ಖಾನ್ ಬಂಧನದಿಂದ ಕೊಲೆ ಸಂಚಿನ ಪ್ರಕರಣಕ್ಕೆ ಮಿಂಚಿನ ವೇಗ
ಬೆಂಗಳೂರು, ಡಿಸೆಂಬರ್ 10 : ಅಸಾದುಲ್ಲಾ ಖಾನ್ ಬಂಧನದಿಂದಾಗಿ ಕರ್ನಾಟಕದ ಪೊಲೀಸ್ ಅಧಿಕಾರಿಗಳು, ಪತ್ರಕರ್ತರು ಮತ್ತು ಕೆಲವು ರಾಜಕೀಯ ಮುಖಂಡರನ್ನು ಕೊಲೆ ಮಾಡಲು ರೂಪಿಸಿದ್ದ ಸಂಚಿನ ಬಗ್ಗೆ ಮಹತ್ವ ವಿಚಾರಗಳು ಬೆಳಕಿಗೆ ಬರಲಿವೆ. ಖಾನ್ ಎನ್ಐಎ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.
ಹೈದರಾಬಾದ್ನ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಅಸಾದುಲ್ಲಾ ಖಾನ್ ಅಲಿಯಾಸ್ ಅಬು ಸೂಫಿಯಾನ್ನನ್ನು ಬೆಂಗಳೂರಿಗೆ ಕರೆತಂದಿದ್ದು, ಎನ್ಐಎ ಕೋರ್ಟ್ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದೆ. [ಉಗ್ರ ಅಸಾದುಲ್ಲಾ ಖಾನ್ NIA ವಶಕ್ಕೆ]

ಅಸಾದುಲ್ಲಾ ಖಾನ್ ಕೊಲೆ ಸಂಚು ರೂಪಿಸಿದ ಪ್ರಮುಖ ಆರೋಪಿಯಾಗಿದ್ದಾನೆ. ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ ಖಾನ್ ಹುಡುಕಾಟಕ್ಕಾಗಿ, ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಎನ್ಐಎ ಸಿಬಿಐಗೆ ಮನವಿ ಮಾಡಿತ್ತು.
ಅಕ್ಟೋಬರ್ನಲ್ಲಿ ಅಸಾದುಲ್ಲಾ ಖಾನ್ಅನ್ನು ಸೌದಿಯಲ್ಲಿ ಬಂಧಿಸಲಾಗಿತ್ತು. ಎನ್ಐಎ ಅಧಿಕಾರಿಗಳು 2002ರ ಹೈದರಾಬಾದ್ ಸ್ಫೋಟ ಮತ್ತು ಕರ್ನಾಟಕದ ಪತ್ರಕರ್ತರು ಮತ್ತು ಕೆಲವು ರಾಜಕೀಯ ಮುಖಂಡರ ಕೊಲೆ ಸಂಚಿನಲ್ಲಿ ಖಾನ್ ಪಾತ್ರವಿದೆ ಎಂದು ಸೌದಿಗೆ ದಾಖಲೆಗಳನ್ನು ನೀಡಿ, ಆತನನ್ನು ಭಾರತಕ್ಕೆ ಕರೆತಂದಿದ್ದಾರೆ.
2012ರ ಆ.29ರಂದು ಬೆಂಗಳೂರಿನ ಸಿಸಿಬಿ ಪೊಲೀಸರು ಓರ್ವ ಪತ್ರಕರ್ತ, ಓರ್ವ ವಿಜ್ಞಾನಿ ಸೇರಿ 12 ಆರೋಪಿಗಳನ್ನು ಈ ಕೊಲೆ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು. ಸಿಸಿಬಿ ಬಂಧಿಸಿದ 12 ಆರೋಪಿಗಳ ಪೈಕಿ ಪತ್ರಕರ್ತ, ವಿಜ್ಞಾನಿ ಸೇರಿ 8 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. 2014ರಲ್ಲಿ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ.
ತನಿಖೆಗೆ ಸಿಗಲಿದೆ ವೇಗ : ಕೊಲೆ ಸಂಚಿನ ಪ್ರಕರಣದ ಪ್ರಮುಖ ಆರೋಪಿ ಅಸಾದುಲ್ಲಾ ಖಾನ್ ಬಂಧನದಿಂದಾಗಿ ತನಿಖೆಗೆ ವೇಗ ಸಿಗಲಿದೆ. ಈ ಕೊಲೆ ಸಂಚಿಯಲ್ಲಿ ಹಲವು ವ್ಯಕ್ತಿಗಳು ಭಾಗಿಯಾಗಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಕೆಲವು ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಎನ್ಐಎ ಈ ಕುರಿತು ಖಾನ್ನಿಂದ ಮಾಹಿತಿ ಸಂಗ್ರಹಣೆ ಮಾಡಲಿದೆ.












Click it and Unblock the Notifications