ಉಪ ಸಭಾಪತಿ ಆತ್ಮಹತ್ಯೆ ಪ್ರಕರಣ: ಆಯನೂರು ಮಂಜುನಾಥ್ ಪತ್ರ!
ಬೆಂಗಳೂರು, ಜ. 08: ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೇಳಗಿಳಿಸುವ ನಿಟ್ಟಿನಲ್ಲಿ ಬಿಜೆಪಿ ನಡೆಸಿರುವ ಪ್ರಯತ್ನಗಳು ಮುಂದುವರೆದಿವೆ. ಡಿಸೆಂಬರ್ 15 ರಂದು ಪರಿಷತ್ತಿನಲ್ಲಿ ನಡೆದ ಘಟನೆಯ ತನಿಖೆಗೆ ಸದನ ಸಮಿತಿ ರಚನೆ ಮಾಡಿರುವುದು ನಿಯಮ ಬಾಹಿರವಾಗಿದ್ದು, ಅದನ್ನು ರದ್ದು ಪಡಿಸುವಂತೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ ಅವರು ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಅವರಿಗೆ ಪತ್ರ ಬರೆದಿದ್ದಾರೆ.
ಸದನದ ಅಭಿಪ್ರಾಯ ಪಡೆಯದೆ ಸದನ ಸಮಿತಿಯನ್ನು ರಚನೆ ಮಾಡಲಾಗಿದೆ. ಅಲ್ಲದೆ ಜೆಡಿಎಸ್ ಸದಸ್ಯ ಮರಿತಿಬ್ಬೆಗೌಡ ಅವರು ತಾಂತ್ರಿಕವಾಗಿ ಜೆಡಿಎಸ್ ಸದಸ್ಯರಾಗಿದ್ದರೂ ಅವರು ಮಾನಸಿಕವಾಗಿ ಕಾಂಗ್ರೆಸ್ ಪರವಾಗಿದ್ದಾರೆ. ಹಾಗೂ ಅಂದಿನ ಘಟನೆಗೆ ಪ್ರಚೋದನೆ ನೀಡಿರುವ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ಸಮಿತಿ ಸದಸ್ಯರನ್ನಾಗಿ ಮಾಡಿರುವುದು, ನಿಮ್ಮ (ಸಭಾಪತಿ) ತಪ್ಪನ್ನು ಮುಚ್ಚಿ ಹಾಕಿಕೊಳ್ಳುವ ಪ್ರಯತ್ನವಾಗಿದೆ ಎಂದು ಆಯನೂರು ಮಂಜುನಾಥ ಆರೋಪಿಸಿದ್ದಾರೆ.
ಅಲ್ಲದೇ ಪರಿಷತ್ತಿನಲ್ಲಿ ನಡೆಯುವ ಘಟನೆಗಳನ್ನು ಪರಿಶೀಲಿಸಲು ನೀತಿ ನಿರೂಪಣಾ ಸಮಿತಿ ಇರುವುದರಿಂದ ಈ ಘಟನೆಯನ್ನು ಸದನ ಸಮಿತಿ ಬದಲು ನೀತಿ ನಿರೂಪಣಾ ಸಮಿತಿಗೆ ವಹಿಸುವಂತೆ ಅವರು ಆಗ್ರಹಿಸಿದ್ದಾರೆ.
ಡಿಸೆಂಬರ್ 15ರ ವಿಶೇಷ ಅಧಿವೇಶದನದಲ್ಲಿ ನಡೆದ ಘಟನೆ ಬಳಿಕ, ಡಿ. 29 ರಂದು ಉಪಸಭಾಪತಿಯಾಗಿದ್ದ ಎಸ್.ಎಲ್, ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಭಾಪತಿಗಳ ಸ್ಥಾನದಲ್ಲಿದ್ದ ಅವರನ್ನು ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದರು. ಜೊತೆಗೆ ಬಿಜೆಜಪಿ ಸದಸ್ಯರು ಸಭಾಪತಿ ಪೀಠದಿಂದ ಏಳದಂತೆ ತಡೆದಿದ್ದರು. ಈ ಎಲ್ಲ ಕಾರಣಗಳಿಂದ ತಮ್ಮ ತಪ್ಪಿರದಿದ್ದರೂ, ಮರ್ಯಾದೆಗೆ ಅಂಜಿಕೊಂಡು ಉಪ ಸಭಾಪತಿಯಾಗಿದ್ದ ಎಸ್.ಎಲ್. ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.