷಣದ ವಿಡಿಯೋ ಇಲ್ಲಿದೆ..












Click it and Unblock the Notifications