ಪ್ರವಾಸಿಗರೇ ಗಮನಿಸಿ: ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿಗೆ ಬಂತು ಹೊಸ ರೂಲ್ಸ್
ಪ್ರವಾಸಿಗರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜಂಗಲ್ ಸಫಾರಿಯನ್ನು ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಪರಿಸರ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ, ಅತ್ಯಂತ ನಿಯಂತ್ರಿತ ಹಾಗೂ ವೈಜ್ಞಾನಿಕ ಚೌಕಟ್ಟಿನಡಿಯಲ್ಲಿ ಈ ಪ್ರವಾಸೋದ್ಯಮ ಚಟುವಟಿಕೆಗಳು ಪುನರಾರಂಭಗೊಳ್ಳಲಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಅರಣ್ಯ ಮತ್ತು ವನ್ಯಜೀವಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ರಚಿಸಿದ್ದ ತಜ್ಞರ ತಾಂತ್ರಿಕ ಸಮಿತಿಯು ಸುದೀರ್ಘ ಅಧ್ಯಯನ ನಡೆಸಿ ವರದಿಯನ್ನು ನೀಡಿತ್ತು. ಕಾಡಿನ ಪರಿಸರ ವ್ಯವಸ್ಥೆಯು ಎಷ್ಟು ಪ್ರವಾಸಿಗರು ಮತ್ತು ವಾಹನಗಳ ಒತ್ತಡವನ್ನು ತಡೆದುಕೊಳ್ಳಬಲ್ಲದು ಎಂಬುದನ್ನು ವೈಜ್ಞಾನಿಕವಾಗಿ ಲೆಕ್ಕಹಾಕಲಾಗಿದೆ. ಈ ಮಿತಿಯನ್ನು ಮೀರದಂತೆ ಸಫಾರಿಗಳನ್ನು ಆಯೋಜಿಸಲಾಗುತ್ತದೆ. ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಕ್ಕೆ ತೊಂದರೆಯಾಗದಂತೆ ಸಫಾರಿ ವಾಹನಗಳ ಸಂಖ್ಯೆ, ಸಮಯ ಮತ್ತು ಸಂಚಾರ ಮಾರ್ಗಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಸಮಿತಿ ಶಿಫಾರಸು ಮಾಡಿದ್ದು, ಸರ್ಕಾರ ಅದನ್ನು ಸಂಪೂರ್ಣವಾಗಿ ಅಂಗೀಕರಿಸಿದೆ ಎಂದು ತಿಳಿಸಿದ್ದಾರೆ.

"ಕಾಡುಗಳು ಕೇವಲ ಮರಗಳಲ್ಲ, ಅವು ನಮ್ಮ ಭವ್ಯ ಚೇತನ"
ಈ ನಿರ್ಧಾರದ ಕುರಿತು ಮಾಹಿತಿ ಹಂಚಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರು, "ಕರುನಾಡಿನ ಈ ಗಿರಿ-ಕಾನನಗಳು ಕೇವಲ ವೃಕ್ಷ ಸಂಕುಲವಲ್ಲ. ಇವು ಪ್ರಕೃತಿ ಮಾತೆ ನಮ್ಮ ತಾಯ್ನಾಡಿಗೆ ಧಾರೆ ಎರೆದಿರುವ ಭವ್ಯ ಚೇತನ ಮತ್ತು ಸೌಂದರ್ಯದ ಮಹಾ ನಿಧಿ. ಅವುಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರಕೃತಿಯನ್ನು ರಕ್ಷಿಸುವ ಜೊತೆಜೊತೆಗೇ ಜನರಿಗೆ ಅದರ ಸೌಂದರ್ಯವನ್ನು ಸವಿಯಲು ಜವಾಬ್ದಾರಿಯುತ ಅವಕಾಶಗಳನ್ನು ನೀಡುವುದು ನಮ್ಮ ಸರ್ಕಾರದ ದೃಷ್ಟಿಕೋನ" ಎಂದು ಹೇಳಿದ್ದಾರೆ. ನಮ್ಮ ಕಾಡುಗಳು, ಅಪರೂಪದ ವನ್ಯಜೀವಿಗಳು ಮತ್ತು ಕಾಡನ್ನು ಕಾಯುವ ಸಮುದಾಯಗಳು ಮುಂಬರುವ ಪೀಳಿಗೆಗೂ ಸುರಕ್ಷಿತವಾಗಿ ಮತ್ತು ಸಮೃದ್ಧವಾಗಿ ಉಳಿಯುವಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಸದಾ ಶ್ರಮಿಸುತ್ತದೆ ಎಂದಿದ್ದಾರೆ.
ಸುಸ್ಥಿರ ಪರಿಸರ ಪ್ರವಾಸೋದ್ಯಮಕ್ಕೆ ಒತ್ತು
ಕರ್ನಾಟಕವು ದೇಶದಲ್ಲೇ ಪರಿಸರ ಪ್ರವಾಸೋದ್ಯಮದಲ್ಲಿ (Eco-Tourism) ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಸರ್ಕಾರದ ಈ ಹೊಸ ನಿರ್ಧಾರದಿಂದ ಕೇವಲ ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೆ ಸ್ಥಳೀಯ ಪರಿಸರ ವ್ಯವಸ್ಥೆಗೂ ಪ್ರಯೋಜನಗಳಾಗಲಿವೆ. ಸಫಾರಿ ಪುನರಾರಂಭದಿಂದಾಗಿ ಅರಣ್ಯದ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ, ಚಾಲಕರಿಗೆ, ಮತ್ತು ಗೈಡ್ಗಳಿಗೆ ಉದ್ಯೋಗಾವಕಾಶ ಮರುಸೃಷ್ಟಿಯಾಗಲಿವೆ. ಕಾಡನ್ನೇ ನಂಬಿ ಬದುಕುವ ಬುಡಕಟ್ಟು ಮತ್ತು ಸ್ಥಳೀಯ ಸಮುದಾಯಗಳ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಆರ್ಥಿಕ ಪ್ರಗತಿಯನ್ನು ಸಾಧಿಸುವುದು ಸರ್ಕಾರದ ಗುರಿಯಾಗಿದೆ. ಅರಣ್ಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನೂ ಕೇವಲ ವಿನೋದಕ್ಕಾಗಿ ಬಾರದೆ, ಪ್ರಕೃತಿಯ ಬಗ್ಗೆ ಅಪಾರ ಗೌರವ ಮತ್ತು ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂಬುದು ಸರ್ಕಾರದ ಆಶಯ.
ಬಂಡೀಪುರ ಮತ್ತು ನಾಗರಹೊಳೆಯ ಈ ಜಂಗಲ್ ಸಫಾರಿಯು ಪ್ರಕೃತಿ ಸಂರಕ್ಷಣೆ, ಸಮುದಾಯದ ಕಲ್ಯಾಣ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮ ಮೂರೂ ಒಟ್ಟಿಗೆ ಸಾಗುವಂತಹ ಒಂದು ಮಾದರಿ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.













Click it and Unblock the Notifications