ಕೈಮಗ್ಗದಲ್ಲಿ ಉತ್ಪಾದನೆ ಹೆಚ್ಚಿದರೆ ಆತ್ಮನಿರ್ಭರ ಭಾರತ ಸಾಧ್ಯ
ಬೆಂಗಳೂರು, ಆಗಸ್ಟ್ 05: "ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿರುವ ಕೈಮಗ್ಗಗಳಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಾಗಬೇಕು. ಆಗ ಆತ್ಮ ನಿರ್ಭರ್ ಭಾರತ್ ನಿರ್ಮಾಣವಾಗುತ್ತದೆ. ಇದಕ್ಕೆ ನೆರವಾಗಲೆಂದೇ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶುಕ್ರವಾರ ಕೈಮಗ್ಗ ಮತ್ತು ಜವಳಿ ಇಲಾಖೆಯ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಆಯೋಜಿಸಿದ್ದ '8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ' ಉದ್ಘಾಟಿಸಿ ಕೈಮಗ್ಗ ನೇಕಾರರಿಗೆ ಪ್ರಶಸ್ತಿ ಪ್ರದಾನ ಮಾಡಿ ಮುಖ್ಯಮಂತ್ರಿಗಳು ಮಾತನಾಡಿದರು.
"ಕೈಮಗ್ಗ ಕ್ಷೇತ್ರಕ್ಕೂ ವ್ಯಾಪಿಸಿರುವ ತಂತ್ರಜ್ಞಾನದ ಬಳಕೆಯಿಂದ ನೇಕಾರರ ದಣಿವು ತುಸು ಕಡಿಮೆ ಆಗಿದೆ. ಎಲೆಕ್ಟ್ರಾನಿಕ್ ಜಕಾರ್ಡ್ ನಿಂದ ಹಿಡಿದು ಬಹಳ ದೊಡ್ಡ ಪ್ರಮಾಣದ ಉತ್ಪಾದನೆ ಮಾಡುವ ಈ ಕೈಮಗ್ಗಗಳನ್ನು ನೋಡುತ್ತಿದ್ದೇವೆ. ಹಲವು ವಿನ್ಯಾಸಗಳು ಎಲೆಕ್ಟ್ರಾನಿಕ್ ಜಕಾರ್ಡ್ನಿಂದಲೇ ಆಗುತ್ತಿದ್ದು, ಉಳಿದವುಗಳನ್ನು ಕೈಯಿಂದ ಮಾಡಲಾಗುತ್ತಿದೆ" ಎಂದರು.
"ಈ ವಲಯದ ಅಭಿವೃದ್ಧಿ ಮತ್ತು ನೇಕಾರ ಭವಿಷ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಖಾದಿ, ಗ್ರಾಮೋದ್ಯೋಗ, ಕೈಮಗ್ಗಗಳಿಗೆ ಆದ್ಯತೆ ನೀಡಿದೆ. ಇದರಿಂದ ದೇಶದಲ್ಲಿ ತಯಾರಾಗುವ ಉತ್ಪನ್ನಗಳನ್ನು ದೇಶ ನಿವಾಸಿಗಳೇ ಉಪಯೋಗಿಸದರೆ ಅದರಿಂದ ಆತ್ಮನಿರ್ಭರ್ ಭಾರತ್ ನಿರ್ಮಾಣವಾಗುತ್ತದೆ" ಎಂದು ಅವರು ಹೇಳಿದರು.

ನೇಕಾರರು, ಕೈಮಗ್ಗಕ್ಕೆ ಸರ್ಕಾರ ಆದ್ಯತೆ
ಕೈಮಗ್ಗಳಲ್ಲಿ ಹೆಚ್ಚು ಉತ್ಪಾದನೆ ಆಗುವ ಮೂಲಕ ನೇಕಾರರ ಅದರ ಲಾಭ ಪಡೆಯಬೇಕು. ನೇಕಾರರ ಮಕ್ಕಳಿಗೆ ವಿದ್ಯಾ ನಿಧಿಯನ್ನು ಕಳೆದ ಜುಲೈ 28ರಂದು ಪ್ರಾರಂಭಿಸಲಾಗಿದೆ. ಸುಮಾರು 50 ಸಾವಿರಕ್ಕಿಂತ ಹೆಚ್ವು ನೇಕಾರರ ಮಕ್ಕಳು ಯೋಜನೆಯ ಲಾಭ ಪಡೆಯಲಿದ್ದಾರೆ. ಹೆಣ್ಣು ಮಕ್ಕಳಿಗೆ 8 ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಜೊತೆಗೆ ಕೈಗಾರಿಕಾ ವಲಯದಲ್ಲಿ ನೇಕಾರರ ಸಮ್ಮಾನ್ ಯೋಜನೆಯ ಮೊತ್ತವನ್ನು 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹಲವಾರು ವರ್ಷಗಳಿಂದ ಇರುವ ಬಡ್ಡಿ ರಿಯಾಯಿತಿ, ಸಾಲ ಮನ್ನಾ ಮಾಡಲಾಗಿದೆ. ಇವುಗಳ ಜತೆಗೆ ಇನ್ನೂ ಹಲವು ಯೋಜನೆಗಳನ್ನು ರೂಪಿಸುವ ಉದ್ದೇಶ ಸರ್ಕಾರ ಹೊಂದಿದೆ.

