ಜನ ಸಾಮಾನ್ಯರಿಗೂ ಏರ್ ಆಂಬುಲೆನ್ಸ್ ಸೌಲಭ್ಯ ಇನ್ನೇನು ಲಭ್ಯ
ಬೆಂಗಳೂರು, ಮೇ 04: ಏರ್ ಆಂಬುಲೆನ್ಸ್ ಸೇವೆ ಕೇವಲ ಹಣ ಉಳ್ಳವರಿಗೆ ಮಾತ್ರವಲ್ಲದೇ ಇತರರಿಗೂ ದೊರೆಯಬೇಕು ಎನ್ನುವ ಕಲ್ಪನೆಯೊಂದಿಗೆ ಬೆಂಗಳೂರಿನ ಏವಿಯೇಟರ್ಸ್ ಏರ್ ರೆಸ್ಕ್ಯೂ ಕಂಪನಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ದಾವಣಗೆರೆಯಿಂದ ಮೊಟ್ಟ ಮೊದಲ ಏರ್ ಆಂಬುಲೆನ್ಸ್ ಸೇವೆ ಟೇಕಾಫ್ ಆಗಲಿದೆ ಎಂಬ ಶುಭ ಸುದ್ದಿ ಸಿಕ್ಕಿದೆ.
ಹೃದಯಾಘಾತ, ರಸ್ತೆ ಅಪಘಾತ ಸೇರಿ ಪ್ರಾಣಾಪಾಯದ ವೇಳೆ ಎದುರಾದಾಗ ವಿಶೇಷ ವೈದ್ಯಕೀಯ ಸೌಲಭ್ಯ ಹೊಂದಿರುವ ಆಸ್ಪತ್ರೆ ಗಳಿಗೆ ರೋಗಿಯನ್ನು ಕರೆದುಕೊಂಡು ಹೋಗಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಸಮಯ ಬಹಳ ಮಹತ್ವ ಪಡೆಯುತ್ತದೆ.
ಯಾವುದಾದರೂ ಖಾಸಗಿ ಹೆಲಿಕಾಪ್ಟರ್ ಸೇವೆ ಪಡೆದು ದಾವಣಗೆರೆಯಿಂದ ಬೆಂಗಳೂರಿಗೆ ಹೋಗಿ ಬರಲು ಕನಿಷ್ಠ 3ಲಕ್ಷ ರೂ. ವೆಚ್ಚವಾಗುತ್ತದೆ.ಅಷ್ಟು ಹಣ ಭರಿಸುವುದು ಎಲ್ಲರಿಗೂ ಸಾಧ್ಯವಾಗದ ಮಾತು.ಇದಕ್ಕಾಗಿಯೇ ಏವಿಯೇಟರ್ಸ್ ಏರ್ ರೆಸ್ಕ್ಯೂ ಕಂಪನಿ ಹೊಸ ಯೋಜನೆಯೊಂದನ್ನು ಜನರ ಮುಂದಿಡುತ್ತಿದೆ.
ಮೇ 5ರಂದು ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಸೇವೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು.ಅಕ್ಟೋಬರ್ ತಿಂಗಳಿಂದ ಸೇವೆ ಲಭ್ಯವಾಗಲಿದೆ.ಇದಕ್ಕಾಗಿ ಆಸಕ್ತರು ಸದಸ್ಯತ್ವ ಪಡೆಯಬೇಕಾಗುತ್ತದೆ.
ಪತಿ, ಪತ್ನಿ, 18ವರ್ಷದೊಳಗಿನ ಎರಡು ಮಕ್ಕಳನ್ನು ಒಳಗೊಂಡ ಒಂದು ಕುಟುಂಬ ಪ್ರತಿ ವರ್ಷ ಕಂಪನಿಗೆ 17,999 ರೂ. ಪಾವತಿಸಬೇಕು. ಯೊಜನೆಯ ಸದಸ್ಯತ್ವ ಪಡೆದ ಕುಟುಂಬದವರಿಗೆ ವರ್ಷದಲ್ಲಿ 3 ಬಾರಿ ಹೆಲಿಕಾಪ್ಟರ್ ಅಗತ್ಯವಿದ್ದರೂ ನೀಡಲಾಗುವುದು ಎನ್ನುತ್ತಾರೆ ಕಂಪನಿಯ ಅಧಿಕಾರಿಗಳು.
ಏವಿಯೇಟರ್ಸ್ ಏರ್ ರೆಸ್ಕ್ಯೂ ಕಂಪನಿ ಅಮೆರಿಕದ ಏರ್ಮೆಡಿಕಲ್ ಗ್ರೂಪ್ ಆಫ್ ಹೋಲ್ಡಿಂಗ್ ಕಂಪನಿಯೊಂದಿಗೆ ಸಹಭಾಗಿತ್ವ ಪಡೆದಿದೆ. ಕಂಪನಿಯು ಮೊದಲ ಹಂತದಲ್ಲಿ ತಲಾ 30ಕೋಟಿ ವೆಚ್ಚದ 3 ಹೆಲಿಕಾಪ್ಟರ್ ಖರೀದಿಸಲಿದೆ.2ನೇ ಹಂತದಲ್ಲಿ 6 ಹೆಲಿಕಾಪ್ಟರ್, ಮುಂದಿನ 5 ವರ್ಷಗಳಲ್ಲಿ 50 ಹೆಲಿಕಾಪ್ಟರ್ ಹೊಂದುವುದು ಕಂಪನಿಯ ಯೋಜನೆಯಾಗಿದೆ.













Click it and Unblock the Notifications