ನೋಟು ಬ್ಯಾನ್: ಜೇಟ್ಲಿಗೆ 5 ಸಲಹೆ ನೀಡಿದ ಸಿದ್ದರಾಮಯ್ಯ
500, 1000ರೂ. ಮುಖಬೆಲೆಯ ನೋಟು ನಿಷೇಧ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ ಕೇಂದ್ರ ಸರ್ಕಾರ ಪೂರ್ವಸಿದ್ಧತೆ ಮಾಡಿಕೊಳ್ಳದೆ ಏಕಾಏಕಿ ನಿಷೇಧ ಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ : ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 15: ದೊಡ್ಡ ಮೌಲ್ಯದ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದ್ದಾರೆ. ಆದರೆ, ಸರಿಯಾದ ಸಿದ್ಧತೆ ಇಲ್ಲದೆ ಈ ಕ್ರಮಕ್ಕೆ ಮುಂದಾಗಿರುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ ಎಂದಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಐದು ಸಲಹೆಗಳನ್ನು ನೀಡಿ ಪತ್ರ ಬರೆದಿದ್ದಾರೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. 500 ರೂ ಹಾಗೂ 1000 ರೂ ನೋಟು ರದ್ಧು ಮಾಡಿರುವ ಹಿನ್ನೆಲೆಯಲ್ಲಿ ಜನರ ಸಮಸ್ಯೆ ಕುರಿತು ವಿವರಿಸಿದ್ದಾರೆ. ಇದಕ್ಕೂ ಮೊದಲು ಸೋಮವಾರದಂದು ಹಣಕಾಸು ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ವಿವಿಧ ಬ್ಯಾಂಕ್ ಗಳ ಅಧಿಕಾರಿಗಳೊಡನೆ ಸಭೆ ನಡೆಸಿದ್ದರು.
500, 1000ರೂ. ಮುಖಬೆಲೆಯ ನೋಟು ನಿಷೇಧ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ ಕೇಂದ್ರ ಸರ್ಕಾರ ಪೂರ್ವಸಿದ್ಧತೆ ಮಾಡಿಕೊಳ್ಳದೆ ಏಕಾಏಕಿ ನಿಷೇಧ ಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನೋಟು ಬದಲಾವಣೆ ಹಾಗೂ ಬ್ಯಾಂಕುಗಳಿಗೆ ಹಣ ಕಟ್ಟುವ ಸಂಬಂಧ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಣೆಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಜನಸಾಮಾನ್ಯರಿಗೆ ಸರ್ಕಾರ ಮತ್ತು ಪಕ್ಷದ ವತಿಯಿಂದ ಯಾವ ರೀತಿ ಸಹಾಯ ಮಾಡಬಹುದು ಎಂಬ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಹೇಳಿದರು.

ನೋಟುಗಳ ಕೊರತೆ ಮೊದಲು ನೀಗಿಸಿ
500 ಹಾಗೂ 1000 ರುಪಾಯಿ ನೋಟು ಹಿಂಪಡೆಯುವುದು ಸರಿಯಾಗಿದೆ. ಆದರೆ, 100 ರುಪಾಯಿ ನೋಟು ಕೊರತೆ ಇದೆ. ಹೊಸ ನೋಟು 2000 ಎಲ್ಲೆಡೆ ಲಭ್ಯವಿಲ್ಲ. 500 ಹಾಗೂ 2000 ನೋಟು ಎಲ್ಲೆಡೆ ಸಿಗುವಂತೆ ಮಾಡಿ.

ವಾಣಿಜ್ಯ ಮಳಿಗೆ ಉಪಯುಕ್ತ ಬಿಲ್ ಕಟ್ಟುವುದು ಹೇಗೆ?
ವಿದ್ಯುತ್, ನೀರು ಇನ್ನಿತರ ಉಪಯುಕ್ತ ಸೌಲಭ್ಯಗಳ ಬಿಲ್ ಕಟ್ಟಲು ಹಳೆ ನೋಟು ಬಳಕೆಗೆ ಅವಕಾಶ ನೀಡಲಾಗಿದೆ. ಆದರೆ, ಇದು ವೈಯಕ್ತಿಕ ಹಾಗೂ ಗೃಹ ಬಳಕೆಗೆ ಸೀಮಿತವಾಗಿದೆ. ಇದನ್ನು ವಾಣಿಜ್ಯ ಮಳಿಗೆ ಹಾಗೂ ಉದ್ಯಮಗಳಿಗೂ ವಿಸ್ತರಿಸಿ. ಹಳೆ ನೋಟು ವಿನಿಯಮಕ್ಕೆ ಅವಕಾಶ ನೀಡಿ.