ಇಲಾಖೆ ಅಧಿಕಾರಿಗಳ ಯೋಜನೆ ಬಗ್ಗೆ ಪರಿಶೀಲಿಸಬೇಕು
ರಾಜ್ಯ ಸರ್ಕಾರವು 32 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 1.50 ರಿಂದ 10ಲಕ್ಷವರೆಗೆ ಸಾಲ ನೀಡಿಕೆ ವ್ಯವಸ್ಥೆ ಇದೆ. ಕೈಮಗ್ಗ ಕುರಿತು ಅಗತ್ಯ ತರಬೇತಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಾಲ ಸೌಲಭ್ಯಕ್ಕಾಗಿ ಕೆನರಾ ಬ್ಯಾಂಕ್ ಆಂಕರ್ ಬ್ಯಾಂಕ್ ಆಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೈಮಗ್ಗಗಳು ಆಧುನಿಕರಣ ಗೊಂಡಿವೆ. ಉತ್ಪನ್ನಗಳನ್ನು ಹೆಚ್ಚಿಸಲು ಮತ್ತು ನೇಕಾರರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ನಂತರದ ಹಂತದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳು ಯೋಜನೆಗಳು ಜನರನ್ನು ಹೇಗೆ ತಲುಪುತ್ತಿವೆ. ಅವುಗಳಿಗೆ ನೇಕಾರರಿಗೆ ಆಗುತ್ತಿರುವ ಅನುಕೂಲ ಕುರಿತು ಪರಿಶೀಲಿಸಿ ಸರ್ಕಾರದ ಗಮನಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.

ವಿಶೇಷ ಬಟ್ಟೆಗಳ ಮುಂದೆ ಗಟ್ಟಿಯಾಗಿ ಕೈಮಗ್ಗ ಉತ್ಪನ್ನ ನಿಲ್ಲಬೇಕು
ರಾಜ್ಯ ಪ್ರತಿ ಗ್ರಾಮದ ಯುವಕರ ಸಂಘಕ್ಕೆ 1.50 ಲಕ್ಷ ದಿಂದ 7.50 ಲಕ್ಷ ರೂ.ವರೆಗೆ ಸಾಲ ನೀಡುತ್ತಿದ್ದೇವೆ. ಈ ಯೋಜನೆಯನ್ನು ಕೈಮಗ್ಗ ನೇಕಾರರಿಗೆ ಜೋಡಿಸಿಕೊಂಡರೆ ದೊಡ್ಡ ಲಾಭ ಆಗಲಿದೆ. ಕೈಮಗ್ಗ ಅಥವಾ ಪವರ್ ಲೂಮ್ ವಲಯ ಅಭಿವೃದ್ಧಿ ಮಾಡಬೇಕಿದೆ. ಮಾರುಕಟ್ಟೆಯಲ್ಲಿ ವಿದೇಶಿ ಬಟ್ಟೆಗಳಿಗೆ ಪ್ರತಿಸ್ಪರ್ಧಿ ಯಾಗಿ ಗಟ್ಟಿಯಾಗಿ ಭಾರತೀಯ ಕಮಗ್ಗ ಉತ್ಪನ್ನಗಳು ನಿಂತರೆ, ನಿಜವಾಗಿಯೂ ಮಹಾತ್ಮಾ ಗಾಂಧೀಜಿ, ಪ್ರಧಾನಿ ನರೇಂದ್ರ ಮೋದಿ ಹೇಳಿದ ಆತ್ಮ ನಿರ್ಭರತೆ ಸಾಧಿಸಬಹುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಕೈ ಮಗ್ಗಗಳು ಸ್ವಾವಲಂಬನೆಯ ಸಂಕೇತ: ಸಿಎಂ
ಕೈ ಮಗ್ಗಗಳು ಸ್ವಾವಲಂಬನೆಯ ಸಂಕೇತವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕೈಮಗ್ಗ ಬಹಳ ಪ್ರಮುಖ ಪಾತ್ರ ವಹಿಸಿದೆ. ಕೈಮಗ್ಗ, ಚರಕ, ಇವೆಲ್ಲವೂ ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಪ್ರೋತ್ಸಾಹ ನೀಡಿದೆ. ಮಹಾತ್ಮಾ ಗಾಂಧೀಜಿಯವರು ನಮ್ಮ ಬಟ್ಟೆಗಳನ್ನು ನಾವೇ ತಯಾರು ಮಾಡಬೇಕೆಂದು ಕರೆ ನೀಡಿದರು. ಬ್ರಿಟಿಷರು ವ್ಯಾಪಾರ ಮಾಡಲು ಬಂದು ಬಟ್ಟೆ ಪ್ರಮುಖವಾಗಿತ್ತು. ಇಂಗ್ಲೆಂಡ್ ಮಿಲ್ ಗಳಲ್ಲಿ ತಯಾರಾಗುವ ಬಟ್ಟೆಗೆ ಪ್ರತಿರೋಧವಾಗಿ ನಮ್ಮ ಕೈಯಿಂದ ನಮ್ಮ ಬಟ್ಟೆಗಳನ್ನು ನೇಯಬೇಕೆಂಬ ಗಾಂಧೀಯವರ ಕರೆ ನೀಡದರು. ಆಗ ಕೈಮಗ್ಗಕ್ಕೆ ಜನ ಕೈಜೋಡಿಸಿದರು. ನೇಕಾರಿಕಗೆ ಅತೀ ಹೆಚ್ಚು ಜನರಿಗೆ ಉದ್ಯೋಗ ನೀಡುವ ಕ್ಷೇತ್ರವೂ ಹೌದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.












Click it and Unblock the Notifications