'ಕಾರ್ಮಿಕ ಕಾಯಿದೆ ತಿದ್ದುಪಡಿ: ಬಿಜೆಪಿಗರಿಂದಲೇ ಶುರುವಾಯ್ತು ವಿರೋಧ'
ಬೆಂಗಳೂರು, ಮೇ 17: ಏಕಾಏಕಿ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಅತಂತ್ರರಾಗಿ ಬೀದಿಗೆ ಬಿದ್ದಿದ್ದು ನಮ್ಮ ಕಾರ್ಮಿಕರು. ವಲಸೆ ಕಾರ್ಮಿಕರ ಸ್ಥಿತಿಯಂತೂ ನರಕಕ್ಕಿಂತ ಕಡೆಯಾಗಿದೆ. ಇದೇ ಸಂದರ್ಭದಲ್ಲಿ ಕಾರ್ಮಿಕ ಕಾಯಿದೆ ಅಮಾನ್ಯ ಮಾಡಲು ಕೇಂದ್ರದ ಸೂಚನೆಯಂತೆ ಕೆಲವು ರಾಜ್ಯ ಸರ್ಕಾರಗಳು ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದಲ್ಲಿಯೂ ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ಕಳೆದ ಎರಡ್ಮೂರು ವರ್ಷಗಳಿಂದ ರಾಜ್ಯದಲ್ಲಿ ಪ್ರಯತ್ನಗಳು ನಡೆಯುತ್ತಲೇ ಇವೆ. ಲಾಕ್ಡೌನ್ ಸಂದರ್ಭದಲ್ಲಿ ಕಾರ್ಮಿಕರ ಕಾನೂನು ಎತ್ತಿಹಿಡಿದಿದ್ದಕ್ಕೆ, ಅವರಿಗೆ ಆಹಾರ ಸರಬರಾಜು ಮಾಡಿದ್ದಕ್ಕೆ ಹಿರಿಯ ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸರ್ಕಾರ ಎತ್ತಂಗಡಿ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.
ವಲಸೆ ಕಾರ್ಮಿಕರ ಸಂಚಾರದ ಸಮಸ್ಯೆಗೆ ಬಗೆಹರಿಸಲು ಬಂತು ಪೋರ್ಟಲ್
ಇದೀಗ ಕಾರ್ಮಿಕ ಕಾಯಿದೆಯನ್ನು ತಿದ್ದುಪಡಿ ಅಥವಾ ಅಮಾನ್ಯ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕೆ ಸ್ವಪಕ್ಷೀಯ ಆಪ್ತರಿಂದಲೇ ಸಿಎಂ ಯಡಿಯೂರಪ್ಪ ಅವರಿಗೆ ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಕಾರ್ಮಿಕ ಕಾನೂನು ತಿದ್ದುಪಡಿಗೆ ಮುಂದಾಗಬಾರದು ಎಂದು ಸ್ವಪಕ್ಷದವರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಬದುಕು ಮೂರಾಬಟ್ಟೆ ಮಾಡಿದ ಲಾಕ್ಡೌನ್
ಲಾಕ್ಡೌನ್ ಘೊಷಣೆಯಾದ ಬಳಿಕವಂತೂ ಇಡೀ ದೇಶಾದ್ಯಂತ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ವಲಸೆ ಕಾರ್ಮಿಕರ ಸ್ಥಿತಿ ನರಕ ಸದೃಶವಾಗಿದೆ. ಅತ್ತ ಕೆಲಸವೂ ಇಲ್ಲದೆ. ಇತ್ತ ಊರಿಗೂ ಹೋಗಲಾರದೆ ಕಾರ್ಮಿಕರ ಬದುಕು ಅತಂತ್ರವಾಗಿದೆ. ದೇಶಾದ್ಯಂತ ಕಾರ್ಮಿಕರ ಗೋಳು ಕೇಳುವವರೆ ಇಲ್ಲದಂತಾಗಿದೆ. ಬಹಳಷ್ಟು ಕಾರ್ಮಿಕರೇ ಹಂಚಿಕೊಂಡಿರುವ ಅನುಭವದಂತೆ ಕೊರೊನಾ ವೈರಸ್ಗಿಂತಲೂ ಭೀಕರವಾಗಿ ಇಡೀ ವ್ಯವಸ್ಥೆ ಅವರ ವಿರುದ್ಧ ನಿಂತಿದೆ.
ಇದೀಗ ಗಾಯದ ಮೇಲೆ ಉಪ್ಪುಹಾಕಿ ಬರೆ ಎಳೆದಂತೆ ಕಾರ್ಮಿಕರಿಗೆ ಬದುಕುವ ಹಕ್ಕು ಕೊಟ್ಟಿರುವ ಕಾರ್ಮಿಕ ಕಾಯಿದೆಯನ್ನೇ ಕೈಗಾರಿಕೋದ್ಯಮಿಗಳಿಗಾಗಿ ಅಮಾನ್ಯ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಸಹಜವಾಗಿಯೆ ಮಾನವೀಯತೆ ಇರುವ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಆಯನೂರು ಮಂಜುನಾಥ್ ಪತ್ರ
ಕಾರ್ಮಿಕ ಕಾಯಿದೆ ತಿದ್ದುಪಡಿ ಅಥವಾ ಕಾಯಿದೆ ಅಮಾನ್ಯ ಮಾಡದಿರುವಂತೆ ಮಾಜಿ ಸಂಸದ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ದೇಶದ ಕೆಲವು ರಾಜ್ಯಗಳು ಹೊರಗಿನ ಕೈಗಾರಿಕೆಗಳನ್ನು ಕೆಂಪು ಹಾಸು ಹಾಕಿ ಸ್ವಾಗತಿಸುವ ದೃಷ್ಟಿಯಿಂದ ಕಾರ್ಮಿಕ ಕಾಯಿದೆಗಳನ್ನು 3 ವರ್ಷಗಳ ಕಾಲ ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿವೆ.