ರಕ್ತದ ಬ್ಯಾಂಕ್, ಲ್ಯಾಬ್ ಗಳಿಗೂ ವಿನಾಯಿತಿ ನೀಡಿ
ಸರ್ಕಾರಿ ಆಸ್ಪತ್ರೆ, ಔಷಧ ಮಳಿಗೆಗಳಲ್ಲಿ ಹಳೆ ನೋಟು ಬಳಕೆಗೆ ಅವಕಾಶ ನೀಡಲಾಗಿದೆ. ಇದನ್ನು ಖಾಸಗಿ ಆಸ್ಪತ್ರೆ, ಲ್ಯಾಬ್, ಬ್ಲಡ್ ಬ್ಯಾಂಕ್ ಗಳಿಗೂ ವಿಸ್ತರಿಸಿ. ಖಾಸಗಿ ಆಸ್ಪತ್ರೆಗಳಲ್ಲಿ ದೃಢೀಕರಣ ಪತ್ರ ನೀಡಿ ದೊಡ್ಡ ಮೌಲ್ಯದ ನೋಟು ಬಳಕೆಗೆ ಅವಕಾಶ ಬೇಕಿದೆ. ಬ್ಯಾಂಕ್ ಕೌಂಟರ್ ಗಳನ್ನು ಆರಂಭಿಸಿ.

ಸಹಕಾರ ಬ್ಯಾಂಕುಗಳ ಸಾಲ ವಿತರಣೆ ಮಿತಿ ಹೆಚ್ಚಳ
ಸಹಕಾರ ಬ್ಯಾಂಕುಗಳ ವ್ಯವಹಾರಕ್ಕೆ 500 ಕೋಟಿರು ಹಾಗೂ ಸಾಲ ವಿತರಣೆಗೆ 600 ಕೋಟಿ ರು ಅಗತ್ಯವಿದೆ. ಆದರೆ, ಈ ಪ್ರಮಾಣ ಕಳೆದ ಐದು ದಿನಗಳಲ್ಲಿ 25 ಕೋಟಿ ರುಗೆ ಇಳಿದಿದೆ. ಇದರಿಂದ ರೈತರು ಸೇರಿದಂತೆ 7 ಲಕ್ಷ ಗ್ರಾಹಕರಿಗೆ ತೊಂದರೆಯಾಗಿದೆ. ನಗದು ಪೂರೈಕೆ ವ್ಯತ್ಯಯ ಹಾಗೂ ಮಿತಿ ಬಗ್ಗೆ ಗಮನಹರಿಸಿ.

ಎಪಿಎಂಸಿ ಮಾರುಕಟ್ಟೆಯಲ್ಲಿನ ಗೊಂದಲ
ದಿನಕ್ಕೆ ಸುಮಾರು 200 ಕೋಟಿ ರು ವ್ಯವಹಾರ ನಡೆಸುವ ಎಪಿಎಂಸಿ ಯಾರ್ಡ್ ಗಳಲ್ಲಿ ದೊಡ್ಡ ರೈತರಿಗೆ ಆರ್ ಟಿಜಿಎಸ್ ಮೂಲಕ ಹಣ ವರ್ಗಾವಣೆಯಾಗುತ್ತಿದೆ. ಆದರೆ, ಸಣ್ಣ ರೈತರು ಕಮಿಷನ್ ಏಜೆಂಟರ್ ಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ಟ್ರೇಡರ್ ಗಳ ಮೇಲೆ ಬ್ಯಾಂಕುಗಳಿಂದ ನಗದು ಪಡೆಯುವ ಮಿತಿ ಮೇಲೆ ವಿನಾಯಿತಿ ನೀಡಬೇಕಿದೆ.












Click it and Unblock the Notifications