ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಕ್ಕೆ ನಿಂತ ಬಿಜೆಪಿ ಹೈಕಮಾಂಡ್!
ಬೆಂಗಳೂರು, ಫೆ. 18: ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಡಿರುವ ಆರೋಪಗಳನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ತಳ್ಳಿ ಹಾಕಿದ್ದಾರೆ. ಆ ಮೂಲಕ ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಂತಾಗಿದೆ.
ಸಿಎಂ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕುರಿತು ಶಾಸಕ ಯತ್ನಾಳ್ ಅವರು ಗಂಭೀರ ಆರೋಪಗಳನ್ನು ಮಾಡಿದ್ದರು. ಆ ಕುರಿತು ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಅರುಣ್ ಸಿಂಗ್ ಅವರು, ಅವುಳೆಲ್ಲಾ ಸತ್ಯಕ್ಕೆ ದೂರವಾದ ಆರೋಪಗಳು. ಅವನ್ನು ತಳ್ಳಿಹಾಕುವುದು ಸೂಕ್ತ ಎಂದಿದ್ದಾರೆ.
ಇಂತಹ ಗಂಭೀರ ಆರೋಪ ಮಾಡಿರುವ ಕಾರಣದಿಂದಲೇ ಈಗಾಗಲೆ ಅವರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ. ಸೂಕ್ತ ಸಮಯದಲ್ಲಿ ಶಿಸ್ತು ಸಮಿತಿ ಕ್ರಮಕೈಗೊಳ್ಳುತ್ತದೆ. ಬಿ.ವೈ. ವಿಜಯೇಂದ್ರ ನಮ್ಮ ಪಕ್ಷದ ಉಪಾಧ್ಯಕ್ಷ. ಸಹಜವಾಗಿಯೇ ನಾವು ಉಪಾಧ್ಯಕ್ಷರನ್ನೇ ಬೆಂಬಲಿಸುತ್ತೇವೆ ಎಂದು ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಬೆಂಬಲಕ್ಕೆ ಅರುಣ್ ಸಿಂಗ್ ನಿಂತಿದ್ದಾರೆ.

ಸೋ ಕಾಲ್ಡ್ ಶಾಸಕರ ಪೃವೃತ್ತಿ ಎಲ್ಲರಿಗೂ ಗೊತ್ತಿದೆ. ಅವರ ಹೇಳಿಕೆಯನ್ನು ನಾನು ತಿರಸ್ಕರಿಸುತ್ತೇನೆ. ಅವವರು ಏನೇ ಮಾತನಾಡಿದರೂ ಅದು ತಪ್ಪು. ಬಹಳ ವರ್ಷಗಳಿಂದ ಅವರನ್ನು ಎಲ್ಲರೂ ನೋಡಿದ್ದಾರೆ. ಸುಳ್ಳು ಹೇಳಿಕೆಗಳನ್ನು ಮಾಧ್ಯಮಗಳ ಮುಂದೆ ಕೊಡುತ್ತಿದ್ದಾರೆ. ಯತ್ನಾಳ್ ಉತ್ತರವನ್ನು ಬಿಜೆಪಿ ಕೇಂದ್ರಿಯ ಶಿಸ್ತು ಸಮಿತಿ ಪರಿಶೀಲಿಸುತ್ತದೆ ಎಂದು ಶಾಸಕ ಯತ್ನಾಳ್ ಅವರ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ್ದ ಶಾಸಕ ಯತ್ನಾಳ್ ಅವರು, ಬಿಹಾರ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಹಿನ್ನಡೆಯಾಗಲಿ ಎಂದು ಬಿವೈ ವಿಜಯೇಂದ್ರ ಅವರು ಆರ್ಜೆಡಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಫಂಡಿಂಗ್ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು.












Click it and Unblock the Notifications