ರೈತ - ಕೂಲಿಕಾರರ ಮೇಲೆ ಸರ್ಕಾರದ ದಾಳಿ: ಸಿಪಿಐಎಂ ಖಂಡನೆ
ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿಯೂ ಈ ಸಂಬಂಧ ಒತ್ತಡ ಬರುತ್ತಿರಬಹುದು. ಆದರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳಿಗೂ ತಮಗೂ ಬಹಳ ವ್ಯತ್ಯಾಸವಿದ್ದು, ಹೋರಾಟದ ಹಾದಿಯಲ್ಲಿ ತಾವು ಸಾಗಿ ಬಂದಿದ್ದೀರಿ. ಜನಸಾಮಾನ್ಯ, ಬಡವರ, ದೀನ-ದಲಿತರ ಬದುಕಿನ ಆಶಾಕಿರಣವಾಗಿದ್ದೀರಿ. ಅಲ್ಲದೇ ರಾಜಕಾರಣಕ್ಕಿಂತಲೂ ನಿಷ್ಠೂರ ಹೋರಾಟಗಾರ ನ್ಯಾಯಪರ ಎಂದು ಗುರುತಿಸಿಕೊಂಡಿದ್ದೀರಿ. ಇಂತಹ ನಡೆಯಿಂದಾಗಿ ಜನಸಾಮಾನ್ಯರು ಹಾಗೂ ಬಡವರ ಕಣ್ಣಲ್ಲಿ ಮೇರು ವ್ಯಕ್ತಿತ್ವವನ್ನು ಹೊಂದಿರುವ ತಮ್ಮನ್ನು ಇತರೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಹೋಲಿಸಲಾಗದು ಎಂದು ಆಯನೂರು ಮಂಜುನಾಥ್ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 1.20 ಕೋಟಿ ಕಾರ್ಮಿಕರು
ನಮ್ಮ ರಾಜ್ಯದಲ್ಲಿ ಸುಮಾರು 1.20 ಕೋಟಿ ಎಲ್ಲಾ ಸಮುದಾಯಕ್ಕೆ ಸೇರಿದ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿದ್ದಾರೆ. ಕಾಯಿದೆ ತಿದ್ದುಪಡಿ ಅಥವಾ ಅಮಾನ್ಯದಿಂದ ಇವರೆಲ್ಲರ ಮೇಲೆ ಏಕಕಾಲಕ್ಕೆ ಗದಾಪ್ರಹಾರ ಮಾಡಿದಂತಾಗುತ್ತದೆ. ಆದ್ದರಿಂದ ಕಾರ್ಮಿಕ ಕಾನೂನು ಅಮಾನತ್, ತಿದ್ದುಪಡಿ ಅಥವಾ ರದ್ದು ಕ್ರಮಗಳು ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯನ್ನು ಉಂಟು ಮಾಡಬಹುದು ಎಂಬ ಆತಂಕ ಹಾಗೂ ಭಯ ನಮ್ಮನ್ನು ಕಾಡುತ್ತಿದೆ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.
ಕಾರ್ಮಿಕರ ಅಶಾಂತಿ
ಕೇವಲ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಈಕಾಯಿದೆಗೆ ತಿದ್ದುಪಡಿ ತಂದರೆ ಕಾರ್ಮಿಕರ ಅಶಾಂತಿಗೆ ಕಾರಣವಾಗಬಹುದು. ಇದರಿಂದ ಕಾರ್ಮಿಕ ಸಂಘಟನೆಗಳು ಚಳುವಳಿಗಳಿ ಹೋರಾಟ ನಡೆಸುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು. ಇದು ರಾಜಕೀಯ ವಿರೋಧಿಗಳಿಗೆ ನಾವಾಗಿಯೇ ಅಸ್ತ್ರಕೊಟ್ಟಂತಾಗುತ್ತದೆ. ಹೀಗಾಗಿ ಕಾರ್ಮಿಕ ವಿರೋಧಿಯಾಗುವಂತಹ ಕಾಯಿದೆ ತಿದ್ದುಪಡಿಯಾಗಲೀ ಕಾಯಿದೆ ಅಮಾನ್ಯವಾಗಲೀ ಮಾಡಬಾರದು ಎಂದು ಪತ್ರದ ಮೂಲಕ ಯಡಿಯೂರಪ್ಪ ಅವರಿಗೆ ಆಯನೂರು ಮಂಜುನಾಥ್ ವಿನಂತಿಸಿಕೊಂಡಿದ್ದಾರೆ.