ಮಂಗಳೂರು ಆಟೋ ಸ್ಫೋಟ ಪ್ರಕರಣ: ಉಗ್ರ ಸಂಘಟನೆಗಳೊಂದಿಗಿನ ಸಂಬಂಧದ ಬಗ್ಗೆ ತನಿಖೆ- ಸುಧಾಕರ್
ಮಂಗಳೂರು, ನ. 21: ಮಂಗಳೂರು ಸ್ಫೋಟದ ವಿಚಾರವು ಭಯೋತ್ಪಾದನೆ ಮತ್ತು ಹಿಂಸಾಚಾರದ ಭೀಕರ ಕೃತ್ಯವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ.
ಪ್ರಕರಣದ ಕುರಿತು ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಎಡಿಜಿಪಿ ಅಲೋಕ್ ಕುಮಾರ್, ಆರೋಪಿ ಶಾರಿಕ್ ಮಂಗಳೂರಿನ ಹಲವು ಭಾಗಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಎಂಬ ಸ್ಫೋಟಕ ಮಾಹಿತಿ ಬಯಲಿಗೆಳೆದಿದ್ದರು. ಇದರ ಬೆನ್ನಲ್ಲೆ ಸಚಿವ ಸುಧಾಕರ್ ಹಲವು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಕರಣವನ್ನು ಸರ್ಕಾರ ಎಲ್ಲಾ ಕೋನಗಳಿಂದ ಪರಿಶೀಲಿಸುತ್ತಿದೆ. ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯು ತಾನು ಹಿಂದೂ ಎಂದು ತೋರಿಸಿಕೊಂಡು ಆಟೋದಲ್ಲಿ ಪ್ರಯಾಣಿಸುತ್ತಿದ್ದನು. ಇದಕ್ಕಾಗಿಯೇ ನಕಲಿ ಆಧಾರ್ ಕಾರ್ಡ್ ಕೂಡ ಹೊಂದಿದ್ದ. ಆದರೆ, ಪೊಲೀಸ್ ತಂಡಗಳು ಆತ ಶಿವಮೊಗ್ಗದ ಶಾರಿಕ್ ಎಂದು ಕಂಡು ಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ.

ಮುಂದುವರಿದು "ಕೆಲವು ತಿಂಗಳ ಹಿಂದೆ ಕೊಯಮತ್ತೂರಿನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಅಲ್ಲಿಯೂ ದೇವಸ್ಥಾನದ ಬಳಿ ಸ್ಫೋಟ ನಡೆಸಲು ಯೋಜನೆ ರೂಪಿಸಿದ್ದರು. ಈ ಆರೋಪಿ ಶಾರಿಕ್ ಕೊಯಮತ್ತೂರಿನಲ್ಲಿ ಒಬ್ಬ ವ್ಯಕ್ತಿಯನ್ನು ಭೇಟಿಯಾದರು. ಕಳೆದ 2 ತಿಂಗಳಿಂದ ಪೊಲೀಸರು ಆತನ ಚಲನವಲನಗಳನ್ನು ಪತ್ತೆ ಮಾಡಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
"ಪ್ರಕರಣದ ಪ್ರತಿಯೊಂದು ಕೋನವನ್ನು ಮತ್ತು ಅಂಶವನ್ನು ತನಿಖೆ ಮಾಡಲಾಗುತ್ತಿದೆ. ಆರೋಪಿ ಶಾರಿಕ್ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳು, ನಿಷೇಧಿತ ಸಂಘಟನೆಗಳು ಅಥವಾ ಸ್ಲೀಪರ್ ಸೆಲ್ಗಳೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬುದನ್ನು ಸಹ ನಾವು ಕಂಡು ಹಿಡಿಯುತ್ತೇವೆ. ಕೇರಳದ ಗಡಿಯಲ್ಲಿರು ಕಾರಣ ಈ ಸ್ಲೀಪರ್ ಸೆಲ್ಗಳು ಈ ಪ್ರದೇಶದಲ್ಲಿ ಸಕ್ರಿಯವಾಗಿರಬಹುದು" ಎಂದು ಕೆ ಸುಧಾಕರ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಆರೋಪಿ ಶಾರಿಕ್ ಕೊಯಂಬತ್ತೂರುನಲ್ಲಿ ಇದ್ದ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಕೂಡ ಮಾಹಿತಿ ನೀಡಿದ್ದರು. "ಶಾರಿಕ್ ಕೊಯಂಬತ್ತೂರುನಲ್ಲಿ ಅರುಣ್ ಕುಮಾರ್ ಗೌಲಿ ಎಂಬುವವರ ಆಧಾರ್ ಕಾಡ್ ನಕಲಿ ಮಾಡಿಸಿಕೊಂಡಿದ್ದಾರೆ. ಅರುಣ್ ಕುಮಾರ್ ಕೊಯಂಬತ್ತೂರು ನಿವಾಸಿಯಾಗಿದ್ದು ಸುಮಾರು ವರ್ಷಗಳ ಹಿಂದೆಯೇ ಕೊಯಂಬತ್ತೂರು ತೊರೆದಿದ್ದರು. ಆಧಾರ್ ಕಾರ್ಡ್ ಫೇಕ್ ಮಾಡಿದರ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸುತ್ತೇವೆ" ಎಂದು ಮಾಹಿತಿ ನೀಡಿದ್ದರು.












Click it and Unblock the Notifications