ಏ.30ರ ಸಾರಿಗೆ ಮುಷ್ಕರಕ್ಕೆ ಆಟೋ ಚಾಲಕರ ಬೆಂಬಲ
ಬೆಂಗಳೂರು, ಏ. 28 : ವಿವಿಧ ಕಾರ್ಮಿಕ ಸಂಘಟನೆಗಳು ಏ.30ರಂದು ಕರೆ ನೀಡಿರುವ ರಾಷ್ಟ್ರವ್ಯಾಪಿ ಒಂದು ದಿನದ ಸಾರಿಗೆ ಮುಷ್ಕರಕ್ಕೆ ಬೆಂಗಳೂರಿನ ಆಟೋ ಸಂಘಟನೆಗಳು ಬೆಂಬಲ ನೀಡಿವೆ. ಆದ್ದರಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಮತ್ತು ಆಟೋಗಳ ಸೇವೆ ನಗರದಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ 'ರಸ್ತೆ ಸಾರಿಗೆ ಸುರಕ್ಷತಾ ಮಸೂದೆ-2015'ಯನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಏ.30ರ ಗುರುವಾರ ರಾಷ್ಟ್ರವ್ಯಾಪಿ ಒಂದು ದಿನದ ಸಾರಿಗೆ ಮುಷ್ಕರಕ್ಕೆ ಕರೆ ನೀಡಿವೆ. ಒಂದು ದಿನ ಮಟ್ಟಿಗೆ ಸರ್ಕಾರಿ ಬಸ್ ಸೇವೆ ಸ್ಥಗಿತಗೊಳ್ಳಲಿದೆ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಹೇಳಿದ್ದಾರೆ. [ಏ.30ರಂದು ಬಸ್ಸಿಲ್ಲ]
ಮಸೂದೆಯ ಕರಡು ಪ್ರತಿಯ ಪ್ರಕಾರ ಚಾಲಕರು ವಾಹನವನ್ನು ಓವರ್ ಟೇಕ್ ಮಾಡುವುದು ಸೇರಿದಂತೆ ಸಣ್ಣ ತಪ್ಪುಗಳನ್ನು ಮಾಡಿದರೂ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಈ ವಿಧೇಯಕ ಜಾರಿಗೆ ಬಂದರೆ ಚಾಲಕರು ಜೈಲು ಪಾಲಾಗುತ್ತಾರೆ. ಸಾರಿಗೆ ತಜ್ಞರೊಂದಿಗೆ ಚರ್ಚಿಸದೆ ಇದನ್ನು ಜಾರಿಗೆ ತರಬಾರದು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಲಿವೆ.
ಸಾರಿಗೆ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಏ.29 ಮತ್ತು 30ರಂದು ನಡೆಯಬೇಕಾಗಿದ್ದ ಸಿಇಟಿ ಪರೀಕ್ಷೆಗಳು, ಮೇ. 12 ಮತ್ತು 13ರಂದು ನಡೆಯಲಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶ ಹೊರಡಿಸಿದೆ.
ಮುಷ್ಕರಕ್ಕೆ ಬೆಂಬಲ ನೀಡುವ ಸಂಘಟನೆಗಳು
ಏ.30ರ ಗುರುವಾರದ ಮುಷ್ಕರಕ್ಕೆ ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್, ಸಿಐಟಿಯು, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಯುನೈಟೆಡ್ ಸಂಘ, ಕನ್ನಡ ಕ್ರಿಯಾ ಸಮಿತಿ, 20 ಆಟೋ ಸಂಘಟನೆಗಳನ್ನು ಒಳಗೊಂಡ ಬೆಂಗಳೂರು ಆಟೋ ಏಕತಾ ಹೋರಾಟ ಸಮಿತಿ ಬೆಂಬಲ ನೀಡಿವೆ.
ಬೆಳಗ್ಗೆ 6 ರಿಂದ ಆಟೋಗಳಿಲ್ಲ
ಬೆಂಗಳೂರು ನಗರದಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಆಟೋಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಆಟೋ ಸಂಘಟನೆಗಳ ಪದಾಧಿಕಾರಿಗಳು ಘೋಷಿಸಿದ್ದಾರೆ. ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ಗಳು ಮುಷ್ಕರದಲ್ಲಿ ಪಾಲ್ಗೊಳ್ಳುವ ಕುರಿತು ಅಂತಿಮ ನಿರ್ಧಾರ ಪ್ರಕಟಿಸಿಲ್ಲ.
ಒಂದು ದಿನ ಸರ್ಕಾರಿ ಬಸ್ ಸಂಚಾರವಿಲ್ಲ
ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸೇರಿದಂತೆ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಒಟ್ಟು 1.20 ಲಕ್ಷ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಏ.30ರ ಬೆಳಗ್ಗೆ 6ರಿಂದ ಮೇ 1ರ ಬೆಳಗ್ಗೆ 6ರ ವರೆಗೆ ಮುಷ್ಕರ ನಡೆಯಲಿದೆ ಎಂದು ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ನ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತ ಸುಬ್ಬರಾವ್ ಹೇಳಿದ್ದಾರೆ.
ಮುಷ್ಕರ ಕೈ ಬಿಡಲು ಮನವಿ ಮಾಡುತ್ತೇವೆ
ಸಾರಿಗೆ ಸಿಬ್ಬಂದಿಗಳ ಒಂದು ದಿನದ ಮುಷ್ಕರದ ಕುರಿತು ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಕಾರ್ಮಿಕ ಸಂಘಟನೆಗಳ ಮುಖಂಡರ ಜೊತೆ ಮಾತುಕತೆ ನಡೆಸಲು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ, ಮುಷ್ಕರ ಕೈ ಬಿಡುವಂತೆ ಅವರು ಮನವಿ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಒಂದು ದಿನದ ಮುಷ್ಕರ ಏಕೆ?
ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ 'ರಸ್ತೆ ಸಾರಿಗೆ ಸುರಕ್ಷತಾ ಮಸೂದೆ-2015'ಯನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಏ.30ರ ಗುರುವಾರ ರಾಷ್ಟ್ರವ್ಯಾಪಿ ಒಂದು ದಿನದ ಸಾರಿಗೆ ಮುಷ್ಕರಕ್ಕೆ ಕರೆ ನೀಡಿವೆ. ಕರ್ನಾಟಕದಲ್ಲಿಯೂ ಇದಕ್ಕೆ ಬೆಂಬಲ ನೀಡಲಾಗುತ್ತಿದೆ.
ಖಾಸಗಿ ಬಸ್ಸುಗಳ ಸಂಚಾರ ಇರಲಿದೆ
ಏ.30ರ ಮುಷ್ಕರಕ್ಕೆ ಖಾಸಗಿ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಬೆಂಬಲ ಘೋಷಿಸಿಲ್ಲ. ಆದ್ದರಿಂದ ಅಂದು ಬಸ್ ಮತ್ತು ಟ್ಯಾಕ್ಸಿ ಸಂಚಾರ ಲಭ್ಯವಿರಲಿದೆ. ಬೆಂಗಳೂರಿನಲ್ಲಿ ಓಲಾ ಸೇರಿದಂತೆ ಇತರೆ ಟ್ಯಾಕ್ಸಿಗಳು ಮುಷ್ಕರಕ್ಕೆ ಬೆಂಬಲ ನೀಡುವ ಕುರಿತು ಅಂತಿಮ ನಿರ್ಧಾರ ಪ್ರಕಟಿಸಿಲ್ಲ.