ಒಂದೇ ಕುಟುಂಬದಲ್ಲಿ ಮೂವರ ಸಾವು: ಅಸಲಿ ಕಥೆ ಇದು
ಬೆಂಗಳೂರು, ಸೆಪ್ಟೆಂಬರ್ 26: ಅಫಘಾತದಲ್ಲಿ ಗಾಯಗೊಂಡಿದ್ದ ಗಂಡ ಮೃತಪಟ್ಟ ವಿಷಯ ತಿಳಿದು ಮಹಿಳೆಯೊಬ್ಬರು ತಮ್ಮ 11 ವರ್ಷದ ಮಗನೊಂದಿಗೆ ವಿಷ ಸೇವಿಸಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಸುದ್ದಿ ಓದಿದ್ದೀರಿ. ಆದರೆ ಈ ಸರಣಿ ಸಾವಿನ ವೃತ್ತಾಂತದ ಅಸಲಿಯತ್ತು ಬೇರೆಯೇ ಇದೆ.
ಬೆಂಗಳೂರಿನ ಕಲ್ಯಾಣ ನಗರದ ಶಕ್ತಿ ಗಾರ್ಡನ್ ನಲ್ಲಿ ವಾಸವಾಗಿದ್ದ ಜ್ಞಾನಶೇಖರ್ (45), ಅವರ ಪತ್ನಿ ಚಿತ್ರಾ (33) ಮತ್ತು ಜೀವನ್ (11) ಸಾವನ್ನಪ್ಪಿದ್ದರೆ, ಅವರ ಇನ್ನಿಬ್ಬರು ಮಕ್ಕಳಾದ ಪ್ರಭಾಕರ್ (23), ಪ್ರವೀಣ್ (21) ಸಾವಿನಿಂದ ಬಚಾವಾಗಿದ್ದಾರೆ.

ಜ್ಞಾನಶೇಖರ್ ಮೂಲತಃ ತಮಿಳುನಾಡಿನವರು. 25 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ಸುಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಮಾಲ್ ಟೂಲ್ಸ್ ಫ್ಯಾಕ್ಟರಿ ನಡೆಸುತ್ತಿದ್ದರು. ಅವರಿಗೆ ಇಬ್ಬರು ಪತ್ನಿಯರು. ಇಬ್ಬರೂ ತಮಿಳುನಾಡಿನವರೇ.
ಮೊದಲನೇ ಪತ್ನಿಯ ಮಕ್ಕಳು ಪ್ರಭಾಕರ್ ಮತ್ತು ಪ್ರವೀಣ್. ಮೊದಲನೇ ಪತ್ನಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜ್ಞಾನಶೇಖರ್ ಚೈತ್ರ ಅವರನ್ನು ವಿವಾಹವಾಗಿದ್ದರು. ಚೈತ್ರ ಅವರ ಮಗ ಜೀವನ್.
ಚೈತ್ರ ಬುಧವಾರ ಬೆಳಗ್ಗೆ ತಮ್ಮ ಮನೆಯಲ್ಲಿ ತಂಪು ಪಾನೀಯ ಕೋಕಾ ಕೋಲಾದಲ್ಲಿ ಇಲಿ ಪಾಷಾಣ ಬೆರಿಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಪತಿ ಸೆ. 7 ರಂದು ಕಾಮಾಕ್ಷಿಪಾಳ್ಯ ಬಳಿ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಿಗ್ಗೆ 4.30ರ ಸುಮಾರಿಗೆ ಮೃತಪಟ್ಟಿದ್ದರು.
ಈ ವಿಷಯವನ್ನು ಆಸ್ಪತ್ರೆಯಲ್ಲಿದ್ದ ಇನ್ನಿಬ್ಬರು ಮಕ್ಕಳಾದ ಪ್ರವೀಣ್ ಹಾಗೂ ಪ್ರಭಾಕರ್ ಮೊಬೈಲ್ ಮೂಲಕ ಮನೆಗೆ ತಿಳಿಸಿದ್ದರು. ಪತಿ ಮೃತಪಟ್ಟಿರುವ ವಿಷಯ ತಿಳಿದ ಚೈತ್ರ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಮನೆಯಲ್ಲಿದ್ದ ಇಲಿ ಪಾಷಾಣವನ್ನು ತೆಗೆದುಕೊಂಡು ಕೊಠಡಿಗೆ ತೆರಳಿದ್ದಾರೆ. ನಂತರ ತಂಪು ಪಾನಿಯಕ್ಕೆ ಬೆರೆಸಿಕೊಂಡು ಸೇವಿಸಿದ್ದಾರೆ. ಮಗ ಜೀವನ್ ಗೂ ಕುಡಿಸಿದ್ದಾರೆ. ಮಗ ತಂಪು ಪಾನೀಯ ಕುಡಿಯಲು ನಿರಾಕರಿಸಿದರೂ ಒತ್ತಾಯದಿಂದ ಕುಡಿಸಿದ್ದಾರೆ. ಆದರೆ ಜೀವನ್ ಸ್ವಲ್ಪ ಮಾತ್ರ ಸೇವಿಸಿದ್ದ ಎನ್ನಲಾಗಿದೆ.
ಈ ವೇಳೆ ಮನೆಯಲ್ಲೇ ಇದ್ದ ಚೈತ್ರ ಅವರ ಸೋದರ ಶ್ರೀನಿವಾಸ್ ಮತ್ತು ನಾದಿನಿ ತಮಿಳ್ ಸೆಲ್ವಿ ಅವರನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆದರೆ ಚೈತ್ರ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಬಲವಂತದಿಂದ ಬಾಗಿಲು ತೆಗೆದಾಗ ಚೈತ್ರ ಆಸ್ವಸ್ಥರಾಗಿ ಬಿದ್ದಿದ್ದರು. ತಕ್ಷಣ ಆಟೋ ಮೂಲಕ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜೀವನ್ ನನ್ನು ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ.
ಪತಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಲಮಗ ಪ್ರವೀಣನಿಗೆ ಕರೆ ಮಾಡಿದ್ದ ಚೈತ್ರ, 'ನನಗೆ ಜೀವನ ಸಾಕಾಗಿದೆ. ನಮಗೆ ಬರಬೇಕಾದ ಹಣಕಾಸಿನ ಬಗ್ಗೆ ಬರೆದಿರುವ ಪತ್ರ ಹಾಗೂ ಫ್ಯಾಕ್ಟರಿ ದಾಖಲೆಗಳನ್ನು ಬೀರುವಿನಲ್ಲಿಟ್ಟಿದ್ದೇನೆ. ಎಲ್ಲಾ ತೆಗೆದುಕೊಳ್ಳಿ' ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ.
'ಏನೋ ಅನಾಹುತವಾಗುತ್ತಿದೆ' ಎಂದು ತಕ್ಷಣ ಅರಿತ ಪ್ರವೀಣ, ಮನೆಯಲ್ಲಿದ್ದ ಶ್ರೀನಿವಾಸ್ ಗೆ ಫೋನ್ ಮಾಡಿ 'ಅಮ್ಮ ಏನೇನೋ ಮಾತನಾಡುತ್ತಿದ್ದಾರೆ. ಭಯವಾಗುತ್ತಿದೆ ಹೋಗಿ ನೋಡಿ' ಎಂದು ಹೇಳಿದ್ದಾನೆ. ಆದರೆ ಅಷ್ಟರಲ್ಲೇ ಚಿತ್ರ ತಮ್ಮ ಮಗನೊಂದಿಗೆ ಪತಿಯ ಹಾದಿ ಹಿಡಿದಿದ್ದರು.
ಅಪಘಾತ: ಮೃತ ಜ್ಞಾನಶೇಖರ್ ಸುಮನಹಳ್ಳಿಯಲ್ಲಿ ಖಾಸಗಿ ಕಾರ್ಖಾನೆ ನಡೆಸುತ್ತಿದ್ದರು. ಸೆ.7 ರಂದು ಸಂಜೆ 5 ಗಂಟೆ ಸುಮಾರಿಗೆ ನಾಗರಬಾವಿ 9 ನೇ ಕ್ರಾಸ್ನಲ್ಲಿ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ದ್ವಿಚಕ್ರ ವಾಹನ ಜ್ಞಾನಶೇಖರ್ ಅವರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಜ್ಞಾನಶೇಖರ್ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಸವಾರ ರಾಕೇಶನನ್ನು ಬಂಧಿಸಿದ್ದರು.
ಪತಿಯೊಂದಿಗೆ ಹೆಚ್ಚು ಭಾವನಾತ್ಮಕವಾಗಿದ್ದ ಚೈತ್ರ ಅಪಘಾತವಾದಾಗಿನಿಂದ ತೀವ್ರ ಘಾಸಿಗೊಂಡಿದ್ದರು. ಹೀಗಾಗಿ ನಿತ್ಯ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ರಾತ್ರಿ ವೇಳೆ ಮಕ್ಕಳಾದ ಪ್ರವೀಣ್ ಹಾಗೂ ಪ್ರಭಾಕರ್ ಆಸ್ಪತ್ರೆಯಲ್ಲಿ ಜ್ಞಾನಶೇಖರ್ ಅವರನ್ನು ನೋಡಿಕೊಳ್ಳುತ್ತಿದ್ದರು. ಪತಿಯನ್ನು ತುಂಬಾ ಹಚ್ಚಿಕೊಂಡಿದ್ದು, ಆತ ಮೃತಪಟ್ಟ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೋದರ ಶ್ರೀನಿವಾಸ್ ತಿಳಿಸಿದ್ದಾರೆ.












Click it and Unblock the Notifications